ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಒಂದು ವರ್ಷದಲ್ಲಿ ನಾಲ್ವರ ಸಾವು ; ಭೂತವಾಗಿ ಕಾಡಿದ ಅ.27 ! ಕಳೆದ ವರ್ಷ ಇದೇ ದಿನ ದಂಪತಿ ಸಾವು !

27-10-21 10:16 pm       Richard, Mangaluru Correspondent   ಕರಾವಳಿ

ತೊಕ್ಕೊಟ್ಟು ಮೇಲ್ಸೇತುವೆಯಿಂದ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಉಳ್ಳಾಲ ಭಾಗದಲ್ಲಿ ಭಾರೀ ಚರ್ಚೆಯ ವಸ್ತುವಾಗಿದೆ. ಯಾಕಂದ್ರೆ, ಕಳೆದ ವರ್ಷವೂ ಇದೇ ಅಕ್ಟೋಬರ್ 27ರ ದಿನ ಮೇಲ್ಸೇತುವೆಯ ಬಳಿ ಭೀಕರ ಅಪಘಾತ ನಡೆದಿತ್ತು.

ಮಂಗಳೂರು, ಅ.27: ತೊಕ್ಕೊಟ್ಟು ಮೇಲ್ಸೇತುವೆಯಿಂದ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಉಳ್ಳಾಲ ಭಾಗದಲ್ಲಿ ಭಾರೀ ಚರ್ಚೆಯ ವಸ್ತುವಾಗಿದೆ. ಯಾಕಂದ್ರೆ, ಕಳೆದ ವರ್ಷವೂ ಇದೇ ಅಕ್ಟೋಬರ್ 27ರ ದಿನ ಮೇಲ್ಸೇತುವೆಯ ಬಳಿ ಭೀಕರ ಅಪಘಾತ ನಡೆದಿತ್ತು. ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಯುವ ದಂಪತಿ ಲಾರಿಯಡಿಗೆ ಬಿದ್ದು ಭೀಕರ ಸಾವು ಕಂಡಿದ್ದರು.

ಇಂದು ಅದೇ ದಿನ, ಅದೇ ಸಮಯಕ್ಕೆ ವ್ಯಕ್ತಿಯೊಬ್ಬ ಯಾರೂ ಊಹಿಸದ ರೀತಿಯಲ್ಲಿ ಮೇಲ್ಸೇತುವೆಯಿಂದ ಹೊರಕ್ಕೆ ಎಸೆಯಲ್ಪಟ್ಟು ಸಾವು ಕಂಡಿದ್ದಾರೆ. ಮೇಲ್ಭಾಗದಲ್ಲಿ ಯಾವುದೋ ವಾಹನ ಡಿಕ್ಕಿಯಾಗಿ ಬುಲೆಟ್ ಬೈಕಿನಲ್ಲಿ ಸಾಗುತ್ತಿದ್ದ ವ್ಯಕ್ತಿ ಮೇಲ್ಸೇತುವೆಯ ತಡೆಗೋಡೆಗೆ ತಾಗಿ, ಸವಾರ ಕೆಳಕ್ಕೆ ಎಸೆಯಲ್ಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಯಾವುದೇ ವಾಹನ ಬೈಕಿಗೆ ಡಿಕ್ಕಿಯಾಗಿದ್ದನ್ನು ಯಾರೂ ನೋಡಿದವರಿಲ್ಲ.

ಸವಾರ ಮೇಲ್ಸೇತುವೆಯಿಂದ ಕೆಳಕ್ಕೆ ಎಸೆಯಲ್ಪಟ್ಟಿದ್ದ ದೃಶ್ಯ ಅಲ್ಲಿಯೇ ಎದುರಿದ್ದ ಕಟ್ಟಡದ ಸಿಸಿಟಿವಿಯಲ್ಲಿ ದಾಖಲಾಗಿದೆ. ಅದರಲ್ಲಿ ಮೇಲ್ಭಾಗದ ದೃಶ್ಯ ಸೆರೆಯಾಗಿಲ್ಲ. ಮೇಲಿನಿಂದ ಕೆಳಕ್ಕೆ ಬೀಳುತ್ತಿರುವ ದೃಶ್ಯ ಮಾತ್ರ ಸೆರೆಯಾಗಿತ್ತು. ಆದರೆ, ಒಂದೇ ದಿನ ಈ ರೀತಿ ದುರಂತ ಸಾವು ಕಂಡ ವಿಚಾರ ಮಾತ್ರ ಜನರ ಬಾಯಲ್ಲಿ ಬೇರೆಯದ್ದೇ ರೂಪ ಪಡೆದಿದೆ. ಮೇಲ್ಸೇತುವೆ ಪ್ರತಿ ವರ್ಷ ಯಾವುದೋ ಕಾರಣಕ್ಕೆ ನರಬಲಿಯನ್ನು ಪಡೆಯುತ್ತಿದ್ಯಾ ಅನ್ನುವ ಅನುಮಾನ ಜನರಲ್ಲಿ ಉಂಟಾಗಿದೆ.

ಕಳೆದ ವರ್ಷ ಅಕ್ಟೋಬರ್ 27ರಂದು ಬೈಕಿನಲ್ಲಿ ಬರುತ್ತಿದ್ದ ರಾಯನ್ ಫೆರ್ನಾಂಡಿಸ್ (26) ಮತ್ತು ಅವರ ಪತ್ನಿ ಪ್ರಿಯಾ ಫೆರ್ನಾಂಡಿಸ್ (26) ತೊಕ್ಕೊಟ್ಟು ಮೇಲ್ಸೇತುವೆ ಕಳೆದು ಉಳ್ಳಾಲಕ್ಕೆ ತಿರುಗುವ ಯತ್ನದಲ್ಲಿದ್ದಾಗ ಲಾರಿ ಹರಿದು ಅಪಘಾತ ನಡೆದಿತ್ತು. ಇಬ್ಬರೂ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಉಳ್ಳಾಲದ ಬಂಗೇರ ಲೇನ್ ನಲ್ಲಿ ಬಾಡಿಗೆ ಮನೆ ಇದ್ದುದರಿಂದ ಮನೆಗೆ ಹಿಂತಿರುಗುತ್ತಿದ್ದಾಗ ಸಂಜೆ ವೇಳೆಗೆ ದಾರುಣ ಸಾವಿಗೀಡಾಗಿದ್ದರು. ಒಂದು ವರ್ಷದ ಬಳಿಕ ಇಂದು ಕೂಡ ಅದೇ ಸಮಯಕ್ಕೆ ಕುಂಪಲ ನಿವಾಸಿ ಸುಬ್ರಹ್ಮಣ್ಯ ಎಂಬವರು ಬುಲೆಟ್ ಬೈಕಿನಿಂದ ಹೊರಕ್ಕೆ ಎಸೆಯಲ್ಪಟ್ಟು ಸಾವು ಕಂಡಿದ್ದಾರೆ.

ಕಳೆದ ಮೇ ತಿಂಗಳ 20ರಂದು ಕಾರಿನ ಧಾವಂತಕ್ಕೆ ಡಿವೈಡರ್ ಹಾರಿ, ಇನ್ನೊಂದು ಬದಿಯಲ್ಲಿ ಸಾಗುತ್ತಿದ್ದ ತಾಯಿ – ಮಗಳಿದ್ದ ಸ್ಕೂಟರಿಗೆ ಡಿಕ್ಕಿಯಾಗಿದ್ದ ಘಟನೆ ನಡೆದಿತ್ತು. ಕಾರು ಡಿಕ್ಕಿಯಾಗಿ ಸ್ಕೂಟರ್ ಹಿಂಬದಿ ಸವಾರೆಯಾಗಿದ್ದ ಕುಂಪಲ ನಿವಾಸಿ ವಸಂತಿ ನಾಯರ್ ಎಂಬ 45 ವರ್ಷದ ಮಹಿಳೆ ಮೇಲ್ಸೇತುವೆಯಿಂದ ಹೊರಕ್ಕೆ ಎಸೆಯಲ್ಪಟ್ಟು ಇದೇ ರೀತಿ ಸಾವು ಕಂಡಿದ್ದರು. ಒಂದು ವರ್ಷದ ಅಂತರದಲ್ಲಿ ಮೇಲ್ಸೇತುವೆಯಲ್ಲಿ ನಾಲ್ಕು ಮಂದಿ ಸಾವು ಕಂಡಿದ್ದು, ಜನರ ಬಾಯಲ್ಲಿ ಶಂಕೆ, ಅನುಮಾನಗಳು ಹುತ್ತಗಟ್ಟಿವೆ.

Mangalore Thokkottu bridge Accident Horror four was killed in a year on October 27th. Newlyweds Priya, Rayan Fernandes was killed in an accident at Thokkottu bridge on October 27th, 2020, and today on the same date, the same spot another man who was on his bullet suddenly fell off the bridge and died on spot.