ವೈಫಲ್ಯ ಮುಚ್ಚಿ ಹಾಕಲು ಮತಾಂತರ ಕಾಯ್ದೆ, ಯಾಕೆ ಇವರು ಬಿಪಿನ್ ರಾವತ್ ಬಗ್ಗೆ ಟೀಕಿಸಿದವರನ್ನು ದೇಶದ್ರೋಹಿ ಎಂದಿಲ್ಲ..! ಬಿಜೆಪಿ ಮೌನ ಯಾಕೆ ?  

13-12-21 01:03 pm       HK Desk news   ಕರಾವಳಿ

ರಾಜ್ಯ ಸರಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಹೊರಟಿರುವುದನ್ನು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಯು.ಟಿ.ಖಾದರ್ ಟೀಕಿಸಿದ್ದಾರೆ.

ಮಂಗಳೂರು, ಡಿ.13: ರಾಜ್ಯ ಸರಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಹೊರಟಿರುವುದನ್ನು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಯು.ಟಿ.ಖಾದರ್ ಟೀಕಿಸಿದ್ದಾರೆ. ಮತಾಂತರ ತಡೆ ಕಾನೂನು ತರಲು ಹೊರಟಿರುವುದೇ ಒಂದು ಪೊಲಿಟಿಕಲ್ ಗಿಮಿಕ್. ಜನರ ಗಮನ ಬೇರೆಡೆ ಸೆಳೆಯಲು ಮತಾಂತರ ವಿಷಯವನ್ನು ಮುನ್ನೆಲೆಗೆ ತರಲಾಗಿದೆ. ಜನರಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸಲಾಗುತ್ತಿದೆ. ರಾಜ್ಯ ಸರಕಾರದ ವೈಫಲ್ಯವನ್ನು ಮರೆಮಾಚಲು ಬಿಜೆಪಿ ನಾಯಕರು ಮತಾಂತರದ ವಿಚಾರ ಎತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಖಾದರ್, ರಾಜ್ಯದಲ್ಲಿ ಬಡವರಿಗೆ ರೇಷನ್ ಕಾರ್ಡ್ ಸಿಗುತ್ತಿಲ್ಲ. ಬಡವರಿಗಾಗಿ ಮನೆಗಳನ್ನು ಕಟ್ಟಿಕೊಡಲು ಇವರಿಂದ ಆಗಿಲ್ಲ. ಕೋವಿಡ್ ನಿಂದ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರ ಸರಕಾರ ಪರಿಹಾರ ಕೊಡಬೇಕು ಎಂದು ಹೇಳಿದ್ದರೂ, ಅದನ್ನು ಈವರೆಗೂ ನೀಡಿಲ್ಲ. ಜಗತ್ತನ್ನೇ ಬೆಚ್ಚಿಬೀಳಿಸಿರುವ ಬಿಟ್ ಕಾಯಿನ್ ವಿವಾದದ ಬಗ್ಗೆ ತನಿಖೆ ನಡೆಸುತ್ತಿಲ್ಲ. ಆರೋಪಿಯೇ ನಾಪತ್ತೆಯಾಗಿದ್ದಾನೆ. ಬಿಜೆಪಿ ನಾಯಕರು ಶಾಮೀಲಾಗಿದ್ದಾರೆ ಎಂಬ ಆರೋಪಗಳಿದ್ದವು. ಹಾಗಾಗಿ ಪ್ರಕರಣವನ್ನೇ ಮುಚ್ಚಿ ಹಾಕಲು ನೋಡುತ್ತಿದ್ದಾರೆ.

ಇವೆಲ್ಲ ಹಗರಣ, ಸಮಸ್ಯೆಗಳ ಬಗ್ಗೆ ಜನರ ಗಮನ ಬೇರೆಡೆ ಸೆಳೆಯುವುದಕ್ಕಾಗಿ ಮತಾಂತರ ವಿಚಾರವನ್ನು ಮುನ್ನೆಲೆಗೆ ತರಲಾಗಿದೆ. ಇದೊಂದು ಅಟೆನ್ಷನ್ ಡೈವರ್ಟ್ ಮಾಡುವ ಸರಕಾರ. ಬಲವಂತದ ಮತಾಂತರಕ್ಕೆ ಯಾವ ಪಕ್ಷವೂ ಬೆಂಬಲ ನೀಡುವುದಿಲ್ಲ. ಅಂತಹ ಮತಾಂತರ ನಿಷೇಧ ಕಾಯ್ದೆ ಮೊದಲೇ ದೇಶದಲ್ಲಿದೆ. ಇವರು ಇನ್ನೇನು ಹೊಸದನ್ನು ತರಲು ಹೊರಟಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಕಳೆದ ಬಾರಿ ಗ್ರಾಮ ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಗೋಹತ್ಯಾ ನಿಷೇಧ ಕಾನೂನು ವಿಚಾರ ಮುನ್ನೆಲೆಗೆ ತರಲಾಯಿತು. ಈಗ ಮತಾಂತರ ವಿಚಾರ ಚರ್ಚೆಗೆ ತರಲಾಗುತ್ತಿದೆ. ಬಲವಂತದ ಮತಾಂತರದ ವಿಚಾರದಲ್ಲಿ ಕಠಿಣ ಕ್ರಮ ಕೈಗೊಂಡರೆ ಅದರಲ್ಲಿ ಯಾರದ್ದೂ ಆಕ್ಷೇಪ ಇಲ್ಲ. ಧಾರ್ಮಿಕ ಸ್ವಾತಂತ್ರ್ಯ ಈ ದೇಶದಲ್ಲಿದೆ. ಸ್ವಇಚ್ಛೆಯಿಂದ ಇತರೇ ಮತ, ಧರ್ಮಗಳಿಗೆ ಮತಾಂತರ ಆಗುವವರನ್ನು ತಡೆಯಲು ಆಗಲ್ಲ. ಬಲವಂತದ ಮತಾಂತರ ವಿರುದ್ಧ ಈಗಿರುವ ಕಾನೂನಿನಲ್ಲಿಯೇ ಕಠಿಣ ಕ್ರಮ ಕೈಗೊಳ್ಳಲು ಅವಕಾಶವಿದೆ. ಆದರೆ, ಇವರು ಹೊಸ ಕಾನೂನು ಬಗ್ಗೆ ಗುಲ್ಲೆಬ್ಬಿಸಿ, ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಲು ನೋಡುತ್ತಿದ್ದಾರೆ ಎಂದು ಟೀಕಿಸಿದರು.

ರಾವತ್ ಟೀಕೆಗೆ ಬಿಜೆಪಿಯವರ ಮೌನ ಯಾಕೆ ?

ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸಾವಿನ ಬಗ್ಗೆ ಸಂಭ್ರಮಿಸಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಖಾದರ್, ಬಿಪಿನ್ ರಾವತ್ ಅವರ ಸಾವನ್ನು ಕೆಲ ವಿಕೃತ ಮನಸ್ಸುಗಳು ಸಂಭ್ರಮಿಸಿವೆ. ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಬರಹ ಬರೆದು ಸಂಭ್ರಮಿಸಿದ್ದಾರೆ. ದೇಶವೇ ಶೋಕದಲ್ಲಿರುವಾಗ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸಿದ್ದಾರೆ. ಅಂಥವರನ್ನು ಪತ್ತೆಹಚ್ಚಿ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಯೋಧರು, ಸೇನೆಯ ಬಗ್ಗೆ ಟೀಕೆ ಮಾಡುವವರು ದೇಶದ್ರೋಹಿಗಳು, ದೇಶಕ್ಕೆ ಮಾರಕ. ಅಂತಹ ವ್ಯಕ್ತಿಗಳ ಮುಖವಾಡ ಕಳಚಿ ದೇಶಕ್ಕೆ ಅವರ ನಿಜರೂಪವನ್ನು ತೋರಿಸಬೇಕು. ಈ ವಿಚಾರದಲ್ಲಿ ಬಿಜೆಪಿ ಮುಖಂಡರು ಯಾಕೆ ಮೌನ ವಹಿಸಿದ್ದಾರೆ. ಬಿಪಿನ್ ರಾವತ್ ಅವರ ಸಾವನ್ನು ಸಂಭ್ರಮಿಸಿದವರನ್ನು ಯಾಕೆ ಯಾರೂ ದೇಶದ್ರೋಹಿಗಳೆಂದು ಕರೆದಿಲ್ಲ. ಯಾಕೆ ಯಾರು ಕೂಡ ಕಠಿಣ ಕ್ರಮಕ್ಕೆ ಒತ್ತಾಯಿಸಿಲ್ಲ. ಯಾಕೆ ಈವರೆಗೂ ಯಾರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗಿಲ್ಲ. ಈ ಬಗ್ಗೆ ಗೃಹ ಸಚಿವರೇ ಉತ್ತರ ನೀಡಬೇಕು ಎಂದು ಖಾದರ್ ಒತ್ತಾಯಿಸಿದರು.

Why Government is not calling those who commented on Bipin Rawat as Anti National slams UT Khader during a press meet held at congress office.