ವೃದ್ಧ ದಂಪತಿ ಮನೆಯಲ್ಲೇ ನೇಣು ಬಿಗಿದು ಸಾವಿಗೆ ಶರಣು ; ಪರಿಸರದಲ್ಲಿ ಅಚ್ಚರಿ ಮೂಡಿಸಿದ ಕೃತ್ಯ ! 

18-10-21 02:53 pm       Mangaluru Correspondent   ಕರಾವಳಿ

ವೃದ್ಧ ದಂಪತಿ ತಮ್ಮ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದಲ್ಲಿ ನಡೆದಿದೆ. 

ಪುತ್ತೂರು, ಅ.18: ವೃದ್ಧ ದಂಪತಿ ತಮ್ಮ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದಲ್ಲಿ ನಡೆದಿದೆ. 

ಸುಬ್ರಹ್ಮಣ್ಯ ಭಟ್ಟ (84) ಮತ್ತು ಅವರ ಪತ್ನಿ ಶಾರದಾ (78) ಮೃತರು. ಇವರು ಬಡಗನ್ನೂರು ಗ್ರಾಮದ ಪಾದೆಕರ್ಯ ಎಂಬಲ್ಲಿ ಮಕ್ಕಳ ಜೊತೆ ಕೃಷಿ ಮಾಡಿಕೊಂಡು ವಾಸವಿದ್ದರು. ಮೇಲಂತಸ್ತು ಹೊಂದಿರುವ ಮನೆಯಲ್ಲಿ ಮೇಲ್ಗಡೆ ಮಗ ಮತ್ತು ಆತನ ಪತ್ನಿ ಇದ್ದರೆ, ಕೆಳಗಡೆ ಕೋಣೆಯಲ್ಲಿ ವೃದ್ಧ ದಂಪತಿ ಮಲಗುತ್ತಿದ್ದರು.‌ ನಿನ್ನೆ ರಾತ್ರಿ ಅದೇ ರೀತಿ ಕೆಳಗಡೆ ಕೋಣೆಯಲ್ಲಿ ಮಲಗಿದ್ದವರು ಇಂದು ಬೆಳಗ್ಗಿನ ಹೊತ್ತಿಗೆ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. 

ಈ ಬಗ್ಗೆ ಮೃತರ ಮಗ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು ತಂದೆ, ತಾಯಿಗೆ ವಯೋಸಹಜ ಕಾಯಿಲೆ ಇತ್ತು. ಅಲ್ಲದೆ, ಸಕ್ಕರೆ ಕಾಯಿಲೆಯೂ ಇತ್ತು. ಬಳಲುತ್ತಿದ್ದ ಕಾರಣ ಮನನೊ‌ಂದು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬೆಳಗ್ಗೆ 6 ಗಂಟೆಗೆ ಪತ್ನಿ ಎದ್ದು ನೋಡಿದಾಗ ಕೆಳಗಿನ ಅಕ್ಕಪಕ್ಕದ ಕೋಣೆಯಲ್ಲಿ ಇಬ್ಬರೂ ಪ್ರತ್ಯೇಕವಾಗಿ ನೇಣು ಹಾಕ್ಕೊಂಡಿದ್ದರು. ಈ ಸಾವಿನಲ್ಲಿ ಬೇರೆ ಯಾವುದೇ ಸಂಶಯವಿಲ್ಲ ಎಂದು ದೂರಿನಲ್ಲಿ ಹೇಳಿದ್ದಾರೆ. 

ಆದರೆ, ಸ್ಥಳೀಯವಾಗಿ ಗೌರವ ಹೊಂದಿದ್ದ ವೃದ್ಧ ದಂಪತಿ ಇಳಿ ವಯಸ್ಸಿನಲ್ಲಿ ಈ ರೀತಿ ಸಾವಿಗೆ ಶರಣಾಗಿದ್ದು ಪರಿಸರದಲ್ಲಿ ಅಚ್ಚರಿ ಮೂಡಿಸಿದೆ.

Puttur Elderly Couple commit Suicide due to health issues.