ರಕ್ಷಣಾ ಪಡೆಗಳ ಮುಖ್ಯಸ್ಥರ ಸಾವಿನ ಬಗ್ಗೆ ಸಂಭ್ರಮ, ಅವಹೇಳನ, ಕುಹಕ ; ಜಾಲತಾಣದಲ್ಲಿ ಭಾರೀ ಆಕ್ರೋಶ, ಕಠಿಣ ಕ್ರಮಕ್ಕೆ ಒತ್ತಾಯ

10-12-21 10:44 pm       HK Desk news   ಕರಾವಳಿ

ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಘಟನೆಯ ಬಗ್ಗೆ ಫೇಸ್ಬುಕ್, ವಾಟ್ಸಪ್ ಜಾಲತಾಣದಲ್ಲಿ ಕಿಡಿಗೇಡಿಗಳು ಸಂಭ್ರಮಿಸಿ, ಪೋಸ್ಟ್ ಹಾಕಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಮಂಗಳೂರು, ಡಿ.10 : ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಘಟನೆಯ ಬಗ್ಗೆ ಫೇಸ್ಬುಕ್, ವಾಟ್ಸಪ್ ಜಾಲತಾಣದಲ್ಲಿ ಕಿಡಿಗೇಡಿಗಳು ಸಂಭ್ರಮಿಸಿ, ಪೋಸ್ಟ್ ಹಾಕಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕಿಡಿಗೇಡಿಗಳ ಪೋಸ್ಟ್ ಬಗ್ಗೆ ಹಲವರು ಸ್ಕ್ರೀನ್ ಶಾಟ್ ತೆಗೆದು, ಮರು ಪೋಸ್ಟ್ ಮಾಡಿದ್ದಾರೆ. ಈ ರೀತಿಯ ಪೋಸ್ಟ್ ಗಳು ಜಾಲತಾಣದಲ್ಲಿ ವೈರಲ್ ಆಗಿದ್ದು ಪರ- ವಿರೋಧ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ವಿರೋಧ ಕೇಳಿಬರುತ್ತಿದ್ದಂತೆ ತಮ್ಮ ಪೋಸ್ಟ್ ಗಳನ್ನು ಡಿಲೀಟ್ ಮಾಡಿದ್ದಾರೆ.

ಕರಾವಳಿಯಲ್ಲಿ ಕೆಲವು ಎಡಪಂಥೀಯ ಮುಖವಾಡ ಹೊತ್ತವರು ಕೂಡ ಈ ರೀತಿಯ ಪೋಸ್ಟ್ ಮಾಡಿದ್ದಾರೆ. ಒಬ್ಬರಂತೂ, ಬಿಪಿನ್ ರಾವತ್ ಆಯ್ತು.. ದೋವಲ್ ಯಾವಾಗ ಎಂದು ಕೇಳಿದ್ದಾರೆ. ಅದಕ್ಕೆ ಇನ್ನೊಬ್ಬ ಪಾಪಿ ಚಿರಾಯು ಎಂದು ಹೇಳಿರುವ ಪೋಸ್ಟ್ ಸ್ಕ್ರೀನ್ ಶಾಟ್ ಅಂತೂ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ವೈರಲ್ ಆಗಿದೆ. ಮತ್ತೊಬ್ಬ ಬಿಪಿನ್ ರಾವತ್, ಮೋದಿ ಬಂಟ ಅನ್ನುವ ರೀತಿ ಬರೆದಿದ್ದು, ಈ ರೀತಿಯ ಸಾವು ಬಂದಿದ್ದು ಒಳ್ಳೆಯದೇ ಆಯ್ತು ಎಂದು ಹೇಳಿ ಸಂಭ್ರಮಿಸಿದ್ದಾನೆ.

ಕರಾವಳಿಯ ಪತ್ರಿಕೆಯೊಂದರ ಎಡಿಟರ್ ಆಗಿರುವ ವ್ಯಕ್ತಿಯೊಬ್ಬ ತನ್ನ ಫೇಸ್ಬುಕ್ ನಲ್ಲಿ ಬಿಪಿನ್ ರಾವತ್, ಮೋದಿ ಹೆಸರೆತ್ತದೆ ಪರೋಕ್ಷವಾಗಿ ಈತ ಮುಟ್ಟಿದ್ದೆಲ್ಲ, ಮುಟ್ಟಿದವರೆಲ್ಲ ಭಸ್ಮ, ಯಾರೋ ಹೇಳುತ್ತಿದ್ದರು, ನಿಜ ಅನ್ನಿಸುತ್ತದೆ ಈಗ ಎಂದು ಹಾಕಿದ್ದ ಪೋಸ್ಟ್ ಭಾರೀ ಆಕ್ರೋಶಕ್ಕೆ ತುತ್ತಾಗಿದೆ. ಆ ವ್ಯಕ್ತಿಯ ಹೆಸರು ಉಲ್ಲೇಖಿಸಿ ಹಲವರು ಉಗಿದು ಬರೆದಿದ್ದಾರೆ. ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಎನ್ಕೌಂಟರ್ ಮಾಡೋದಕ್ಕೂ ರೆಡಿ. ನಮ್ಮ ಬಿಜೆಪಿ ಸರಕಾರ, ಕನಿಷ್ಠ ಕೇಸು ಜಡಿಯೋದಕ್ಕೂ ನಾಲಾಯಕ್ಕು ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಮಂಗಳೂರಿನ ಬಂದರು ಠಾಣೆಯಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಜನರಲ್ ಬಿಪಿನ್ ರಾವತ್ ಮತ್ತು ಅಜಿತ್ ದೋವಲ್ ಬಗ್ಗೆ ಆಕ್ಷೇಪಾರ್ಹ ಟೀಕೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದ್ದಾರೆ. ಬಿಜೆಪಿ ಯುವಮೋರ್ಚಾ ಮಂಗಳೂರು ದಕ್ಷಿಣ ಅಧ್ಯಕ್ಷ ಸಚಿನ್ ರಾಜ್ ರೈ, ಜಿಲ್ಲಾ ವಕ್ತಾರ ಜಗದೀಶ ಶೇಣವ ನೇತೃತ್ವದಲ್ಲಿ ದೂರು ನೀಡಲಾಗಿದೆ.

ಇದೀಗ ಸಿಎಂ ಬಸವರಾಜ ಬೊಮ್ಮಾಯಿ, ಈ ಬಗ್ಗೆ ಪೊಲೀಸ್ ಇಲಾಖಾ ಮುಖ್ಯಸ್ಥರಿಗೇ ಸೂಚನೆ ನೀಡಿದ್ದಾರೆ. ಯಾರೇ ಆಗಲಿ, ಸೇನಾಧಿಕಾರಿ ಬಗ್ಗೆ ಅಗೌರವ ಸೂಚಿಸುವ ಪೋಸ್ಟ್ ಮಾಡಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಪೊಲೀಸರು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ, ನೋಡಬೇಕು.

Mangalore Offensive social media posts about Bipin Rawat’s death on Facebook goes viral. Karnataka Chief Minister Basavaraj Bommai said on Friday that “offensive tweets and social media posts” about the helicopter crash in which Chief of Defence Staff Bipin Rawat died will not be tolerated. Bipin Rawat, his wife Madhulika Rawat and 11 others died on Wednesday in the helicopter crash in the Katteri-Nanchappanchathram area of Tamil Nadu’s Coonoor district.