ಕೇಸರಿ ಬಗ್ಗೆ ಅವಹೇಳನ ; ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜ ಮನೆಗೆ ಬಜರಂಗದಳ ಮುತ್ತಿಗೆ ಯತ್ನ 

20-10-21 01:37 pm       Mangaluru Correspondent   ಕರಾವಳಿ

ಮಾಜಿ ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜಾ ಅವರ ನಗರದ ವೆಲೆನ್ಸಿಯಾದಲ್ಲಿರುವ ಮನೆಗೆ ಬಜರಂಗದಳದ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.

ಮಂಗಳೂರು, ಅ.20: ಮಾಜಿ ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜಾ ಅವರ ನಗರದ ವೆಲೆನ್ಸಿಯಾದಲ್ಲಿರುವ ಮನೆಗೆ ಬಜರಂಗದಳದ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಮನೆಗೆ ನುಗ್ಗಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ‌

ಕೇಸರಿ ಬಣ್ಣ ಮತ್ತು ಕೇಸರಿ ಶಾಲಿನ ಬಗ್ಗೆ ಐವನ್ ಡಿಸೋಜ ಅವಹೇಳನಕಾರಿಯಾಗಿ ಮಾತಾಡಿದ್ದಾರೆ ಎಂದು ಬಜರಂಗದಳ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿವಿ ಮಾಧ್ಯಮದ ಚರ್ಚೆಯ ಸಂದರ್ಭದಲ್ಲಿ ಐವಾನ್ ಡಿಸೋಜ, ಕೇಸರಿ ಶಾಲು ಹಾಕಿದವರು ಭಯೋತ್ಪಾದಕರು ಎಂದು ಹೇಳಿದ್ದಾರೆ ಎನ್ನಲಾಗಿದ್ದು ಈ ಬಗ್ಗೆ ಭಾರೀ  ಆಕ್ರೋಶ ಕೇಳಿಬಂದಿದೆ. 

ಇದಕ್ಕೆ ಪ್ರತೀಕಾರ ತೀರಿಸಲು ಐವಾನ್ ಡಿಸೋಜ ಅವರ ವೆಲೆನ್ಸಿಯಾದ ಮನೆಗೆ ಮುತ್ತಿಗೆ ಹಾಕಿ, ಕೇಸರಿ ಬಣ್ಣ ಬಳಿಯಲು ಬಜರಂಗದಳದ ಕಾರ್ಯಕರ್ತರು ಮುಂದಾಗಿದ್ದರು.‌ ಆದರೆ, ಮನೆಯ ಆವರಣಕ್ಕೆ ನುಗ್ಗಲು ಯತ್ನಿಸಿದ ಬಜರಂಗದಳದ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ. ಹಲವು ಕಾರ್ಯಕರ್ತರನ್ನು ರಸ್ತೆಯಲ್ಲೇ ತಡೆದು ವಶಕ್ಕೆ ಪಡೆದ ಪೊಲೀಸರು ಅಲ್ಲಿಂದ ಪಾಂಡೇಶ್ವರ ಠಾಣೆಗೆ ಒಯ್ದಿದ್ದಾರೆ. 

ಪ್ರಕರಣ ಸಂಬಂಧಿಸಿ ಐವನ್ ಡಿಸೋಜ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಬಜರಂಗದಳ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

Mangalore Bajrang Dal members protest at Congress Leader Ivan Dsouza House for remarks on kesari shawl.