ಸಿದ್ದರಾಮಯ್ಯ ಐವಾನ್ ಮನೆಯಲ್ಲಿ ಹಂದಿ ಮಾಂಸ ತಿನ್ನುವಾಗ, ದಿನೇಶ್ ಮಟ್ಟು ಕುದ್ರೋಳಿಯನ್ನು ನಾರಾಯಣ ಗುರುಗಳ ಗೋರಿ ಎಂದಾಗ ಅವಮಾನ ಆಗಿಲ್ಲವೇ..?  

22-01-22 04:13 pm       Mangalore Correspondent   ಕರಾವಳಿ

ಅಂದು ಕುದ್ರೋಳಿ ಕ್ಷೇತ್ರದ ದಸರಾ ಕಾರ್ಯಕ್ರಮಕ್ಕೆ ಬಾರದೇ ಐವಾನ್ ಡಿಸೋಜ ಮನೆಯಲ್ಲಿ ಹಂದಿ ಮಾಂಸ ತಿಂದು, ಕೆಂಪು ನೀರು ಕುಡಿದು ಅಲ್ಲಿಂದಲೇ ಹೋಗಿದ್ದ ಸಿದ್ದರಾಮಯ್ಯರಿಗೆ ಈಗ ನಾರಾಯಣ ಗುರು ನೆನಪಾಗಿದ್ದಾರೆ.

ಮಂಗಳೂರು, ಜ.22 : ಅಂದು ಕುದ್ರೋಳಿ ಕ್ಷೇತ್ರದ ದಸರಾ ಕಾರ್ಯಕ್ರಮಕ್ಕೆ ಬಾರದೇ ಐವಾನ್ ಡಿಸೋಜ ಮನೆಯಲ್ಲಿ ಹಂದಿ ಮಾಂಸ ತಿಂದು, ಕೆಂಪು ನೀರು ಕುಡಿದು ಅಲ್ಲಿಂದಲೇ ಹೋಗಿದ್ದ ಸಿದ್ದರಾಮಯ್ಯರಿಗೆ ಈಗ ನಾರಾಯಣ ಗುರು ನೆನಪಾಗಿದ್ದಾರೆ. ಅಂದು ಗೋವಿನ ಮಾಂಸ ತಿನ್ನುತ್ತೇನೆ ಎಂದು ಘಂಟಾಘೋಷ ಮಾಡಿದಾಗ ನಾರಾಯಣ ಗುರುಗಳ ನೆನಪಾಗಿಲ್ಲ. ಮತಾಂತರದ ವಿರುದ್ಧ ಹೋರಾಟ ರೂಪಿಸಿದ್ದ ನಾರಾಯಣ ಗುರುಗಳ ನೆನಪು ಕಾಂಗ್ರೆಸ್ ನಾಯಕರಿಗೆ ಮೊನ್ನೆ ಬಿಜೆಪಿ ಸರಕಾರ ಮತಾಂತರ ವಿರುದ್ಧ ಕಾನೂನು ತರುವಾಗ ಬರಲಿಲ್ಲ ಎಂದು ಕಿಯೋನಿಕ್ಸ್ ಸಂಸ್ಥೆಯ ಅಧ್ಯಕ್ಷ, ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಹರಿಹಾಯ್ದಿದ್ದಾರೆ.

ನಾರಾಯಣ ಗುರುಗಳ ಸ್ತಬ್ಧಚಿತ್ರ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ. ನಾರಾಯಣ ಗುರುಗಳ ಹೆಸರು ಮುಂದಿಟ್ಟು ಕರಾವಳಿಯಲ್ಲಿ ಪ್ರಬಲವಾಗಿರುವ ಬಿಲ್ಲವ ಸಮುದಾಯವನ್ನು ಒಡೆಯಲು ಯತ್ನಿಸುತ್ತಿದ್ದಾರೆ. ಕೇರಳದ ಕಮ್ಯುನಿಸ್ಟ್ ಸರಕಾರವೂ ರಾಜಕೀಯ ದುರುದ್ದೇಶ ಇಟ್ಟುಕೊಂಡು ನಾರಾಯಣ ಗುರುಗಳಿಗೆ ಅಪಮಾನ ಆಗಿದೆ ಎಂದು ಗುಲ್ಲೆಬ್ಬಿಸುವ ಕೆಲಸ ಮಾಡಿದೆ. ಆದರೆ, ಅಲ್ಲಿನ ಯಾವುದೇ ಕಾಂಗ್ರೆಸ್ ನಾಯಕರು ಈ ಬಗ್ಗೆ ಹೇಳಿಕೆ ನೀಡಿಲ್ಲ. ಕಮ್ಯುನಿಸ್ಟ್ ನಾಯಕರು ರಾಜಕೀಯ ಉದ್ದೇಶದಿಂದ ಹೇಳಿಕೆ ನೀಡುತ್ತಿದ್ದಾರೆ ಎಂಬುದು ಅಲ್ಲಿನ ಕಾಂಗ್ರೆಸಿಗರಿಗೆ ಗೊತ್ತಿದೆ. ಹಾಗಾಗಿ ಈ ಬಗ್ಗೆ ಮಾತನಾಡಿಲ್ಲ.

ಆದರೆ, ಕರ್ನಾಟಕದಲ್ಲಿ ಸಿದ್ದರಾಮಯ್ಯ, ಪರಮೇಶ್ವರ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕರು ನಾರಾಯಣ ಗುರುಗಳ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರ ಸರಕಾರ ನಾರಾಯಣ ಗುರುಗಳ ಬದಲಿಗೆ ಶಂಕರಾಚಾರ್ಯರ ಸ್ತಬ್ಧಚಿತ್ರ ಮಾಡಬೇಕೆಂದು ಹೇಳಿದ್ದೇ ಆಗಿದ್ದರೆ, ಕಾಂಗ್ರೆಸ್ ನಾಯಕರು ಧಮ್ ಇದ್ದರೆ ಅದಕ್ಕೆ ದಾಖಲೆ ಬಿಡುಗಡೆ ಮಾಡಲಿ. ಇವರಿಗೆ ನಾರಾಯಣ ಗುರುಗಳ ಹೆಸರು ತೆಗೆಯಲು ಯೋಗ್ಯತೆ ಇಲ್ಲ, ನಾರಾಯಣ ಗುರುಗಳ ತತ್ವ, ಸಿದ್ಧಾಂತ ಪಾಲನೆ ಮಾಡದವರು ಅವರ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಬಿಲ್ಲವರನ್ನು ಒಡೆಯುವ ಕೆಲಸ ಮಾಡಿದರೆ ನಾರಾಯಣ ಗುರುಗಳು ಕಾಂಗ್ರೆಸಿಗರಿಗೆ ಬೆಂಕಿಯಾಗಲಿದ್ದಾರೆ ಎಂದು ಹೇಳಿದರು.

ಕರಾವಳಿಯ ಬಿಲ್ಲವರು ಜಾತಿವಾದಿಗಳಲ್ಲ. ರಾಷ್ಟ್ರೀಯವಾದಿಗಳು. ದೇಶ ಮುಖ್ಯ, ಜಾತಿಯಲ್ಲ ಎಂದುಕೊಂಡವರು. ಕೋಟಿ ಚೆನ್ನಯರ ವಂಶಸ್ಥರು ಎಂದು ಹೇಳಿದ ಹರಿಕೃಷ್ಣ ಬಂಟ್ವಾಳ್, ಜನಾರ್ದನ ಪೂಜಾರಿಯವರು ನಾರಾಯಣ ಗುರುಗಳ ಸ್ತಬ್ಧಚಿತ್ರದ ಮೆರವಣಿಗೆ ಮಾಡುವುದಕ್ಕೆ ಬಿಜೆಪಿ ಬೆಂಬಲಿಸುತ್ತದೆ. ಆದರೆ ಪೂಜಾರಿಯವರು ನಾರಾಯಣ ಗುರುಗಳ ತತ್ವದಂತೆ ಯಾವುದೇ ಪಕ್ಷದ ಪರವಾಗಿ ಮಾಡಬಾರದು. ಕಾಂಗ್ರೆಸ್ ಪತಾಕೆ ಹಾರದೇ, ಹಳದಿ ಬಾವುಟದಡಿ ಮೆರವಣಿಗೆ ಮಾಡುವುದಾದರೆ ಬಿಜೆಪಿ ಬೆಂಬಲ ನೀಡುತ್ತದೆ. ಆದರೆ ಪೂಜಾರಿಯವರ ಉದ್ದೇಶವನ್ನು ಕಾಂಗ್ರೆಸಿಗರು ಹೈಜಾಕ್ ಮಾಡಬಾರದು ಎಂದು ಹೇಳಿದರು.

ನಾರಾಯಣ ಗುರುಗಳ ಗೋರಿ ಎಂದಿದ್ದರು ದಿನೇಶ್ ಮಟ್ಟು

ಕಾಂಗ್ರೆಸ್ ನಾಯಕರು ನಾರಾಯಣ ಗುರುಗಳಿಗೆ ಎಷ್ಟು ಬೆಲೆ ಕೊಟ್ಟಿದ್ದಾರೆ ಎನ್ನುವುದು ಗೊತ್ತಿದೆ. ಸಿದ್ದರಾಮಯ್ಯ ಸರಕಾರ ಇದ್ದಾಗ ಮಾಧ್ಯಮ ಸಲಹೆಗಾರನಾಗಿದ್ದ ದಿನೇಶ್ ಅಮೀನ್ ಮಟ್ಟು ಮಂಗಳೂರಿಗೆ ಬಂದಿದ್ದಾಗ, ಕುದ್ರೋಳಿ ಕ್ಷೇತ್ರವನ್ನು ನಾರಾಯಣ ಗುರುಗಳಿಗೆ ಕಟ್ಟಿದ ಗೋರಿ ಎಂದು ಟೀಕಿಸಿದ್ದರು. ನಾರಾಯಣ ಗುರುಗಳೇ ಕೇರಳದಿಂದ ಬಂದು ಬಿಲ್ಲವರು, ಈಳವರು ಹಿಂದುಳಿದವರಿಗಾಗಿ ಕಟ್ಟಿದ ದೇವಸ್ಥಾನವನ್ನು ಅವರಿಗೆ ಕಟ್ಟಿದ ಗೋರಿ ಎಂದು ಜರೆದಾಗ, ಕಾಂಗ್ರೆಸಿಗರಿಗೆ ಅದು ಅವಮಾನ ಎನಿಸಲಿಲ್ಲ. ಈಗ ಮೋದಿ ನಾರಾಯಣ ಗುರುಗಳಿಗೆ ಅವಮಾನ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಹಿಂದೆ 60 ವರ್ಷ ಕಾಂಗ್ರೆಸ್ ಸರಕಾರ ಇದ್ದಾಗ ಎಷ್ಟು ಬಾರಿ ನಾರಾಯಣ ಗುರುಗಳ ಟ್ಯಾಬ್ಲೋ ಮಾಡಿದೆ. ಈಗ ಯಾಕೆ ಒಮ್ಮೆಲೇ ಇವರಿಗೆ ಗುರುಗಳ ಬಗ್ಗೆ ನೆನಪಾಗಿದೆ ಎಂದರೆ, ಚುನಾವಣೆ ಹತ್ತಿರ ಬರುತ್ತಿದೆ ಎಂದು ಬಿಲ್ಲವರನ್ನು ಒಡೆಯುವುದಕ್ಕಾಗಿ ರಾಜಕೀಯ ಮಾಡುತ್ತಿದ್ದಾರೆ. ಇದರಿಂದ ಯಾವುದೇ ಸಾಧನೆ ಮಾಡಲು ಅಸಾಧ್ಯ ಎಂದು ಹರಿಕೃಷ್ಣ ಬಂಟ್ವಾಳ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ರವಿಶಂಕರ ಮಿಜಾರ್, ಜಗದೀಶ ಶೇಣವ, ರಾಧಾಕೃಷ್ಣ ಮತ್ತಿತರರು ಇದ್ದರು.

Siddaramaiah ate Pig meat at Ivans house now he realizes about Narayan Guru slams BJP leader Harikrishna Bantwal.