ಪ್ರಧಾನಿಗೆ ಭದ್ರತಾ ಲೋಪ ; ಮಂಗಳೂರಿನಲ್ಲಿ ಕಾಂಗ್ರೆಸ್ ಕಚೇರಿ ಮುಂದೆ ಜಟಾಪಟಿ, ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಗೆ ಸಡ್ಡು, ತಳ್ಳಾಟ, ಹೊಯ್ ಕೈ..!

06-01-22 06:39 pm       HK Desk news   ಕರಾವಳಿ

ಪಂಜಾಬ್ ನಲ್ಲಿ ಪ್ರಧಾನಿ ಮೋದಿ ಸಂಚರಿಸುತ್ತಿದ್ದ ವಾಹನಕ್ಕೆ ಭದ್ರತೆ ಒದಗಿಸದೆ, ಲೋಪ ಎಸಗಿದ ಅಲ್ಲಿನ ಕಾಂಗ್ರೆಸ್ ಸರಕಾರದ ವಿರುದ್ಧ ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

Photo credits : Headline Karnataka

ಮಂಗಳೂರು, ಜ.6 : ಪಂಜಾಬ್ ನಲ್ಲಿ ಪ್ರಧಾನಿ ಮೋದಿ ಸಂಚರಿಸುತ್ತಿದ್ದ ವಾಹನಕ್ಕೆ ಭದ್ರತೆ ಒದಗಿಸದೆ, ಲೋಪ ಎಸಗಿದ ಅಲ್ಲಿನ ಕಾಂಗ್ರೆಸ್ ಸರಕಾರದ ವಿರುದ್ಧ ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಆದರೆ, ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ನುಗ್ಗಲು ಯತ್ನಿಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಜಟಾಪಟಿಗೆ ಕಾರಣವಾಯಿತು.

ಬಿಜೆಪಿ ಯುವಮೋರ್ಚಾ ನಗರ ಘಟಕದ ಅಧ್ಯಕ್ಷ ಸಚಿನ್ ರಾಜ್ ರೈ ನೇತೃತ್ವದಲ್ಲಿ 50ರಷ್ಟು ಮಂದಿ ಯುವಕರು ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯ ಮುಂದೆ ಜಮಾಯಿಸಿ, ಮೋದಿ ಪರವಾಗಿ ಜೈಕಾರ ಹಾಕುತ್ತಾ ದೇಶದ ಪ್ರಧಾನಿಗೆ ಭದ್ರತೆ ನೀಡಲಾಗದ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಕೂಗಿದ್ದಾರೆ. ಈ ವೇಳೆ, ಕೆಲವು ಕಾರ್ಯಕರ್ತರು ಕಾಂಗ್ರೆಸ್ ಕಚೇರಿಯ ಮೆಟ್ಟಲು ಹತ್ತಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದ್ದಾರೆ. ಬಂದೋಬಸ್ತ್ ಬಂದಿದ್ದ ಕದ್ರಿ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಮನವೊಲಿಸಿ, ನಿಮ್ಮದೇ ಸರಕಾರ ಇದ್ದು ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸ ಮಾಡಬೇಡಿ. ಕಾಂಗ್ರೆಸ್ ಕಚೇರಿಗೆ ನುಗ್ಗುವುದು ಸರಿಯಲ್ಲ ಎನ್ನುತ್ತಾ ಹಿಂದಕ್ಕೆ ತೆರಳುವಂತೆ ಪ್ರಯತ್ನಪಟ್ಟಿದ್ದಾರೆ.

ಆದರೆ ಪೊಲೀಸರ ಮನವೊಲಿಕೆಗೆ ಬಗ್ಗದ ಬಿಜೆಪಿ ಕಾರ್ಯಕರ್ತರು ಮೋದಿ ಪರ ಜೈಕಾರ ಕೂಗುತ್ತಾ ನುಗ್ಗಿ ಬಂದಿದ್ದಾರೆ. ಇದೇ ವೇಳೆ, ಕಾಂಗ್ರೆಸ್ ಕಚೇರಿಯ ಒಳಗಿಂದ ಪಕ್ಷದ ಬಾವುಟ ಹಿಡಿದು ಹೊರಬಂದ ಒಬ್ಬ ಕಾರ್ಯಕರ್ತ, ಬಿಜೆಪಿ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದ್ದಾನೆ. ಮೋದಿ ಪರ ಜೈಕಾರ ಹಾಕಿದ್ದಕ್ಕೆ ಪ್ರತಿಯಾಗಿ ಡೌನ್ ಡೌನ್ ಮೋದಿ ಎಂದು ಘೋಷಣೆ ಕೂಗಿದ್ದಾನೆ. ಅಷ್ಟಾಗುತ್ತಿದ್ದಂತೆ ದೂರದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಕೂಡ ಜಮಾಯಿಸಿದ್ದು, ಎರಡೂ ಗುಂಪಿನ ನಡುವೆ ಜಟಾಪಟಿ ನಡೆದಿದೆ. ಪೊಲೀಸರ ಮಧ್ಯೆಯೇ ತೀವ್ರ ತಳ್ಳಾಟ, ನೂಕಾಟ ನಡೆದಿದ್ದು, ಹೊಯ್ ಕೈ ಆಗುವಷ್ಟರ ಮಟ್ಟಿಗೆ ಹೋಗಿದೆ. ನಾವು ಸತ್ತರೂ ಕಾಂಗ್ರೆಸ್ ಕಚೇರಿಗೆ ನುಗ್ಗಲು ಬಿಡುವುದಿಲ್ಲ. ನೀವು ಒಳಗೆ ಬಂದು ನೋಡಿ ಎನ್ನುತ್ತಾ ಕಾಂಗ್ರೆಸ್ ಕಾರ್ಯಕರ್ತರು ಧಮಕಿ ಹಾಕಿದ್ದಾರೆ.

ಇದರಿಂದ ಕ್ರುದ್ಧರಾದ ಬಿಜೆಪಿ ಯುವಕರು ಕೂಡ ನೂಕಾಟ ನಡೆಸಿದ್ದಾರೆ. ನಡುವೆ ಇದ್ದ ಪೊಲೀಸರು ಎರಡು ಗುಂಪಿನ ಗಲಾಟೆ ನಿಲ್ಲಿಸಲು ಹರಸಾಹಸ ಪಟ್ಟಿದ್ದಾರೆ. ಕೊನೆಗೆ ಕಾರ್ಯಕರ್ತರು ಗುರಾಯಿಸುತ್ತಾ ಪೊಲೀಸರನ್ನು ತಳ್ಳಾಡುತ್ತಾ ದೂರ ಸರಿದಿದ್ದಾರೆ. ಕಾಂಗ್ರೆಸ್ ಪರವಾಗಿ ಸ್ಥಳೀಯ ಕಾರ್ಪೊರೇಟರುಗಳು ಸ್ಥಳಕ್ಕಾಗಮಿಸಿದ್ದು, ಕಾರ್ಯಕರ್ತರಿಗೆ ಸಾಥ್ ನೀಡಿದ್ದಾರೆ. ಬಿಜೆಪಿಯಿಂದ ಯಾವುದೇ ನಾಯಕರು ಸ್ಥಳಕ್ಕೆ ಬಂದಿರಲಿಲ್ಲ. ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ ಶೇಣವ ದೂರದಲ್ಲಿ ನಿಂತು ನೋಡುತ್ತಿದ್ದರು. ಮೋದಿ ಪರ ಜೈಕಾರ ಹಾಕಿ, ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಮಾಡಲು ಹೋಗಿ ಬಿಜೆಪಿಯವರೇ ಧಿಕ್ಕಾರ ಕೇಳಿಸಿಕೊಂಡು ಬಂದಿದ್ದಾರೆ.

Mangalore Clash erupts between BJP and Congress members near congress office over lapse of security to PM in Punjab. The BJP Yuva Morcha members tried to enter the congress office after which class erupted between both the parties.