Murder Mystery: ಸಂಪತ್ ಕೊಲೆ ಹಿಂದಿನ ರಹಸ್ಯ ; ಆಗಂತುಕರು ಬರೋದಕ್ಕೂ ಆಂಟಿ ಹೋಗೋದಕ್ಕೂ ಸರಿ ಬಂದಿತ್ತು !!

12-10-20 07:33 pm       Mangaluru Crime Correspondant   ಕ್ರೈಂ

ಬಾಲಚಂದ್ರ ಕಳಗಿ ಹತ್ಯೆಯ ಬೆನ್ನಲ್ಲೇ ಕಲ್ಲುಗುಂಡಿಯ ಆ ಒಂದು ತಂಡ ಆವತ್ತೇ ಕತ್ತಿ ಝಳಪಿಸಿತ್ತು. ಕೊಲೆಗೆ ಪ್ರತೀಕಾರ ತೀರಿಸಿಕೊಂಡೇ ಬಿಡುತ್ತೇವೆಂದು ಗರ್ಜಿಸಿದ್ದೂ ಆಗಿತ್ತು. ಹಾಗೆಂದು ಗರ್ಜಿಸಿದ್ದು ಬೇರಾರೂ ಅಲ್ಲ.

ಸುಳ್ಯ, ಅಕ್ಟೋಬರ್ 11: ಬಿಜೆಪಿ ಮುಖಂಡ ಕಳಗಿ ಬಾಲಚಂದ್ರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಂಪತ್ ಕುಮಾರ್ ಹತ್ಯೆಯಾಗಿದ್ದಾನೆ. ಪೊಲೀಸರು ಐವರನ್ನು ಬಂಧಿಸಿದ್ದಾಗಿ ಮಾಹಿತಿ ನೀಡಿದ್ದಾರೆ. ಆದರೆ ಮುಸುಕು ಹಾಕ್ಕೊಂಡು ಬಂದು ಕೊಲೆ ಮಾಡಿದ ಕಾರಣಕ್ಕೆ ಆರೋಪಿಗಳ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಪರೇಡ್ ಬಳಿಕ ಹೆಸರು ಬಹಿರಂಗ ಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ, ಬಾಲಚಂದ್ರ ಕಳಗಿ ಹತ್ಯೆಯ ಪ್ರತೀಕಾರಕ್ಕಾಗಿ ಆರೋಪಿಗಳು ಒಪ್ಪಿಕೊಂಡಿದ್ದನ್ನು ಪೊಲೀಸರು ದೃಢಪಡಿಸಿದ್ದಾರೆ.

ಬಾಲಚಂದ್ರ ಕಳಗಿ ಹತ್ಯೆಯ ಬೆನ್ನಲ್ಲೇ ಕಲ್ಲುಗುಂಡಿಯ ಆ ಒಂದು ತಂಡ ಆವತ್ತೇ ಕತ್ತಿ ಝಳಪಿಸಿತ್ತು. ಕೊಲೆಗೆ ಪ್ರತೀಕಾರ ತೀರಿಸಿಕೊಂಡೇ ಬಿಡುತ್ತೇವೆಂದು ಗರ್ಜಿಸಿದ್ದೂ ಆಗಿತ್ತು. ಹಾಗೆಂದು ಗರ್ಜಿಸಿದ್ದು ಬೇರಾರೂ ಅಲ್ಲ. ಸಪೂರ ದೇಹದ ಆದರೆ ಪ್ರತೀಕಾರವೇ ತನ್ನ ಗುರಿ ಎಂದು ಹಲ್ಲು ಕಡಿಯುತ್ತಲೇ ಇದ್ದ ಕಲ್ಲುಗುಂಡಿಯ ವಿನು (ಹೆಸರು ಬದಲಿಸಲಾಗಿದೆ). ಈ ವಿಚಾರ ಕಲ್ಲುಗುಂಡಿಯ ಜನರಿಗೂ ಗೊತ್ತು. ಪೊಲೀಸರ ಅರಿವಿಗೂ ಬಂದಿತ್ತು ಎನ್ನುತ್ತದೆ ಮೂಲಗಳು. ಇಷ್ಟಿರುವಾಗ ಆರೋಪಿ ಸಂಪತ್ ಕುಮಾರ್ ಗಮನಕ್ಕೆ ಬರದೇ ಇರುತ್ತಾ..? ಸಾಧ್ಯನೇ ಇಲ್ಲ. ಅದಕ್ಕಾಗೇ ಜೈಲಿನಿಂದ ಹೊರಬಂದ ಸಂಪತ್ ಕುಮಾರ್ ಕಲ್ಲುಗುಂಡಿಯಲ್ಲಿ ತನ್ನ ಪತ್ನಿ ಮಕ್ಕಳ ಜೊತೆ ಇರೋದನ್ನು ಬಿಟ್ಟು ಸುಳ್ಯದಲ್ಲೇ ನೆಲೆಸಿದ್ದ.

ಮೈಬಿಸಿಗೆ ಬರುತ್ತಿದ್ದ ಆಂಟಿ ಯಾರು ?

ಜೈಲಿನಿಂದ ಹೊರಬಂದ ಮೇಲೆ ಸಂಪತ್ ಕುಮಾರ್ ಅಂದ್ರೆ ಅಲ್ಲಿನ ಜನರಿಗೆ ಭಯ ಹುಟ್ಟಿಸುವ ರೀತಿ ಆತನ ವರ್ತನೆಯಿತ್ತು. ಯಾರು ಕೂಡ ಆತನ ಜೊತೆ ಹೆಚ್ಚು ಮಾತಾಡುತ್ತಿರಲಿಲ್ಲ. ಒಂದೆಡೆ ತಲೆಯ ಮೇಲೆ ತೂಗುಗತ್ತಿ ಇದ್ದುದು ಮತ್ತು ಜೈಲಿಗೆ ಹೋಗಿಬಂದಿದ್ದ ಅಹಂಕಾರದ ಬಲ ಆತನಿಗೆ ಅಡರಿತ್ತೇನೋ.. ಕೈಯಲ್ಲಿ ಕಾಸು ಹರಿದಾಡಿದ ಬಳಿಕ ಆತನಿಗೆ ಅಲ್ಲೊಂದು ನೆಂಟಸ್ತನವೂ ಆಗಿತ್ತು. ಏಕಾಂಗಿಯಾಗಿ ಶಾಂತಿನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಸಂಪತ್ ಕುಮಾರನ ಮೈಬಿಸಿ ಮಾಡಿಕೊಳ್ಳಲೆಂದೇ ಅಲ್ಲಿಗೊಬ್ಬಳು ಆಂಟಿ ಬರುತ್ತಿದ್ದಳು. ಸ್ಥಳೀಯರ ಪ್ರಕಾರ, ಯಾರೋ ಒಬ್ಬಳು ಹುಡುಗಿ ಕೆಲವೊಮ್ಮೆ ಬಂದು ಹೋಗುತ್ತಿದ್ದುದನ್ನು ನೋಡಿದ್ದೇವೆ. ಆಕೆ ಯಾರೆಂದು ನಮಗೆ ಗೊತ್ತಿಲ್ಲ. ಮೊನ್ನೆ ಕೊಲೆಯಾದ ದಿವಸದ ಹಿಂದಿನ ರಾತ್ರಿಯೂ ಆಕೆ ಬಂದು ಮನೆಯಲ್ಲಿ ಉಳಿದಿದ್ದಳು. ಆದರೆ, ಬೆಳಗ್ಗೆ ಆಕೆ ಬೇಗ ಎದ್ದು ಹೋಗಿದ್ದಾಳಂತೆ!  

ಆಕೆ ಅತ್ತ ಹೋಗುತ್ತಿದ್ದಂತೆಯೇ ಏಳು ಗಂಟೆ ಸುಮಾರಿಗೆ ಸಂಪತ್ ಕಾರಿನಲ್ಲಿ ಹೊರಟಿದ್ದ. ಮೊದಲೇ ಕಾದು ಕುಳಿತಿದ್ದ ಆಗಂತುಕರು ಒಂದೇ ವಾಹನ ಹೋಗುವಂತಿದ್ದ ರಸ್ತೆಗೆ ಕ್ವಾಲಿಸ್ ಅಡ್ಡ ಇಟ್ಟಿದ್ದರು. ಕಾರಿನ ಮುಂಭಾಗಕ್ಕೆ ನಾಡಕೋವಿಯಿಂದ ಫೈರ್ ಆದಾಗಲೇ ಸಂಪತ್ ಗೆ ಅಪಾಯದ ಅರಿವಾಗಿತ್ತು. ಮತ್ತೊಂದು ಕಡೆಯಿಂದ ಕತ್ತಿ ಹಿಡಿದು ಮುಸುಕುಧಾರಿಗಳು ಬಂದಿದ್ದನ್ನು ನೋಡಿ ಸಂಪತ್ ಕಾರು ಬಿಟ್ಟು ಓಡಿದ್ದಾನೆ. ಓಡುತ್ತಲೇ ಹಿಂದಿನಿಂದ ಸಿಡಿದ ಗುಂಡು ಆತನ ಬೆನ್ನನ್ನು ಸೀಳಿತ್ತು. ಆದ್ರೂ ಓಡುತ್ತಾ ಬಡಪಾಯಿ ಕಾಂತಪ್ಪ ಗೌಡರ ಮನೆಗೆ ಹೊಕ್ಕಿದ್ದ. ಮನೆಗೆ ನುಗ್ಗಿದ್ದ ಆಗಂತುಕರು ಆಗಷ್ಟೇ ಎದ್ದು ಕುಳಿತಿದ್ದ ಮನೆಮಂದಿ ಹೊರಬಂದು ಚೀರಾಡುತ್ತಿರುವಾಗಲೇ ಸಂಪತ್ ಕತೆ ಮುಗಿಸಿದ್ದಾರೆ. ಕೊಲೆ ಕೃತ್ಯ ನೋಡಿ, ಅಲ್ಲಿನ ಜನ ಎಷ್ಟು ಭಯ ಪಟ್ಟಿದ್ದರಂದ್ರೆ ಭೀಕರವಾಗಿ ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂಪತ್ ಕುಮಾರ್ ಶವದ ಬಳಿ ಹೋಗುವುದಕ್ಕೂ ಹೆದರಿದ್ದರು. ಪೊಲೀಸರು ಬಂದ ಬಳಿಕವೂ ಸುಮಾರು ಹೊತ್ತು ಶವ ಮನೆಯ ಒಳಗೇ ಅನಾಥವಾಗಿ ಬಿದ್ದುಕೊಂಡಿತ್ತು.

ಮೂಲಗಳ ಪ್ರಕಾರ, ಆರೋಪಿಗಳು ವಾರಕ್ಕೆ ಮೊದಲೇ ಪ್ಲಾನ್ ಮಾಡಿದ್ದರು. ಕ್ವಾಲಿಸ್ ವಾಹನವನ್ನು ಬಾಡಿಗೆ ಪಡೆದು ಸುಳ್ಯ, ಶಾಂತಿನಗರದಲ್ಲಿ ಓಡಾಡುತ್ತಲೇ ಇದ್ದರು. ಸಂಪತ್ ಬಾಡಿಗೆ ಮನೆಯಿದ್ದ ಜಾಗಕ್ಕೆ ವಾರದಲ್ಲಿ ಹಲವು ಬಾರಿ ಬಂದು ಹೋಗಿದ್ದರಂತೆ. ಅಲ್ಲಿನ ಇಕ್ಕಟ್ಟಾದ ಜಾಗ ನೋಡಿ, ಕೊಲೆಗೆ ಪಕ್ಕಾ ಸ್ಕೆಚ್ ಹಾಕಿದ್ದರು. ಆದರೆ ಬೆಳಗ್ಗೆ ಹುಡುಗಿ ಎದ್ದು ಹೋಗುವುದಕ್ಕೂ, ಅತ್ತ ಆರೋಪಿಗಳಿದ್ದ ಕ್ವಾಲಿಸ್ ಬರುವುದಕ್ಕೂ ಸರಿಯಾಗಿತ್ತು. ಆಕೆಯ ಸ್ಕೂಟಿ ಹೋಗುತ್ತಲೇ ಅವಿತುಕೊಂಡಿದ್ದ ಜವರಾಯ ಎದ್ದು ಕುಳಿತಿದ್ದ.

ಬಡಪಾಯಿಗಳಿಗೆ ಪೀಕಲಾಟ ತಂದಿತ್ತ ಕೃತ್ಯ !    

ಇಷ್ಟಕ್ಕೂ ಆರೋಪಿಗಳು ಮುಸುಕು ಹಾಕಿಕೊಂಡಿದ್ದರು ಅನ್ನೋದೇ ಈಗ ಪೀಕಲಾಟ ತಂದಿದ್ದು. ಆರೋಪಿಗಳು ಯಾರೆಂದು ಗೊತ್ತಾದರೂ ಪೊಲೀಸರಿಗೆ ಅವರ ಕ್ಯತ್ಯವನ್ನು ರುಜು ಮಾಡೋದು ಕಷ್ಟದ ಕೆಲಸ. ಅಲ್ಲಿದ್ದ ಬಡಪಾಯಿ ಮಂದಿಗೂ ಅವರನ್ನು ಗುರುತು ಹಿಡಿಯೋದು ಕಷ್ಟ. ತಮಗೆ ಉಸಾಬರಿಯೇ ಇಲ್ಲದ ಆತ ತಮ್ಮ ಮನೆಗೆ ನುಗ್ಗಿದ್ದೇ ಅವರನ್ನು ಪೀಕಲಾಟಕ್ಕೆ ತಂದಿಟ್ಟಿದೆ.

Here is a detailed report by "Headline Karnataka", Mangaluru about the Murder Mystery of Sampath Kumar who was brutally murdered in the early morning hours of Thursday, October 8, 2020 in Sullia by a gang of masked men with swords and a gun.