ಮನೆಮಂದಿ ಮಲಗಿದ್ದಾಗಲೇ ಚಿನ್ನಾಭರಣ ದೋಚಿದ ಕಳ್ಳರು !

07-10-20 04:52 pm       Mangalore Correspondent   ಕ್ರೈಂ

ಮನೆಯ ಬೀಗ ಮುರಿದು ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿದ ಘಟನೆ ಕರಿಂಗಾನ ಸಮೀಪದ ಅಮ್ಟೂರು ಮಸೀದಿ ಬಳಿ ನಡೆದಿದೆ. 

ಬಂಟ್ವಾಳ, ಅಕ್ಟೋಬರ್ 07: ಮನೆಯ ಬೀಗ ಮುರಿದು ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿದ ಘಟನೆ ಮಂಗಳವಾರ ರಾತ್ರಿ ಕಲ್ಲಡ್ಕ ಕರಿಂಗಾನ ಸಮೀಪದ ಅಮ್ಟೂರು ಮಸೀದಿ ಬಳಿ ನಡೆದಿದೆ. 

ಸುಲೈಮಾನ್ ಎಂಬವರ ಮನೆಯಿಂದ ಕಳ್ಳತನ ನಡೆದಿದ್ದು, ಸುಮಾರು 12 ಲಕ್ಷ ಮೌಲ್ಯದ 28 ಪವನ್ ಚಿನ್ನಾಭರಣ ಕಳವಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಸುಲೈಮಾನ್ ಅವರ ಪುತ್ರಿ ಮಿಶ್ರಿಯಾ ಗಂಡನ ಮನೆಯಿಂದ ಅಮ್ಟೂರಿನ ತಂದೆಯ ಮನೆಗೆ ಬಂದಿದ್ದರು. ಅವರು ತನ್ನ ಜೊತೆಗೆ ತಂದಿದ್ದ ಸುಮಾರು 28 ಪವನ್ ಚಿನ್ನಾಭರಣವನ್ನು ಮನೆಯ ಕಪಾಟಿನಲ್ಲಿ ಇಟ್ಟಿದ್ದರೆನ್ನಲಾಗಿದೆ.

ನಿನ್ನೆ ಮಧ್ಯರಾತ್ರಿ ಮನೆಮಂದಿ ಮಲಗಿದ್ದ ವೇಳೆ ಹಿಂಬಾಗಿಲ ಚಿಲಕ ಮುರಿದು ನುಗ್ಗಿದ ಕಳ್ಳರು ಕೋಣೆಯಲ್ಲಿದ್ದ ಕಪಾಟಿನ ಚಿಲಕ ಒಡೆದು ಚಿನ್ನಾಭರಣ ಕಳವುಗೈದಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ತಡರಾತ್ರಿ 2 ಗಂಟೆ ಸುಮಾರಿಗೆ ಸುಲೈಮಾನ್ ಎಚ್ಚರಗೊಂಡಿದ್ದು ಮನೆಯ ಹಿಂಬಾಗಿಲು ತೆರೆದಿರುವುದು ಗಮನಕ್ಕೆ ಬಂದಿದ್ದು ಕಳವು ನಡೆದಿರುವುದು ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಎಸ್.ಐ. ಅವಿನಾಶ್ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.