ಬಿಟ್ ಕಾಯಿನ್ ಹಗರಣದ ಆರೋಪಕ್ಕೀಡಾದ ಸಂಸದ ಮೌನಿಯಾಗಿದ್ದು ಯಾಕೆ? ರಾಜಿನಾಮೆ ನೀಡಿ ತನಿಖೆ ಎದುರಿಸಲಿ ; ರಮಾನಾಥ ರೈ ಆಗ್ರಹ

20-11-21 06:27 pm       Mangaluru Correspondent   ಕರಾವಳಿ

ಸಂಸದರು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ತನಿಖೆಗೆ ಸಹಕಾರ ನೀಡಬೇಕು ಎಂದು ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ರಮಾನಾಥ ರೈ ಆಗ್ರಹಿಸಿದ್ದಾರೆ.

ಮಂಗಳೂರು, ನ.20: ಬಿಟ್ ಕಾಯಿನ್ ಪ್ರಕರಣದಲ್ಲಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಹೆಸರು ಕೇಳಿಬಂದಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸುವುದಾಗಿ ರಾಜ್ಯ ಸರಕಾರ ಹೇಳ್ತಾ ಇದೆ. ಆದರೆ, ಈ ಬಗ್ಗೆ ಆರೋಪಕ್ಕೀಡಾದ ಬಿಜೆಪಿ ರಾಜ್ಯಾಧ್ಯಕ್ಷರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಿಷ್ಪಕ್ಷಪಾತ ತನಿಖೆಗಾಗಿ ಸಂಸದರು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ತನಿಖೆಗೆ ಸಹಕಾರ ನೀಡಬೇಕು ಎಂದು ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ರಮಾನಾಥ ರೈ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಮಾನಾಥ ರೈ, ಬಿಟ್ ಕಾಯಿನ್ ಹಗರಣ ಕೇವಲ ಬಿಟ್ ಕಾಯಿನ್ ಗಳನ್ನು ಮಾತ್ರ ಕದ್ದಿರುವ ಸಂಗತಿಯಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರದ ಬೊಕ್ಕಸಕ್ಕೆ ಕನ್ನ ಹಾಕಿದ ಪ್ರಕರಣ. ಜನಸಾಮಾನ್ಯರ ಜನಧನ್ ಖಾತೆ, ಗ್ಯಾಸ್ ಸಬ್ಸಿಡಿ, ಪಿಂಚಣಿ ಯೋಜನೆಗೂ ಕನ್ನ ಹಾಕಿದ್ದಾನೆ. ಇದರಲ್ಲಿ ದಕ್ಷಿಣ ಕನ್ನಡ ಸಂಸದರಿಗೆ ಕಿಕ್ ಬ್ಯಾಕ್ ನೀಡಿರುವ ಬಗ್ಗೆ ಪ್ರಧಾನ ಮಂತ್ರಿ ಕಚೇರಿಗೆ ಪತ್ರ ಬರೆಯಲಾಗಿದೆ. ಸಚಿನ್ ಮಾಮನಿ ಎಂಬ ಬಿಜೆಪಿ ಕಾರ್ಯಕರ್ತ ಈ ಬಗ್ಗೆ ಪತ್ರ ಬರೆದು ಗಮನ ಸೆಳೆಯುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಬಿಜೆಪಿ ಸರಕಾರ ಇಷ್ಟು ಗಂಭೀರ ಪ್ರಕರಣ ಆಗಿದ್ದರೂ, ತನಿಖೆ ಮಾಡುತ್ತೇವೆ ಎಂದು ಹೇಳುತ್ತಾ ನಿರ್ಲಕ್ಷ್ಯ ವಹಿಸಿದ್ದಾರೆ. ಪ್ರಧಾನ ಮಂತ್ರಿಯವರೇ ನಿರ್ಲಕ್ಷಿಸುವಂತೆ ಸೂಚಿಸಿದ್ದಾರೆಂದರೆ ಇದರ ಬಗ್ಗೆ ಏನು ಹೇಳಬೇಕು. ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟಿನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸಬೇಕು. ಪ್ರಕರಣದಲ್ಲಿ ಕಾಂಗ್ರೆಸ್, ಬಿಜೆಪಿ ಯಾರೇ ಇದ್ದರೂ, ತನಿಖೆ ಮಾಡಿಸಲಿ, ಸತ್ಯ ಹೊರಬರುತ್ತದೆ. ಆರೋಪಿಗಳಾದವರು ತಮ್ಮ ಜವಾಬ್ದಾರಿಯಿಂದ ಇಳಿದು ತನಿಖೆ ಎದುರಿಸಬೇಕು ಎಂದು ರಮಾನಾಥ ರೈ ಒತ್ತಾಯ ಮಾಡಿದ್ದಾರೆ.

ಬಿಜೆಪಿ ನಾಯಕರು ದಾಖಲೆ ತೋರಿಸಲಿ ಎನ್ನುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ, ಹಿಂದೆಲ್ಲಾ ಪ್ರಕರಣಗಳಲ್ಲಿ ಕಾಂಗ್ರೆಸ್ ಸರಕಾರ ಆರೋಪ ಮಾಡಿದವರಲ್ಲೇ ದಾಖಲೆ ಕೇಳಿತ್ತಾ.. ಬೋಫೋರ್ಸ್ ಅಥವಾ ಯಾವುದೇ ಪ್ರಕರಣಗಳಲ್ಲಿ ಪ್ರತಿಪಕ್ಷಗಳು ದಾಖಲೆ ಕೊಟ್ಟ ಬಳಿಕವೇ ತನಿಖೆ ಮಾಡಿಸಿದ್ದಾ.. ದಾಖಲೆ ಇದ್ದರೆ ಇವರಿಗೆ ಕೊಟ್ಟು ತನಿಖೆ ಮಾಡಿಸುವ ಅಗತ್ಯವೇ ಬರುವುದಿಲ್ಲ ಎಂದು ಹೇಳಿದರು. ರಾಜ್ಯ ಸರಕಾರದ ಪ್ರಭಾವಿಗಳು ಶಾಮೀಲಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ತನಿಖೆಯ ಮೇಲುಸ್ತುವಾರಿಗೆ ಒಬ್ಬರು ನ್ಯಾಯಾಧೀಶರನ್ನು ನೇಮಕ ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ. ನಾವು ಕೂಡ ಇದನ್ನೇ ಕೇಳುತ್ತಿದ್ದೇವೆ. ಈ ಜಿಲ್ಲೆಯ ಸಂಸದರ ಹೆಸರು ಬಂದಿರುವುದರಿಂದ ನಮಗೆ ಕೇಳುವ ಉತ್ತರದಾಯಿತ್ವ ಇರುತ್ತದೆ. ಕರಾವಳಿಯ ಯಾವುದೇ ರಾಜಕಾರಣಿಗಳು ಆ ರೀತಿಯ ಗಂಭೀರ ಹಗರಣಗಳಲ್ಲಿ ಭಾಗಿಯಾಗಿದ್ದಿಲ್ಲ. ಇದು ನಮ್ಮ ರಾಜಕೀಯಕ್ಕೆ ಕಪ್ಪು ಚುಕ್ಕೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿಶ್ವಾಸ್ ಕುಮಾರ್ ದಾಸ್, ಟಿ.ಕೆ.ಸುಧೀರ್, ಶಾಹುಲ್ ಹಮೀದ್, ಲುಕ್ಮಾನ್ ಬಂಟ್ವಾಳ ಮತ್ತಿತರರು ಇದ್ದರು

Mangalore Ramnath Rai slams Nalin Kumar Kateel over bitcoin scam demands resignation