ಪಿಎಫ್ಐ ಪ್ರತಿಭಟನೆ ಹಿನ್ನೆಲೆ ; ಮಂಗಳೂರಿನಲ್ಲಿ ಬಿಗಿ ಬಂದೋಬಸ್ತ್, ನಾಲ್ಕು ಸಿಎಆರ್ ತುಕಡಿ ನಿಯೋಜನೆ, ಮೆರವಣಿಗೆ ನಡೆಸುವಂತಿಲ್ಲ, ಧರಣಿಗೆ ಮಾತ್ರ ಅವಕಾಶ ಎಂದ ಕಮಿಷನರ್ !

17-12-21 01:33 pm       HK Desk news   ಕರಾವಳಿ

ಉಪ್ಪಿನಂಗಡಿ ಲಾಠಿಚಾರ್ಜ್ ಘಟನೆಯನ್ನು ಖಂಡಿಸಿ ಮಂಗಳೂರು ನಗರದಲ್ಲಿ ಪಿಎಫ್ಐ ಪ್ರತಿಭಟನೆ ಆಯೋಜಿಸಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

ಮಂಗಳೂರು, ಡಿ.17 : ಉಪ್ಪಿನಂಗಡಿ ಲಾಠಿಚಾರ್ಜ್ ಘಟನೆಯನ್ನು ಖಂಡಿಸಿ ಮಂಗಳೂರು ನಗರದಲ್ಲಿ ಪಿಎಫ್ಐ ಪ್ರತಿಭಟನೆ ಆಯೋಜಿಸಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

ಪಿಎಫ್ಐ ಮತ್ತು ಎಸ್ ಡಿಪಿಐ ಕಾರ್ಯಕರ್ತರು ಪಂಪ್ವೆಲ್ ನಿಂದ ಮೆರವಣಿಗೆಯಲ್ಲಿ ಬಂದು ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಆದರೆ, ಮಂಗಳೂರು ಪೊಲೀಸರು ಮೆರವಣಿಗೆ ನಡೆಸಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಅಲ್ಲದೆ, ನಗರದ ಮಿನಿ ವಿಧಾನಸೌಧ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲು ಮಾತ್ರ ಅವಕಾಶ ನೀಡಲಾಗಿದೆ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

ಹೀಗಾಗಿ ಮಂಗಳೂರು ನಗರದ ಹಂಪನಕಟ್ಟೆ ಸುತ್ತಮುತ್ತ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ನಾಲ್ಕು ಕೆಎಸ್ ಆರ್ ಪಿ, ಐದು ಸಿಎಆರ್ ತುಕಡಿ ಸೇರಿದಂತೆ ಕಮಿಷನರೇಟ್ ವ್ಯಾಪ್ತಿಯ ಪೊಲೀಸರನ್ನು ನಿಯೋಜಿಸಿದ್ದು, ಭದ್ರತೆ ಕೈಗೊಂಡಿದ್ದಾರೆ. ಕ್ಲಾಕ್ ಟವರ್, ಎಸ್ಪಿ ಕಚೇರಿ, ಕಮಿಷನರ್ ಕಚೇರಿ ಸುತ್ತಮುತ್ತ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಆದರೆ, ಪಿಎಫ್ಐ ಮತ್ತು ಎಸ್ ಡಿಪಿಐ ಕಾರ್ಯಕರ್ತರು ಪೊಲೀಸರ ಕ್ರಮದ ವಿರುದ್ಧವೇ ಪ್ರತಿಭಟನೆ ಆಯೋಜಿಸಿರುವುದರಿಂದ ಆಕ್ರೋಶಿತರು ಮೆರವಣಿಗೆ ನಡೆಸುತ್ತ ಧಿಕ್ಕಾರ ಕೂಗುತ್ತಲೇ ಬರುವ ಸಾಧ್ಯತೆಯಿದೆ.

2019ರಲ್ಲಿ ಹಿಂಸೆಗೆ ತಿರುಗಿದ್ದ ಪಿಎಫ್ಐ ಪ್ರತಿಭಟನೆ  

2019ರ ಡಿಸೆಂಬರ್ 17, 18, 19ರಂದು ಇದೇ ರೀತಿ ಎಸ್ ಡಿಪಿಐ ಮತ್ತು ಪಿಎಫ್ಐ ಕಾರ್ಯಕರ್ತರು ಸಿಎಎ, ಎನ್ ಆರ್ ಸಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಪ್ರತಿಭಟನೆಗೆ ಅವಕಾಶ ಕೊಡದೆ, 144 ಸೆಕ್ಷನ್ ಹಾಕಿ ಪ್ರತಿಭಟನೆ ಹತ್ತಿಕ್ಕುವ ಕೆಲಸ ನಡೆದಿತ್ತು. ಲಾಠಿಚಾರ್ಜ್ ಘಟನೆಗಳೂ ಹಲವು ಕಡೆ ನಡೆದಿದ್ದವು. ಡಿ.19ರಂದು ಸೆಕ್ಷನ್ ಹೊರತಾಗಿಯೂ ಜಿಲ್ಲಾಧಿಕಾರಿ ಕಚೇರಿ ಬಳಿ ಎಸ್ ಡಿಪಿಐ ಪ್ರತಿಭಟನೆ ಹಮ್ಮಿಕೊಂಡಿತ್ತು. ಯಾವುದೇ ಕಾರಣಕ್ಕೂ ಪ್ರತಿಭಟನೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಪಟ್ಟು ಹಿಡಿದಿದ್ದರು.

ಆದರೆ, ಬಂದರು ಬಳಿ ಸೇರಿದ್ದ 500ಕ್ಕೂ ಹೆಚ್ಚು ಕಾರ್ಯಕರ್ತರು ಒಮ್ಮೆಲೇ ಸ್ಟೇಟ್ ಬ್ಯಾಂಕ್ ಆವರಣಕ್ಕೆ ನುಗ್ಗಿದ್ದರಿಂದ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಜಟಾಪಟಿಗೆ ಕಾರಣವಾಗಿತ್ತು. ಪೊಲೀಸರು ಲಾಠಿಚಾರ್ಜ್ ನಡೆಸಿದರೆ, ಉದ್ರಿಕ್ತ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದರು. ಘಟನೆಯಲ್ಲಿ ಪೊಲೀಸರು ಸೇರಿ ಹಲವಾರು ಮಂದಿ ಗಾಯಗೊಂಡಿದ್ದರು. ಬಳಿಕ ಉದ್ರಿಕ್ತರು ಬಂದರು ಪೊಲೀಸ್ ಠಾಣೆಗೆ ನುಗ್ಗುತ್ತಾರೆಂದು ಪೊಲೀಸರು ಅಶ್ರುವಾಯು ಸಿಡಿಸಿದ್ದರು. ಇದೇ ವೇಳೆ, ಇಬ್ಬರು ಕಾರ್ಯಕರ್ತರು ಪೊಲೀಸರ ಗುಂಡೇಟಿನಿಂದ ಬಲಿಯಾಗಿದ್ದರು. ಆ ಘಟನೆಯ ನಂತರ ಪ್ರತಿವರ್ಷ ಪೊಲೀಸರ ಮೇಲೆ ದಾಳಿ ನಡೆಸುವ ಘಟನೆಗಳು ಡಿಸೆಂಬರ್ ತಿಂಗಳಲ್ಲಿ ಕಾಕತಾಳೀಯ ಎಂಬಂತೆ ನಡೆದಿದ್ದವು. ಕಳೆದ ಬಾರಿ ಹಾಫ್ ಲಾಕ್ಡೌನ್ ಇದ್ದರೂ, ಇಬ್ಬರು ಪೊಲೀಸರ ಮೇಲೆ ಚೂರಿ ಇರಿತದ ಘಟನೆ ನಡೆದಿತ್ತು.

PFI protest in Mangalore over laticharge in Uppinanagdy Police set up tight security all over city.