ಸ್ವರ್ಣಾ ನದಿಗೆ ಈಜಾಟಕ್ಕೆ ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು ; ಶವ ಪತ್ತೆ 

20-10-21 03:06 pm       Udupi Correspondent   ಕರಾವಳಿ

ಬ್ರಹ್ಮಾವರ ಠಾಣೆ ವ್ಯಾಪ್ತಿಯಲ್ಲಿ ನದಿಗೆ ಬಿದ್ದು ಕಾಣೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಶವ ಇಂದು ಬೆಳಗ್ಗೆ ನದಿಯಲ್ಲಿ ಪತ್ತೆಯಾಗಿದೆ. 

ಉಡುಪಿ, ಅ.20: ಬ್ರಹ್ಮಾವರ ಠಾಣೆ ವ್ಯಾಪ್ತಿಯಲ್ಲಿ ನದಿಗೆ ಬಿದ್ದು ಕಾಣೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಶವ ಇಂದು ಬೆಳಗ್ಗೆ ನದಿಯಲ್ಲಿ ಪತ್ತೆಯಾಗಿದೆ. 

ಅನಾಸ್(16) ಮತ್ತು ಶ್ರೇಯಸ್ (18) ಮೃತ ವಿದ್ಯಾರ್ಥಿಗಳು. ಮಂಗಳವಾರ ಉಗ್ಗೇಲುಬೆಟ್ಟು ಮಡಿಸಾಲು ಎಂಬಲ್ಲಿ ಈಜಲೆಂದು ಸ್ವರ್ಣಾ ನದಿ ನೀರಿಗೆ ಇಳಿದಿದ್ದ ಮೂವರು ಯುವಕರು ನೀರಿನಲ್ಲಿ ಮುಳುಗಿದ್ದರು. ಈ ಪೈಕಿ ಇಬ್ಬರು ಯುವಕರು ನೀರುಪಾಲಾಗಿದ್ದರೆ, ಓರ್ವ ಬಾಲಕ ಪಾರಾಗಿ ಬಂದಿದ್ದ. 

ಆದರೆ, ನದಿಯಿಂದ ಪಾರಾಗಿ ಬಂದರೂ ಭಯದಿಂದಾಗಿ ಉಳಿದಿಬ್ಬರು ನೀರುಪಾಲಾದ ಬಗ್ಗೆ ಮಾಹಿತಿ ನೀಡಿರಲಿಲ್ಲ. ‌ಇದರಿಂದ ಮಕ್ಕಳು ಮನೆಗೆ ಬಾರದೇ ಗಾಬರಿಗೊಂಡ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ‌ಈಜಾಟಕ್ಕೆ ಹೋಗಿ ಮರಳಿದ್ದ ಬಾಲಕನ ವಿಚಾರಣೆ ವೇಳೆ ಜೊತೆಗೆ ತೆರಳಿದ್ದ ಇಬ್ಬರು ನೀರುಪಾಲಾದ ಬಗ್ಗೆ ತಿಳಿದುಬಂದಿದೆ. ‌ಹೀಗಾಗಿ ನಿನ್ನೆ ಸಂಜೆಯಿಂದ ಸ್ವರ್ಣಾ ನದಿಯಲ್ಲಿ ಹುಡುಕಾಟ ನಡೆಸಲಾಗಿತ್ತು. 

ಈಜು ಪಟು ಈಶ್ವರ್ ಸೇರಿದಂತೆ ಅಗ್ನಿಶಾಮಕ ದಳವನ್ನು ಕರೆಸಿಕೊಂಡು ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ, ಮಕ್ಕಳು ಪತ್ತೆ ಆಗಿರಲಿಲ್ಲ. ಇಂದು ಬೆಳಗ್ಗೆ ಹರಿಯುವ ನದಿಯಲ್ಲಿ ಇಬ್ಬರ ಶವ ತೇಲುತ್ತಿರುವುದು ಕಂಡುಬಂದಿದ್ದು ದಡಕ್ಕೆ ತಂದಿದ್ದಾರೆ. ‌ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Two students, Shreyas and Anas, reportedly drowned in Madisalu rivulet when swimming on Tuesday October 19. Their bodies were recovered on Wednesday October 20 morning.