ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಭೀಕರ ಹತ್ಯೆ, ಗ್ರಾಹಕರ ಸೋಗಿನಲ್ಲಿ ಬಂದು ಹೊಟೇಲಿನಲ್ಲೇ ಕೃತ್ಯ

05-07-22 02:31 pm       HK News Desk   ಕ್ರೈಂ

ಸರಳ ವಾಸ್ತು ಹೆಸರಲ್ಲಿ ರಾಜ್ಯದಾದ್ಯಂತ ಖ್ಯಾತಿ ಪಡೆದಿದ್ದ ಚಂದ್ರಶೇಖರ್ ಗುರೂಜಿ (58) ಅವರನ್ನು ಹುಬ್ಬಳ್ಳಿಯ ಹೊಟೇಲ್ ಒಂದರಲ್ಲಿ ಇಬ್ಬರು ಆಗಂತುಕರು ಬರ್ಬರವಾಗಿ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾರೆ.

ಹುಬ್ಬಳ್ಳಿ, ಜುಲೈ 5: ಸರಳ ವಾಸ್ತು ಹೆಸರಲ್ಲಿ ರಾಜ್ಯದಾದ್ಯಂತ ಖ್ಯಾತಿ ಪಡೆದಿದ್ದ ಚಂದ್ರಶೇಖರ್ ಗುರೂಜಿ (58) ಅವರನ್ನು ಹುಬ್ಬಳ್ಳಿಯ ಹೊಟೇಲ್ ಒಂದರಲ್ಲಿ ಇಬ್ಬರು ಆಗಂತುಕರು ಬರ್ಬರವಾಗಿ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾರೆ.

ಹುಬ್ಬಳ್ಳಿಯ ಉಣಕಲ್ ನಲ್ಲಿರುವ ಪ್ರೆಸಿಡೆಂಟ್ ಹೊಟೇಲ್ ನಲ್ಲಿ ಗುರೂಜಿ ಇಂದು ವಾಸ್ತು ವ್ಯವಹಾರ ನಿಮಿತ್ತ ಉಳಿದುಕೊಂಡಿದ್ದರು. ಈ ವೇಳೆ, ಇಬ್ಬರು ಗ್ರಾಹಕರ ಸೋಗಿನಲ್ಲಿ ಹೊಟೇಲಿಗೆ ಬಂದಿದ್ದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮೊದಲಿಗೆ ಒಬ್ಬಾತ ಬಂದು ಮಾತನಾಡುತ್ತಿದ್ದಾಗಲೇ ಇನ್ನೊಬ್ಬ ವ್ಯಕ್ತಿ ಬಂದು ಕಾಲಿಗೆ ಅಡ್ಡ ಬಿದ್ದಿದ್ದಾನೆ. ಅಲ್ಲಿಂದ ಏಳುತ್ತಲೇ ಚೂರಿ ತೆಗೆದು ತಿವಿದಿದ್ದಾನೆ. ಇಬ್ಬರೂ ಕೂಡ ಯದ್ವಾತದ್ವಾ ಚೂರಿಯಿಂದ ಹಲ್ಲೆ ಮಾಡಿದ್ದಾರೆ. ಹೊಟೇಲ್ ಸಿಬಂದಿ ನೋಡುತ್ತಿದ್ದಾಗಲೇ ಕೃತ್ಯ ನಡೆದಿತ್ತು. ಹತ್ಯೆ ಮಾಡಿರುವುದು ಕೃತ್ಯದ ಬಳಿಕ ಮೂವರು ಯುವಕರು ಹೊಟೇಲಿನಿಂದ ಪರಾರಿಯಾಗಿದ್ದು ಸಿಸಿಟಿವಿಯಲ್ಲಿ ದಾಖಲಾಗಿದೆ.

ಗುರೂಜಿಯಿಂದ ಸಲಹೆ ಪಡೆದು ಮೋಸ ಹೋಗಿದ್ದು, ಅದೇ ಚಿಂತೆಯಲ್ಲಿ ಇಂದು ಹೊಟೇಲಿಗೆ ನುಗ್ಗಿ ಹತ್ಯೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಹಂತಕರು ಹುಬ್ಬಳ್ಳಿ ಅಥವಾ ಉತ್ತರ ಕರ್ನಾಟಕದ ವ್ಯಕ್ತಿಗಳೇ ಆಗಿದ್ದಾರೆ ಅನ್ನುವ ಮಾಹಿತಿಗಳಿವೆ. ಇಂದು ಗ್ರಾಹಕರ ರೀತಿಯಲ್ಲೇ ಗುರೂಜಿಯನ್ನು ಭೇಟಿ ಮಾಡಿದ್ದು, ಮಾತನಾಡುತ್ತಿದ್ದಾಗಲೇ ಚೂರಿ ತೆಗೆದು ಯದ್ವಾತದ್ವಾ ಇರಿದು ಹಾಕಿದ್ದಾರೆ. ಸ್ಥಳದಲ್ಲೇ ಚಂದ್ರಶೇಖರ್ ಗುರೂಜಿ ಸಾವು ಕಂಡಿದ್ದಾರೆ.  

ನಾಲ್ಕು ವರ್ಷಗಳ ಹಿಂದೆ ಸರಳ ವಾಸ್ತು ಹೆಸರಲ್ಲಿ ಚಾನೆಲ್ ಆರಂಭಿಸಿದ್ದ ಗುರೂಜಿ, ಆನಂತರ ಅದನ್ನು ನಿಲ್ಲಿಸಿದ್ದರು. ಬಹಳಷ್ಟು ಹಣ ಮಾಡಿಕೊಂಡಿದ್ದ ಅವರು ಸಿಂಗಾಪುರದಲ್ಲಿ ನೆಲೆಸಿದ್ದರು. ಆಬಳಿಕ ಮುಂಬೈ, ಬೆಂಗಳೂರಿನಲ್ಲಿಯೂ ವಾಸ್ತವ್ಯ ಹೂಡಿದ್ದರು. ರಾಜ್ಯ, ಹೊರ ರಾಜ್ಯಗಳಲ್ಲಿಯೂ ಅವರಿಗೆ ಅಭಿಮಾನಿಗಳಿದ್ದರು.

ಚಂದ್ರಶೇಖರ್ ವಿರೂಪಾಕ್ಷಪ್ಪ ಮೂಲತಃ ಬಾಗಲಕೋಟೆ ಜಿಲ್ಲೆಯವರು. ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಮಾಡಿದ್ದರು. ಮೊದಲಿಗೆ ಮುಂಬೈಗೆ ಹೋಗಿ ಗುತ್ತಿಗೆದಾರರಾಗಿ ಕೆಲಸ ಆರಂಭಿಸಿದ್ದರು. ಅಲ್ಲಿ ಆರು ವರ್ಷಗಳ ಕೆಲಸ ಮಾಡಿದ ಬಳಿಕ ಸಿಂಗಾಪುರಕ್ಕೆ ತೆರಳಿದ್ದ ಅವರು, ಅಲ್ಲಿಯೇ ವಾಸ್ತುಶಾಸ್ತ್ರದ ಬಗ್ಗೆ ಅಧ್ಯಯನ ಮಾಡಿದ್ದರು. ಆನಂತರ, ಮುಂಬೈಗೆ ಬಂದು ವಾಸ್ತುಶಾಸ್ತ್ರದ ಕಚೇರಿ ತೆರೆದಿದ್ದರು. ಬಳಿಕ ಬೆಂಗಳೂರು, ಹುಬ್ಬಳ್ಳಿಯಲ್ಲೂ ವಾಸ್ತುಶಾಸ್ತ್ರ ಹೇಳಿಕೊಡುವ ಕಚೇರಿ ತೆರೆದಿದ್ದರು. ಆದರೆ ಇತ್ತೀಚೆಗೆ ಕೋವಿಡ್ ಬಳಿಕ ಭಾರೀ ನಷ್ಟಕ್ಕೆ ಒಳಗಾಗಿದ್ದರು ಎನ್ನಲಾಗಿತ್ತು. ವಾಸ್ತುಶಾಸ್ತ್ರದ ಬಗ್ಗೆ ಅವರದೇ ಚಿಂತನೆಗಳ ಮೂಲಕ ರಾಜ್ಯದಲ್ಲಿ ಬಹಳಷ್ಟು ಪ್ರಸಿದ್ಧಿ ಪಡೆದಿದ್ದರು.

Saral Vaastu fame Dr Chandrashekhar Guruji brutally murdered in Hubli in the broad daylight, here on Tuesday. According to the CCTV footage accessed, two anonymous persons who had entered the hotel disguised as devotees of Guruji had pulled out a dragger, stabbed repeatedly, and escaped. As per the sources, he is said to have died on spot, due to heavy blood loss.