ಮುಸ್ಲಿಂ ಧರ್ಮದ ಅವಹೇಳನಗೈದು ಭಾಷಣ ; ಚೈತ್ರಾ ವಿರುದ್ಧ ಜಾಮೀನು ರಹಿತ ಎಫ್ಐಆರ್ ದಾಖಲು

08-10-21 06:31 pm       Headline Karnataka News Network   ಕರಾವಳಿ

ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಚೈತ್ರಾ ಕುಂದಾಪುರ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಮಂಗಳೂರು, ಅ.8 :ಹಿಂದು ಜನಜಾಗೃತಿ ನೆಪದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಚೈತ್ರಾ ಕುಂದಾಪುರ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಅಕ್ಟೋಬರ್ 4ರಂದು ಸುರತ್ಕಲ್​ನಲ್ಲಿ ಬಜರಂಗದಳ, ದುರ್ಗಾವಾಹಿನಿಯಿಂದ ಆಯೋಜಿಸಲಾಗಿದ್ದ ಜನ ಜಾಗೃತಿ ಸಭೆಯಲ್ಲಿ ಚೈತ್ರಾ ಪ್ರಚೋದನಕಾರಿ ಭಾಷಣ ಮಾಡಿದ್ದನ್ನು ವಿರೋಧಿಸಿ ಹಲವು ಸಂಘಟನೆಗಳು ಆಕ್ಷೇಪಿಸಿ ದೂರು ನೀಡಿದ್ದರು. ಅಬ್ದುಲ್ ಖಾದರ್ ಎಂಬವರು ಮುಸ್ಲಿಂ ಸಮುದಾಯವನ್ನು ಅವಹೇಳನಗೈದು ನೀಡಿರುವ ಹೇಳಿಕೆ ಆಧರಿಸಿ ದೂರು ನೀಡಿದ್ದರು. ಅಬ್ದುಲ್ ಖಾದರ್ ದೂರನ್ನು ಪರಿಗಣಿಸಿ ಪೊಲೀಸರು ಐಪಿಸಿ ಸೆಕ್ಷನ್ 153 ಎ ಮತ್ತು 505/2 ಅಡಿ ಕೇಸು ದಾಖಲಿಸಿದ್ದಾರೆ. ಇವರೆಡು ಸೆಕ್ಷನ್ ಗಳೂ ಸ್ಟೇಶನ್ ಜಾಮೀನು ರಹಿತ ಆಗಿದ್ದು ಪೊಲೀಸರು ವಶಕ್ಕೆ ಪಡೆದು ಕೋರ್ಟಿಗೆ ಹಾಜರು ಪಡಿಸಬೇಕಾಗುತ್ತದೆ.‌

ಬ್ಯಾರಿಗಳು ಮೀನು ಮಾರುವವರು, ನಮ್ಮ ಅನ್ನ ತಿಂದು ಜೀವಿಸಲು ಎಷ್ಟು ಅಹಂಕಾರ. ಬಜರಂಗದಳ ಕಾರ್ಯಕರ್ತರು ಮನಸ್ಸು ಮಾಡಿದರೆ ಎರಡು ದಿನದಲ್ಲಿ ಎಲ್ಲಾ ಮುಸ್ಲಿಮ್ ಹೆಣ್ಣು ಮಕ್ಕಳನ್ನು ಹಿಂದು ಧರ್ಮಕ್ಕೆ ಮತಾಂತರ ಮಾಡುತ್ತೇವೆ. ಅಲ್ಲದೆ, ಮುಸ್ಲಿಂ ಹೆಣ್ಣು ಮಕ್ಕಳನ್ನು ಬುರ್ಖಾ ತೆಗೆಸಿ ಕುಂಕುಮ ಇಟ್ಟು ಮತಾಂತರಿಸುತ್ತೇವೆ ಎಂದು ಚೈತ್ರಾ ಕುಂದಾಪುರ ಭಾಷಣದಲ್ಲಿ ಹೇಳಿಕೆ ನೀಡಿದ್ದು ಒಂದು ಧರ್ಮವನ್ನು ಅವಹೇಳನ ಮಾಡಿದಂತೆ ಎಂಬುದಾಗಿ ಪರಿಗಣಿಸಿ, ಪೊಲೀಸರು ಕಾನೂನು ತಜ್ಞರಿಂದ ಅಭಿಪ್ರಾಯ ಪಡೆದು ಪ್ರಕರಣ ದಾಖಲಿಸಿದ್ದಾರೆ.

An FIR was lodged at the Suratkal station against Chaitra Kundapur on charges of making provocative speech.