ಮರೋಳಿ ; ನಿಂತಿದ್ದ ಟಿಪ್ಪರ್ ಲಾರಿಗೆ ಆಟೋ ಡಿಕ್ಕಿಯಾಗಿ ಚಾಲಕ ಸಾವು

07-10-20 11:59 am       Mangalore Correspondent   ಕ್ರೈಂ

ನಿಂತಿದ್ದ ಟಿಪ್ಪರ್ ಲಾರಿಗೆ ಆಟೋ ರಿಕ್ಷಾ ಡಿಕ್ಕಿಯಾಗಿ ಆಟೋ ಚಾಲಕ ಸ್ಥಳದಲ್ಲೇ ಸಾವು, ಮರೋಳಿಯಲ್ಲಿ ನಡೆದ ಘಟನೆ.

ಮಂಗಳೂರು, ಅಕ್ಟೋಬರ್ 07: ನಿಂತಿದ್ದ ಟಿಪ್ಪರ್ ಲಾರಿಗೆ ಆಟೋ ರಿಕ್ಷಾ ಡಿಕ್ಕಿಯಾಗಿ ಆಟೋ ಚಾಲಕ ಮೃತಪಟ್ಟ ಘಟನೆ ನಗರದ ಮರೋಳಿಯಲ್ಲಿ ನಡೆದಿದೆ. 

ಪಡೀಲ್ - ಮರೋಳಿ ಹೆದ್ದಾರಿಯ ಹಳೆ ಕಂಕನಾಡಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಟಿಪ್ಪರ್ ಲಾರಿಗೆ ನಂತೂರು ಕಡೆಯಿಂದ ವೇಗವಾಗಿ ಬಂದ ಆಟೋ ಡಿಕ್ಕಿಯಾಗಿದೆ. ಅಡ್ಯಾರ್ ನಿವಾಸಿ, ಆಟೋ ಚಾಲಕ ಸಲೀಂ(35) ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. ಬೆಳ್ಳಂಬೆಳಗ್ಗೆ ಹೆದ್ದಾರಿ ಖಾಲಿ ಇದೆಯೆಂದು ಆಟೋ ಚಾಲಕ ವೇಗವಾಗಿ ಧಾವಿಸಿ ಬಂದಿದ್ದೇ ಘಟನೆಗೆ ಕಾರಣ ಎನ್ನಲಾಗ್ತಿದೆ. ಘಟನೆಯಲ್ಲಿ ರಿಕ್ಷಾದಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ರಿಕ್ಷಾದಲ್ಲಿ ಮಲ್ಪೆಗೆ ತೆರಳಿ ಮೀನು ಹಿಡಿದು ತರುತ್ತಿದ್ದರು ಎನ್ನಲಾಗಿದೆ. 

ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಸೀಜ್ ಆಗಿದ್ದ ಟಿಪ್ಪರ್ ಲಾರಿಯನ್ನು ಪೊಲೀಸರು ರಸ್ತೆ ಬದಿ ನಿಲ್ಲಿಸಿದ್ದರು. ಹತ್ತು ವರ್ಷಗಳ ಹಿಂದೆ ಕಗ್ಗಲ್ಲು ಸಹಿತ ಲಾರಿಯನ್ನು ಜಪ್ತಿ ಮಾಡಿದ್ದು ಹಲವು ವರ್ಷಗಳಿಂದ ರಸ್ತೆ ಬದಿಯಲ್ಲೇ ಪೊಲೀಸರು ಲಾರಿಯನ್ನು ನಿಲ್ಲಿಸಿದ್ದರು. ಹೆದ್ದಾರಿ ಬದಿಯಲ್ಲಿ ಲಾರಿಯನ್ನು ಹೀಗೆ ನಿಲ್ಲಿಸುವಂತಿಲ್ಲ. ಪೊಲೀಸರ ನಿರ್ಲಕ್ಷ್ಯಕ್ಕೆ ಈಗ ಅಮಾಯಕ ಯುವಕ ಬಲಿಯಾಗಿದ್ದಾನೆ‌.