ನಂದಿಗುಡ್ಡೆ ಕೊರಗಜ್ಜನ ಕ್ಷೇತ್ರ ಅಪವಿತ್ರ ಯತ್ನ ; ಭಾರೀ ಆಕ್ರೋಶ

28-12-21 02:42 pm       Mangalore Correspondent   ಕರಾವಳಿ

ಅತ್ತಾವರ ಬಳಿಯ ನಂದಿಗುಡ್ಡೆಯ ಶ್ರೀ ಕೊರಗಜ್ಜ ಕ್ಷೇತ್ರದ ಕಾಣಿಕೆ ಡಬ್ಬಿಯ ಮೇಲೆ ಬಳಸಿದ ಕಾಂಡೋಮನ್ನು ಇರಿಸಿ ಅಪವಿತ್ರಗೊಳಿಸಿದ ಘಟನೆ ನಡೆದಿದ್ದು, ಈ ಬಗ್ಗೆ ಸ್ಥಳೀಯರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.

Photo credits : Headline Karnataka

ಮಂಗಳೂರು, ಡಿ.28 : ಅತ್ತಾವರ ಬಳಿಯ ನಂದಿಗುಡ್ಡೆಯ ಶ್ರೀ ಕೊರಗಜ್ಜ ಕ್ಷೇತ್ರದ ಕಾಣಿಕೆ ಡಬ್ಬಿಯ ಮೇಲೆ ಬಳಸಿದ ಕಾಂಡೋಮನ್ನು ಇರಿಸಿ ಅಪವಿತ್ರಗೊಳಿಸಿದ ಘಟನೆ ನಡೆದಿದ್ದು, ಈ ಬಗ್ಗೆ ಸ್ಥಳೀಯರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಇಂದು ಬೆಳಗ್ಗೆ ರಸ್ತೆ ಬದಿಯ ಕಾಣಿಕೆ ಡಬ್ಬಿಯ ಮೇಲ್ಭಾಗದಲ್ಲಿ ಕಾಂಡೋಮ್ ಕಂಡುಬಂದಿದ್ದು, ವಿಷಯ ತಿಳಿಯುತ್ತಲೇ ಸ್ಥಳದಲ್ಲಿ ಭಕ್ತರು ಜಮಾಯಿಸಿದ್ದಾರೆ. ಹಿಂದು ಸಂಘಟನೆಗಳ ಪ್ರಮುಖರು ಕೂಡ ಜಮಾಯಿಸಿದ್ದು ಕೂಡಲೇ ಆರೋಪಿಯನ್ನು ಬಂಧಿಸುವಂತೆ ಆಗ್ರಹ ಮಾಡಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದು, ಅವರಲ್ಲಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ. ನಾಲ್ಕು ತಿಂಗಳ ಹಿಂದೆ ಇದೇ ರೀತಿ ಮಂಗಳೂರಿನ ವಿವಿಧೆಡೆ ಕೊರಗಜ್ಜನ ಕಟ್ಟೆಯ ಕಾಣಿಕೆ ಡಬ್ಬಿಯ ಒಳಗಡೆ ಬಳಸಿದ ಕಾಂಡೋಮ್ ಪತ್ತೆಯಾಗಿತ್ತು. ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಯಾಗಿರಲಿಲ್ಲ. ಪೊಲೀಸರು ತನಿಖೆ ತೀವ್ರಗೊಳಿಸಿದ ನಂತರ ಈ ರೀತಿಯ ಪ್ರಕರಣ ಕಂಡುಬಂದಿರಲಿಲ್ಲ.

ಕಠಿಣ ಕ್ರಮಕ್ಕೆ ಶಾಸಕ ಕಾಮತ್ ಸೂಚನೆ

ನಂದಿಗುಡ್ಡೆ ಕೊರಗಜ್ಜನ ಕಟ್ಟೆ ಅಪವಿತ್ರಗೊಳಿಸಿರುವ ಘಟನೆಯನ್ನು ಖಂಡಿಸಿರುವ ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್, ಘಟನೆ ಬಗ್ಗೆ ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸುವ ಯಾರೇ ಆದರೂ ಕಠಿಣ ಕ್ರಮ ಜರುಗಿಸಲಾಗುತ್ತದೆ. ಶಾಂತಿಯಿಂದಿರುವ ಕರಾವಳಿಯಲ್ಲಿ ಇಂತಹ ಕೃತ್ಯಗಳ ಮೂಲಕ ಕೋಮುಗಲಭೆಗೆ ಪ್ರಚೋದಿಸುವ ಶಕ್ತಿಗಳನ್ನು ಹೆಡೆಮುರಿ ಕಟ್ಟುವಂತೆ ಪೊಲೀಸ್ ಇಲಾಖೆ ಸೂಚಿಸಿದ್ದೇನೆ ಎಂದು ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

Miscreants put condoms inside offering box of Sri Koragajja Temple at Nandi Gudda in Mangalore. Vhp demand immediate arrest of the culprits. Same cases had repeated months ago in different temples of mangalore in which the mangalore police are still not able to trace the whereabouts of the culprits.