ಖಾಲಿ ಜಾಗ ತೋರಿಸಿ, ನಕಲಿ ದಾಖಲೆ ಸೃಷ್ಟಿಸಿ ಮಾರಾಟ ; ಬ್ಯಾಂಕ್ ಲೋನ್ ಮಾಡಿಸಿಕೊಟ್ಟು ದೋಖಾ, ಮೂವರ ಬಂಧನ

10-09-22 12:43 pm       Bangalore Correspondent   ಕ್ರೈಂ

ನಗರ ಭಾಗದಲ್ಲಿರುವ ಖಾಲಿ ಜಾಗಗಳನ್ನು ಗುರುತಿಸಿ, ಅದನ್ನು ಮಾರಾಟ ಮಾಡುವುದಾಗಿ ಹೇಳಿ ಸಿಲಿಕಾನ್ ಸಿಟಿ ಜನರನ್ನು ಯಾಮಾರಿಸಿ ಲೋನ್ ತೆಗೆಸಿಕೊಟ್ಟು ಮೋಸ ಎಸಗುತ್ತಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರು, ಸೆ.10: ನಗರ ಭಾಗದಲ್ಲಿರುವ ಖಾಲಿ ಜಾಗಗಳನ್ನು ಗುರುತಿಸಿ, ಅದನ್ನು ಮಾರಾಟ ಮಾಡುವುದಾಗಿ ಹೇಳಿ ಸಿಲಿಕಾನ್ ಸಿಟಿ ಜನರನ್ನು ಯಾಮಾರಿಸಿ ಲೋನ್ ತೆಗೆಸಿಕೊಟ್ಟು ಮೋಸ ಎಸಗುತ್ತಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧಿಸಿ ಕೆ.ಜಿ ನಗರ ಪೊಲೀಸರು ಉದಯ್ ಪ್ರತಾಪ್ ಸಿಂಗ್, ಅಯೂಬ್ ಖಾನ್ ಹಾಗೂ ಮುರಲೀಧರ ಎಂಬವರನ್ನು ಬಂಧಿಸಿದ್ದಾರೆ. ಬನಶಂಕರಿಯಲ್ಲಿ ಡಾಕ್ಟರ್ ನರಸಯ್ಯ ಎಂಬವರಿಗೆ ಸೇರಿದ ಬಿಡಿಎ ಪ್ರಾಧಿಕಾರದಿಂದ ಅಲಾಟ್ ಆಗಿದ್ದ 60 X 40 ಖಾಲಿ ಜಾಗವನ್ನು ಆರೋಪಿಗಳು ಗುರುತಿಸಿ, ನಕಲಿ ದಾಖಲೆ ಸೃಷ್ಟಿಸಿದ್ದರು. ಅಸಲಿ ಹಕ್ಕುದಾರ ನರಸಯ್ಯ ಅವರ ಬದಲು ಬಸವೇಶ್ವರ ನಗರದ ಮುರಲೀಧರ್ ಎಂಬ ವ್ಯಕ್ತಿಯನ್ನು ವಾರಸುದಾರ ಎಂದು ತೋರಿಸಿ ಚಾಮರಾಜಪೇಟೆ ಸಬ್ ರಿಜಿಸ್ಟ್ರಾರ್ ಆಫೀಸ್ನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ಬಳಿಕ ಬಿಡಿಎಯಿಂದ ಆಗಿದ್ದ ಅಲಾಟ್ ಮೆಂಟ್ ಲೆಟರ್ ಮತ್ತು ನೋಂದಣಿ ಪತ್ರಗಳನ್ನು ತೋರಿಸಿ ಸೈಟ್ ಮಾರಾಟಕ್ಕೆ ಮುಂದಾಗಿದ್ದರು. ಫ್ಲಿಪ್ ಕಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಸುನೀಲ್ ಎಂಬಾತ ಇವರ ಬಲೆಗೆ ಬಿದ್ದಿದ್ದು, ಆತನಿಗೆ ಜಾಗ ಮಾರಾಟಕ್ಕೆ ಲೋನ್ ಮಾಡಿಸಿಕೊಡುವುದಾಗಿ ಮನವೊಲಿಸಿದ್ದಾರೆ. ಬಳಿಕ ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಆತನ ಸಂಬಳದ ಮೇಲೆ 1.40 ಕೋಟಿ ರೂ. ಸಾಲ ಮೊಡಿಸಿಕೊಟ್ಟಿದ್ದರು. ಅಲ್ಲದೆ, ನಕಲಿ ನರಸಯ್ಯ ಅವರನ್ನು ಇಟ್ಟುಕೊಂಡು ಸುನೀಲ್ಗೆ ಜಾಗವನ್ನು ರಿಜಿಸ್ಟರ್ ಮಾಡಿಸಿದ್ದರು.

ಇಸಿ ತೆಗೆಯಲು ಹೋದಾಗ ವಂಚನೆ ಬಯಲು

ಇದೇ ವೇಳೆ, ಜಾಗದ ಅಸಲಿ ಮಾಲೀಕ ನರಸಯ್ಯ ತನ್ನ ಜಾಗದ ಮೇಲೆ ‘ಇಸಿ’ಯನ್ನು ತೆಗೆಯಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋದಾಗ, ಬೇರೆಯವರ ಹೆಸರಲ್ಲಿ ಜಾಗ ನೋಂದಣಿ ಆಗಿರುವುದು ಕಂಡುಬಂದಿದೆ. ವಂಚನೆ ಆಗಿರುವುದು ತಿಳಿಯುತ್ತಲೇ ವಿವಿ ಪುರಂ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ಬಳಿಕ ಕೆ.ಜಿ ನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳ ಪೈಕಿ ಉದಯ್, ನಾಗ್ಪುರದಲ್ಲಿ ವಾಸವಿದ್ದು ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾನೆ. ಈ ಹಿಂದೆಯೂ ಇದೇ ತಂಡ ನಕಲಿ ಪಾಸ್ಪೋರ್ಟ್ ಮಾಡಿಸಿಕೊಟ್ಟು ಪೊಲೀಸರ ಬಲೆಗೆ ಬಿದ್ದಿದ್ದರು. ನಕಲಿ ನರಸಯ್ಯನೆಂದು ನಟಿಸಿ, ಅಕ್ರಮಕ್ಕೆ ಸಹಕಾರ ನೀಡಿದ್ದ ಮುರಲೀಧರ ಬಸವೇಶ್ವರ ನಗರದ ನಿವಾಸಿ. ನರಸಯ್ಯನ ಹೆಸರು ಹೇಳಿಕೊಂಡು ಬಂದಿದ್ದಕ್ಕೆ ಆರೋಪಿ ಉದಯ್, ಈತನಿಗೆ 2 ಲಕ್ಷ ರೂ. ಕೊಟ್ಟಿದ್ದನಂತೆ.

Bangalore Three arrested for creating fake documents and borrowing bank loan.