ಬೂದಿ ಮುಚ್ಚಿದ ಕೆಂಡ ಉಪ್ಪಿನಂಗಡಿ ; ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ವದಂತಿ, ನಾಲ್ಕು ತಾಲೂಕು ವ್ಯಾಪ್ತಿಗೆ 144 ಸೆಕ್ಷನ್ ವಿಸ್ತರಣೆ  

15-12-21 03:29 pm       HK Desk news   ಕರಾವಳಿ

ಉಪ್ಪಿನಂಗಡಿಯಲ್ಲಿ ನಡೆದ ಅಹಿತಕರ ಘಟನೆ ಮತ್ತು ಲಾಠಿಚಾರ್ಜ್ ಹಿನ್ನೆಲೆಯಲ್ಲಿ ಪುತ್ತೂರು ಉಪ ವಿಭಾಗ ವ್ಯಾಪ್ತಿಯಲ್ಲಿ 144 ಸೆಕ್ಷನ್ ವಿಸ್ತರಿಸಿ ಆದೇಶ ಮಾಡಲಾಗಿದೆ.

ಪುತ್ತೂರು, ಡಿ.15 : ಉಪ್ಪಿನಂಗಡಿಯಲ್ಲಿ ನಡೆದ ಅಹಿತಕರ ಘಟನೆ ಮತ್ತು ಲಾಠಿಚಾರ್ಜ್ ಹಿನ್ನೆಲೆಯಲ್ಲಿ ಪುತ್ತೂರು ಉಪ ವಿಭಾಗ ವ್ಯಾಪ್ತಿಯಲ್ಲಿ 144 ಸೆಕ್ಷನ್ ವಿಸ್ತರಿಸಿ ಆದೇಶ ಮಾಡಲಾಗಿದೆ.

ಮಂಗಳವಾರ ಉಪ್ಪಿನಂಗಡಿ ಠಾಣೆಯ ಮುಂಭಾಗದಲ್ಲಿ ಸೇರಿದ್ದ ಪಿಎಫ್ಐ ಕಾರ್ಯಕರ್ತರು, ಪೊಲೀಸರು ವಶಕ್ಕೆ ಪಡೆದ ತಮ್ಮ ಕಾರ್ಯಕರ್ತನನ್ನು ಬಿಟ್ಟು ಬಿಡಬೇಕೆಂದು ಒತ್ತಾಯಿಸಿ ಧರಣಿ ನಡೆಸಿದ್ದರು. ರಾತ್ರಿಯಾದರೂ ನೂರಾರು ಮಂದಿ ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಾ ಧರಣಿ ನಡೆಸಿದ್ದರು. ಬಳಿಕ ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ಸೆಕ್ಷನ್ ವಿಧಿಸಲಾಗಿದೆ, ಕೂಡಲೇ ಜನರು ಇಲ್ಲಿಂದ ಚದುರಬೇಕು ಎಂದು ಪೊಲೀಸರು ಮನವಿ ಮಾಡಿದರೂ, ಕಾರ್ಯಕರ್ತರು ಕದಲದೇ ಧರಣಿ ಮುಂದುವರಿಸಿದ್ದರು. ಇದರಿಂದಾಗಿ ಉಪ್ಪಿನಂಗಡಿ ಠಾಣೆಯ ಮುಂಭಾಗದಲ್ಲಿ ಉದ್ರಿಕ್ತ ವಾತಾವರಣ ನೆಲೆಯಾಗಿತ್ತು. ಕೆಲ ಕ್ಷಣಗಳಲ್ಲಿ ಕಲ್ಲು ತೂರಾಟ ನಡೆದಿದ್ದು, ಬಳಿಕ ಪೊಲೀಸರು ಲಾಠಿಚಾರ್ಜ್ ನಡೆಸಿ ಜನರನ್ನು ಚದುರಿಸುವ ಕೆಲಸ ಮಾಡಿದ್ದರು. ಈ ವೇಳೆ ಪೊಲೀಸರು ಸೇರಿದಂತೆ ಹಲವಾರು ಮಂದಿಗೆ ಗಾಯಗಳಾಗಿದ್ದವು.

ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ ತಾಲೂಕು ವ್ಯಾಪ್ತಿಯ ಹಲವೆಡೆಗಳಿಂದ ಸಾವಿರಾರು ಪಿಎಫ್ಐ ಕಾರ್ಯಕರ್ತರು ಬಂದು ಸೇರಿದ್ದರಿಂದ ಉದ್ರಿಕ್ತ ವಾತಾವರಣ ಉಂಟಾಗಿತ್ತು. ಪೊಲೀಸರ ಲಾಠಿಚಾರ್ಜ್ ಘಟನೆ ಖಂಡಿಸಿ, ಇಂದು ಪುತ್ತೂರು ಉಪ ವಿಭಾಗ ವ್ಯಾಪ್ತಿಯ ಪೊಲೀಸ್ ಠಾಣೆಗಳ ಮುಂದೆ ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂಬ ವದಂತಿ ಹರಡಿತ್ತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪುತ್ತೂರು ಸಹಾಯಕ ಕಮಿಷನರ್ ಡಾ.ಯತೀಶ್ ಉಳ್ಳಾಲ್, ಉಪ ವಿಭಾಗದ ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ ತಾಲೂಕು ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದಾರೆ.

ಡಿ.15ರಿಂದ 17ರ ಮಧ್ಯರಾತ್ರಿ ವರೆಗೆ ನಾಲ್ಕು ತಾಲೂಕು ವ್ಯಾಪ್ತಿಯಲ್ಲಿ ಸೆಕ್ಷನ್ ಜಾರಿಯಿದ್ದು, ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಜನರು ರಸ್ತೆ, ಸಾರ್ವಜನಿಕ ಸ್ಥಳ, ಸರಕಾರಿ ಕಚೇರಿ ಆವರಣದಲ್ಲಿ ಗುಂಪು ಕೂಡುವಂತಿಲ್ಲ. ಸಾರ್ವಜನಿಕ ಸಭೆ, ಸಮಾರಂಭಗಳನ್ನು ನಿಷೇಧ ಮಾಡಲಾಗಿದೆ. ಆಯುಧ ಮಾದರಿಯ ಕಲ್ಲು, ಚೂರಿ, ಭರ್ಚಿ, ದೊಣ್ಣೆ ಇತ್ಯಾದಿ ವಸ್ತುಗಳನ್ನು ಒಯ್ಯುವಂತಿಲ್ಲ. ಕೋಮು ಸೌಹಾರ್ದಕ್ಕೆ ಧಕ್ಕೆಯಾಗಬಲ್ಲ ಪ್ರದರ್ಶನ, ಘೋಷಣೆ ಮಾಡುವುದು, ಪ್ರಚೋದನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ.

ಕೊಲೆಯತ್ನ ಪ್ರಕರಣದಲ್ಲಿ ಉಪ್ಪಿನಂಗಡಿ ಪೊಲೀಸರು ಡಿ.13ರಂದು ರಾತ್ರಿ ಮಹಮ್ಮದ್ ಸಿನಾನ್ ಎಂಬಾತನನ್ನು ಬಂಧಿಸಿದ್ದು, ಅದೇ ಪ್ರಕರಣ ಸಂಬಂಧಿಸಿ ಪಿಎಫ್ಐ ಸಂಘಟನೆಯ ಕೆಲವರು ಭಾಗಿಯಾಗಿದ್ದಾರೆಂಬ ಸಂಶಯದಲ್ಲಿ ಪೊಲೀಸರು ವಿಚಾರಣೆಗಾಗಿ ಕೆಲವರನ್ನು ಕರೆಸಿದ್ದರು. ಇದನ್ನು ವಿರೋಧಿಸಿ ಸಾವಿರಾರು ಪಿಎಫ್ಐ ಕಾರ್ಯಕರ್ತರು ಉಪ್ಪಿನಂಗಡಿ ಠಾಣೆಯ ಮುಂದೆ ಜಮಾಯಿಸಿದ್ದು, ಅಹಿತಕರ ಘಟನೆಗೆ ಕಾರಣವಾಗಿದ್ದರು ಎಂಬುದಾಗಿ ಉಪ ವಿಭಾಗಾಧಿಕಾರಿ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ಉಪ್ಪಿನಂಗಡಿ ಪರಿಸರ ಸದ್ಯಕ್ಕೆ ಶಾಂತ

ಅಹಿತಕರ ಘಟನೆ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೆ, ಸೆಕ್ಷನ್ ಜಾರಿಗೊಳಿಸಿ ಸಾರ್ವಜನಿಕರು ಗುಂಪು ಕೂಡುವುದನ್ನು ತಡೆಯಲಾಗಿದೆ. ಇದೇ ವೇಳೆ, ಉಪ್ಪಿನಂಗಡಿ ಪರಿಸರ ಬೂದಿ ಮುಚ್ಚಿದ ಕೆಂಡದಂತಿದ್ದರೂ, ಮೇಲ್ನೋಟಕ್ಕೆ ಶಾಂತವಾಗಿದೆ. ಪೊಲೀಸರು ನಿರಂತರ ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದಾರೆ. ಉಪ್ಪಿನಂಗಡಿ ಪೇಟೆ, ರಾಷ್ಟ್ರೀಯ ಹೆದ್ದಾರಿ, ಪುತ್ತೂರಿಗೆ ತೆರಳುವ ದಾರಿಯ ಅಲ್ಲಲ್ಲಿ ಪೊಲೀಸರಿದ್ದು, ತಪಾಸಣೆ ನಿರತರಾಗಿದ್ದಾರೆ.

ಉಪ್ಪಿನಂಗಡಿ ಠಾಣೆ ಮುಂದೆ ಪಿಎಫ್ಐ ಧರಣಿ, ನಮಾಜ್ ಮಾಡಲು ಯತ್ನ ; ಗುಂಪುಗಳ ನಡುವೆ ಸಂಘರ್ಷ, ಕಲ್ಲು ತೂರಾಟ ! ಪೊಲೀಸರ ಲಾಠಿಚಾರ್ಜ್, 144 ಸೆಕ್ಷನ್ ಜಾರಿ, ಹಲವರಿಗೆ ಗಾಯ

PFI lati charge case in Uppinangady, 144 section imposed in Four taluks of Dakshina Kannada as PFI had planned for mass protest near police stations of Four Taluks in Dakshina Kannada. The police imposed prohibitory orders in Uppinangady after a protest by the Popular Front of India activist turned violent and police had to resort to lathi charge to disperse the large gathering on Tuesday night. Workers of the Popular Front of India had staged a protest near Uppinangady police station on Tuesday morning seeking release of three persons who were detained in connection with a riot case that was reported a few days ago.