ಜಿಲ್ಲಾಧಿಕಾರಿಯ ಗೌರವಕ್ಕಿಂತ ಹಿಂದು ಸಮಾಜದ ಗೌರವ ಹೆಚ್ಚಿನದ್ದು ; ಕಾರಿಂಜದ ಜನರ ಕರೆಗೆ ಓಗೊಟ್ಟು ಗಣಿಗಾರಿಕೆ ನಿಲ್ಲಿಸಿ ! 

26-11-21 11:08 am       HK news Desk   ಕರಾವಳಿ

ಕಾರಿಂಜ ಕ್ಷೇತ್ರದ ರಕ್ಷಣೆಗಾಗಿ ಹಿಂದು ಸಮಾಜದ ಮಂದಿ ಪ್ರಾಣ ತೆರುವುದಕ್ಕೂ ರೆಡಿಯಾಗಿದ್ದಾರೆ. ಅಂಥದರಲ್ಲಿ ಜಿಲ್ಲಾಧಿಕಾರಿಯ ದೂರುಗಳಿಗೆ ಬೆದರುವ ಮಾತೇ ಇಲ್ಲ.

ಮಂಗಳೂರು, ನ.26: ಕಾರಿಂಜ ಕ್ಷೇತ್ರದ ರಕ್ಷಣೆಗಾಗಿ ಹಿಂದು ಸಮಾಜದ ಮಂದಿ ಪ್ರಾಣ ತೆರುವುದಕ್ಕೂ ರೆಡಿಯಾಗಿದ್ದಾರೆ. ಅಂಥದರಲ್ಲಿ ಜಿಲ್ಲಾಧಿಕಾರಿಯ ದೂರುಗಳಿಗೆ ಬೆದರುವ ಮಾತೇ ಇಲ್ಲ. ಕ್ಷೇತ್ರದ ಹತ್ತು ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಸಕೂಡದು ಎನ್ನುವುದು ನಮ್ಮ ಆಗ್ರಹ. ಹಿಂದು ಸಮಾಜದ ಆಗ್ರಹಕ್ಕೆ ಬೆಲೆ ಕೊಟ್ಟು ಜಿಲ್ಲಾಧಿಕಾರಿ ಕ್ರಮ ಜರುಗಿಸಬೇಕು ಎಂದು ಹಿಂದು ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಒತ್ತಾಯಿಸಿದ್ದಾರೆ. 

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾವು ದೂರು ಹಿಂಪಡೆಯುವಂತೆ ಗೋಗರೆಯಲು ಬಂದಿಲ್ಲ. ಇಂಥ ಸಾವಿರ ಕೇಸುಗಳನ್ನು ಎದುರಿಸಲು ಹಿಂದು ಸಮಾಜಕ್ಕೆ ಗೊತ್ತಿದೆ. ಜಿಲ್ಲಾಧಿಕಾರಿ, ಜಿಲ್ಲಾ ದಂಡಾಧಿಕಾರಿ ಅನ್ನುವ ಗೌರವ ನಮಗೂ ಇದೆ.‌ ಆದರೆ ಜಿಲ್ಲಾಧಿಕಾರಿಯ ಗೌರವಕ್ಕಿಂತ ಹಿಂದು ಸಮಾಜದ ಗೌರವ ದೊಡ್ಡದು. ಹಿಂದು ಸಮಾಜದ ಭಾವನೆಗಳ ಮೌಲ್ಯ ಹೆಚ್ಚಿನದ್ದು.  ಜಗದೀಶ ಕಾರಂತರ ಮಾತುಗಳು ಅಲ್ಲಿನ ಹಿಂದು ಸಮಾಜದ ಪ್ರತಿಧ್ವನಿ ಅಷ್ಟೇ ಆಗಿತ್ತು. ದೂರು ನೀಡುವ ಮೂಲಕ ಜಿಲ್ಲಾಧಿಕಾರಿ ಹಿಂದುಗಳ ಧ್ವನಿಯನ್ನು ಅಡಗಿಸುವ ಯತ್ನ ಮಾಡಬಾರದು. ಜಿಲ್ಲಾಧಿಕಾರಿ ದೂರು ಹಿಂಪಡೆದು ಜನರ ಭಾವನೆಗೆ ಗೌರವ ಕೊಡಬೇಕು ಎಂದು ಹೇಳಿದರು. 

ಕಾರಿಂಜ ಕ್ಷೇತ್ರದ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ. ಇಂಥ ಜಾಗದಲ್ಲಿ ಗಣಿಗಾರಿಕೆಯ ಸ್ಫೋಟದಿಂದ ಧಕ್ಕೆ ಆಗಬಾರದು. ಗಣಿಗಾರಿಕೆಯ 28 ಸೆಂಟ್ಸ್ ಖಾಸಗಿ ವ್ಯಕ್ತಿಯದ್ದೇ ಆಗಿರಬಹುದು. ಆದರೆ, ಆ ಗಣಿಗಾರಿಕೆಯ ನೆಪದಲ್ಲಿ ಅತಿಕ್ರಮಣ ನಡೆಯುತ್ತಿದೆ. ಆಸುಪಾಸಿನ ಅರಣ್ಯ ಜಾಗದಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿ, ಅಲ್ಲಿ ಸಕ್ರಮವಾಗಿಯೇ ಗಣಿಗಾರಿಕೆ ನಡೆಸುವುದಾಗಿ ಹೇಳಬಹುದು. ಆದರೆ, ನಮ್ಮ ಒತ್ತಾಯ ಇರುವುದು ಕಾರಿಂಜ ಕ್ಷೇತ್ರ ಪರಿಸರದಲ್ಲಿ ಗಣಿಗಾರಿಕೆ ನಡೆಸಕೂಡದು ಎನ್ನೋದು. 

ಆ ಭಾಗದಲ್ಲಿ ಸಾಕಷ್ಟು ಸ್ಫೋಟಕ ಸಾಮಗ್ರಿ ಸಂಗ್ರಹ ಮಾಡಿರುವ ಬಗ್ಗೆ ಮಾಹಿತಿಯಿದೆ. ಅದೇನಾದ್ರೂ ಶಿವಮೊಗ್ಗದಲ್ಲಿ ನಡೆದ ರೀತಿ ಅಕಸ್ಮಾತ್ ಸ್ಫೋಟಗೊಂಡರೆ, ಸುತ್ತಲಿನ ನಾಲ್ಕೈದು ಕಿಮಿ ವ್ಯಾಪ್ತಿಯ ಪರಿಸರ ಧ್ವಂಸ ಆಗಬಹುದು. ‌ಈ ರೀತಿಯ ದುರಂತಕ್ಕೆ ಜಿಲ್ಲಾಧಿಕಾರಿ ಅವಕಾಶ ನೀಡಬಾರದು ಎಂದು ಹೇಳಿದರು.‌

Hindu honour is more precious than DC of Mangalore slams VHP over illegal mining in bantwal. Recently VHP leader had threatened the dc of holding his collar.