ಪಣಂಬೂರು ಗಿಲ್ ನೆಟ್ ಬೋಟ್ ಪಲ್ಟಿ ; ನಾಪತ್ತೆಯಾಗಿದ್ದ ಮೀನುಗಾರನ ಶವ ತಣ್ಣೀರುಬಾವಿಯಲ್ಲಿ ಪತ್ತೆ !

13-09-21 11:59 am       Mangaluru Correspondent   ಕರಾವಳಿ

ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹವು ತಣ್ಣೀರುಬಾವಿ ಬೀಚ್ ಸಮೀಪ ರವಿವಾರ ರಾತ್ರಿ ವೇಳೆ ಪತ್ತೆಯಾಗಿದೆ.

ಮಂಗಳೂರು, ಸೆ.13: ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹವು ತಣ್ಣೀರುಬಾವಿ ಬೀಚ್ ಸಮೀಪ ರವಿವಾರ ರಾತ್ರಿ ವೇಳೆ ಪತ್ತೆಯಾಗಿದೆ.

ಕಸಬಾ ಬೆಂಗರೆ ನಿವಾಸಿ ಮುಹಮ್ಮದ್ ಶರೀಫ್ (35) ಎಂಬವರ ಮೃತದೇಹ ಪತ್ತೆಯಾಗಿದೆ.

ಸೆ.11ರಂದು ನಸುಕಿನಜಾವ ಮೀನುಗಾರಿಕೆಗೆ ತೆರಳಿದ್ದ ಐವರ ಪೈಕಿ ನಾಲ್ವರು ರಕ್ಷಣೆಗೊಳಗಾಗಿದ್ದರು. ಆದರೆ ಶರೀಫ್ ನಾಪತ್ತೆಯಾಗಿದ್ದರು. ಇವರಿಗಾಗಿ ಕಳೆದ ಎರಡು ದಿನಗಳಿಂದ ತೀವ್ರ ಶೋಧ ಕಾರ್ಯ ನಡೆದಿತ್ತು. ಶನಿವಾರ ಕಡಲು ಪ್ರಕ್ಷುಬ್ಧತೆಯಿಂದ ಕೂಡಿದ್ದರಿಂದ ಇಡೀ ದಿನ ಹುಡುಕಾಟ ನಡೆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ರವಿವಾರವೂ ಪತ್ತೆ ಕಾರ್ಯ ಮುಂದುವರಿದಿತ್ತು. ಸಂಜೆ ವೇಳೆ ಸ್ಥಳೀಯ ಮುಳುಗುತಜ್ಞರ ಶ್ರಮದಿಂದಾಗಿ ಕೊನೆಗೂ ಶರೀಫ್ ಅವರ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ.

ಮೀನುಗಾರ ಶರೀಫ್ ನಾಪತ್ತೆಯಾಗಿದ್ದ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸಮುದ್ರದಲ್ಲಿ ಕಬ್ಬಿಣದ ಪೈಪುಗಳು: ನಾಪತ್ತೆಯಾಗಿದ್ದ ಶರೀಫ್ ಅವರಿಗಾಗಿ ಸತತ ಎರಡು ದಿನಗಳಿಂದ ಪತ್ತೆ ಕಾರ್ಯ ನಡೆದಿತ್ತು. ಹುಡುಕಾಟಕ್ಕೆ ಸಮುದ್ರಕ್ಕೆ ಧುಮುಕಿದ ಡಿವೈಎಫ್‌ಐ ಕಾರ್ಯಕರ್ತ ಮಯ್ಯದ್ದಿ ಎಂಬವರ ಕಾಲಿಗೆ ಗಂಭೀರ ಗಾಯವಾಗಿದೆ. ಕಡಲಲ್ಲಿ ಕಬ್ಬಿಣದ ಪೈಪುಗಳು ಇದ್ದವು ಎಂದು ಆರೋಪಿಸಲಾಗಿದೆ. ಗಾಯಾಳು ಮಯ್ಯದ್ದಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Read: ಪಣಂಬೂರು ತೀರದಲ್ಲಿ ಗಿಲ್ ನೆಟ್ ಬೋಟ್ ಪಲ್ಟಿ ; ಒಬ್ಬ ಮೀನುಗಾರ ಸಮುದ್ರಪಾಲು

Panambur Gill net boat Accident missing fishermen body found in Tannirbhavi beach. The deceased has been identified as Sharrif (35).