ಹಿಂದು- ಮುಸ್ಲಿಂ ಮದುವೆಗೆ ರೆಡಿ, ಕಾಗದ ವೈರಲ್ ಪ್ರಕರಣ ;  ವಜ್ರದೇಹಿ ಸ್ವಾಮೀಜಿ ನೇತೃತ್ವದಲ್ಲಿ ಯುವತಿ ಮನವೊಲಿಕೆ 

20-11-21 03:43 pm       Mangaluru correspondent   ಕರಾವಳಿ

ಕಳೆದ ಎರಡು ದಿನಗಳಿಂದ ವೈರಲ್ ಆಗಿದ್ದ ಹಿಂದು ಯುವತಿ ಮತ್ತು ಮುಸ್ಲಿಂ ಯುವಕನ ಮದುವೆ ವಿಚಾರದಲ್ಲಿ ಹಿಂದು ಸಂಘಟನೆಗಳ ನಾಯಕರು ಎಂಟ್ರಿ ಆಗಿದ್ದಾರೆ.

ಮಂಗಳೂರು, ನ.20: ಕಳೆದ ಎರಡು ದಿನಗಳಿಂದ ವೈರಲ್ ಆಗಿದ್ದ ಹಿಂದು ಯುವತಿ ಮತ್ತು ಮುಸ್ಲಿಂ ಯುವಕನ ಮದುವೆ ವಿಚಾರದಲ್ಲಿ ಹಿಂದು ಸಂಘಟನೆಗಳ ನಾಯಕರು ಎಂಟ್ರಿ ಆಗಿದ್ದಾರೆ. ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ನೇತೃತ್ವದಲ್ಲಿ ಹಿಂದು ಸಂಘಟನೆಗಳ ನಾಯಕರು ಮದುವೆಗೆ ರೆಡಿಯಾಗಿದ್ದ ಯುವತಿಯ ಮನೆಗೆ ತೆರಳಿ, ಮನವೊಲಿಕೆ ಮಾಡಿದ್ದಾರೆ. 

ಪಾಂಡೇಶ್ವರದ ಮನೆಗೆ ತೆರಳಿದ ಸ್ವಾಮೀಜಿ, ಯುವತಿ ಮತ್ತು ಆಕೆಯ ಹೆತ್ತವರಲ್ಲಿ ಮಾತನಾಡಿದ್ದಾರೆ. ಇತ್ತೀಚಿನ ಆಸಿಯಾ ಪ್ರಕರಣ ಸೇರಿದಂತೆ ಹತ್ತಾರು ಪ್ರಕರಣದಲ್ಲಿ ಹಿಂದು ಯುವತಿಯರನ್ನು ಪ್ರೀತಿಯ ಬಲೆಗೆ ಬೀಳಿಸಿ, ಮತಾಂತರ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆಸಿಯಾ ಪ್ರಕರಣದಲ್ಲಿ ಕಳೆದ ಎರಡು ವರ್ಷಗಳಿಂದ ತನ್ನ ಗಂಡ ಇಬ್ರಾಹಿಂ ಮನೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ, ಆಕೆಗೆ ಯಾವುದೇ ಕಡೆಯಿಂದ ನ್ಯಾಯ ಸಿಗದ ವಿಚಾರವನ್ನು ತಿಳಿಹೇಳಿದ್ದಾರೆ. 


ನಗರದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಾಗಿದ್ದ ಸಂದರ್ಭದಲ್ಲಿ ಯುವಕ- ಯುವತಿಯ ಪರಿಚಯ ಪ್ರೀತಿಗೆ ತಿರುಗಿತ್ತು. ಅದರಂತೆ, ಹಿಂದು ಯುವತಿಯನ್ನು ಕೇರಳದ ಕಣ್ಣೂರು ಜಿಲ್ಲೆಯ ನಿವಾಸಿ ಜಫರ್ ಎಂಬಾತ ಮದುವೆಯಾಗಲು ತಯಾರಿ ನಡೆದಿತ್ತು. ನ.29ರಂದು ಕಣ್ಣೂರಿನ ಬೀಚ್ ರೆಸಾರ್ಟ್ ಒಂದರಲ್ಲಿ ಮದುವೆ ರಿಸೆಪ್ಶನ್ ನಡೆಯುವ ಬಗ್ಗೆ ಆಮಂತ್ರಣ ಪತ್ರ ವೈರಲ್ ಆಗಿತ್ತು. ಯುವತಿಯ ಹೆತ್ತವರು ಮತ್ತು ಯುವಕನ ಜೊತೆಗಿದ್ದ ಆಕೆಯ ಫೋಟೋ ಕೂಡ ವೈರಲ್ ಆಗಿದ್ದು ಹಿಂದು ಸಂಘಟನೆ ಕಾರ್ಯಕರ್ತರಿಂದ ಆಕ್ರೋಶವೂ ಕೇಳಿಬಂದಿತ್ತು. 

ಇದರ ಬೆನ್ನಲ್ಲೇ, ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಸಂಘಟನೆಯ ನಾಯಕರು ವಜ್ರದೇಹಿ ಸ್ವಾಮೀಜಿ ನೇತೃತ್ವದಲ್ಲಿ ಯುವತಿ ಮನೆಗೆ ಭೇಟಿ ನೀಡಿದ್ದು, ಈ ರೀತಿಯ ಮದುವೆಗಳಿಂದ ಆಗಿರುವ ಅಪಾಯ ಮತ್ತು ಮುಸ್ಲಿಮರ ಲವ್ ಜಿಹಾದ್ ಕೃತ್ಯಗಳ ಬಗ್ಗೆ ಅರಿವು ಮೂಡಿಸಿದ್ದಾರೆ. ಯುವತಿ ಮನೆಯವರು ವಜ್ರದೇಹಿ ಸ್ವಾಮೀಜಿಗಳ ಮಾತಿಗೆ ಒಪ್ಪಿದ್ದು, ಸದ್ಯಕ್ಕೆ ಮದುವೆಯನ್ನು ಮುಂದೂಡಲು ನಿರ್ಧರಿಸಿದ್ದಾರೆ. 

ವಜ್ರದೇಹಿ ಸ್ವಾಮೀಜಿ ಜೊತೆಗೆ ವಿಎಚ್ ಪಿ ನಾಯಕರಾದ ಶರಣ್ ಪಂಪ್ವೆಲ್, ಭುಜಂಗ ಕುಲಾಲ್, ಶಿವಾನಂದ ಮೆಂಡನ್ ಸೇರಿದಂತೆ ಯುವತಿಯ ಹತ್ತಿರದ ಸಂಬಂಧಿಕರು ಇದ್ದರು. ಯುವತಿಯ ತಂದೆ ಪಾಂಡೇಶ್ವರದಲ್ಲಿ ಬೇಕರಿ ಹೊಂದಿದ್ದು, ಸ್ಥಳೀಯವಾಗಿ ಉತ್ತಮ ಹೆಸರು ಹೊಂದಿದ್ದಾರೆ. 

Hindu girl to marry Muslim boy in Mangalore, VHP and Bajarang Dal members visit girls house To convince her not to marry Muslim guy.