ಸಚಿವ ಖೂಬಾರನ್ನು ಗಾಳಿಯಲ್ಲಿ ಗುಂಡು ಹಾರಿಸಿ ಸ್ವಾಗತಿಸಿದ್ದು ತಪ್ಪು, ಎಫ್ಐಆರ್ ಮಾಡಿದ್ದೇವೆ ; ಸಚಿವ ಆರಗ

20-08-21 06:01 pm       Mangaluru Correspondent   ಕರಾವಳಿ

ಕೇಂದ್ರ ಸಚಿವ ಭಗವಂತ ಖೂಬಾ ಜನಾಶೀರ್ವಾದ ಯಾತ್ರೆಯಲ್ಲಿ ಬೆಂಬಲಿಗರು ಗಾಳಿಯಲ್ಲಿ ಗುಂಡು ಹಾರಿಸಿ, ಸ್ವಾಗತ ಕೋರಿದ ವಿಚಾರದಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಮಂಗಳೂರು, ಆಗಸ್ಟ್ 20: ಕೇಂದ್ರ ಸಚಿವ ಭಗವಂತ ಖೂಬಾ ಜನಾಶೀರ್ವಾದ ಯಾತ್ರೆಯಲ್ಲಿ ಬೆಂಬಲಿಗರು ಗಾಳಿಯಲ್ಲಿ ಗುಂಡು ಹಾರಿಸಿ, ಸ್ವಾಗತ ಕೋರಿದ ವಿಚಾರದಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಸಾರ್ವಜನಿಕವಾಗಿ ಈ ರೀತಿ ವರ್ತನೆ ತೋರಿದ್ದು ತಪ್ಪು. ಅದರ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಖಾಸಗಿ ಕಾರ್ಯ ನಿಮಿತ್ತ ಮಂಗಳೂರಿಗೆ ಆಗಮಿಸಿದ್ದ ಗೃಹ ಸಚಿವರಲ್ಲಿ ಈ ಕುರಿತು ಪ್ರಶ್ನೆ ಮಾಡಿದಾಗ, ನಮ್ಮ ಮಲೆನಾಡು ಭಾಗ ಮತ್ತು ಕೊಡಗಿನಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವ ಸಂಸ್ಕೃತಿ ಇದೆ. ಹಾಗೆಂದು ಈ ರೀತಿ ಮಾಡೋದು ಸರೀನಾ ಅಂದರೆ ಖಂಡಿತ ತಪ್ಪು ಎನ್ನುತ್ತೇನೆ. ಅಲ್ಲಿನ ಜನ ಖುಷಿಗೂ ಮಾಡುತ್ತಾರೆ, ದುಃಖದ ಸಂದರ್ಭದಲ್ಲಿಯೂ ಮಾಡುತ್ತಾರೆ. ಸಾರ್ವಜನಿಕವಾಗಿ ಈ ರೀತಿ ಮಾಡಿದ್ದು ತಪ್ಪು ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಸಿಕ್ಕಿಬಿದ್ದಿರುವ ಕನ್ನಡಿಗರನ್ನು ರಕ್ಷಿಸಿ ಕರೆತರುವ ನಿಟ್ಟಿನಲ್ಲಿ ಐಪಿಎಸ್ ಅಧಿಕಾರಿಯೊಬ್ಬರನ್ನು ನೇಮಕ ಮಾಡಲಾಗಿದೆ. ಸಿಐಡಿಯಲ್ಲಿ ಎಡಿಜಿಪಿ ಆಗಿರುವ ಉಮೇಶ್ ಕುಮಾರ್, ಈ ಹಿಂದೆ ವಿದೇಶದಲ್ಲಿ ಸಂಕಷ್ಟದಲ್ಲಿದ್ದವರನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ. ಕಷ್ಟಕ್ಕೆ ಒಳಗಾದವರು ಅವರನ್ನು ಸಂಪರ್ಕಿಸಬಹುದು. ರಾಜ್ಯದಿಂದ ಉಮೇಶ್ ಕುಮಾರ್ ನೋಡಲ್ ಅಧಿಕಾರಿ ಆಗಿರುತ್ತಾರೆ ಎಂದು ಹೇಳಿದರು.

ಮಂಗಳೂರಿನಲ್ಲಿ ಎನ್ಐಎ ಕಚೇರಿ ಸ್ಥಾಪನೆ ಮಾಡುವ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ, ಕರಾವಳಿಯಲ್ಲಿ ಕೆಲವು ವರ್ಷಗಳಿಂದ ಭಯೋತ್ಪಾದಕ ಚಟುವಟಿಕೆ ನಡೆಯುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಮಂಗಳೂರಿನಲ್ಲಿ ಎನ್ಐಎ ಕಚೇರಿ ಸ್ಥಾಪಿಸುವ ವಿಚಾರದಲ್ಲಿ ಕೇಂದ್ರದ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು. 

Karnataka Home Minister Araga Jnanendra says have appealed central govt for NIA office in Mangaluru. In order to rescue stranded people from Karnataka a Nodal officer also have been appointed.