ರಕ್ಷಣಾ ವೇದಿಕೆ ಹೆಸರಲ್ಲಿ ಬೆಂಗಳೂರು ಯುವಕನ ಕೊಲೆ ; ಚಾರ್ಮಾಡಿ ಘಾಟಿಯಲ್ಲಿ ಶವಕ್ಕಾಗಿ ಮುಂದುವರೆದ  ಶೋಧ, ಸಿಗದ ಕುರುಹು

05-01-23 01:04 pm       HK News Desk   ಕ್ರೈಂ

ಕನ್ನಡ ರಕ್ಷಣಾ ವೇದಿಕೆಯ ಹೆಸರಲ್ಲಿ ಯುವಕನನನ್ನು ಕೊಲೆಗೈದು ಚಾರ್ಮಾಡಿ ಘಾಟಿಯಲ್ಲಿ ಎಸೆದಿದ್ದ ಪ್ರಕರಣದಲ್ಲಿ ಪೊಲೀಸರು ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಶವಕ್ಕಾಗಿ ಶೋಧ ನಡೆಸುತ್ತಿದ್ದಾರೆ. ಎರಡು ದಿನಗಳಿಂದ ಶೋಧ ನಡೆಸುತ್ತಿದ್ದರೂ, ಶವ ಪತ್ತೆಯಾಗಿಲ್ಲ.

ಚಿಕ್ಕಮಗಳೂರು, ಜ.5: ಕನ್ನಡ ರಕ್ಷಣಾ ವೇದಿಕೆಯ ಹೆಸರಲ್ಲಿ ಯುವಕನನನ್ನು ಕೊಲೆಗೈದು ಚಾರ್ಮಾಡಿ ಘಾಟಿಯಲ್ಲಿ ಎಸೆದಿದ್ದ ಪ್ರಕರಣದಲ್ಲಿ ಪೊಲೀಸರು ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಶವಕ್ಕಾಗಿ ಶೋಧ ನಡೆಸುತ್ತಿದ್ದಾರೆ. ಎರಡು ದಿನಗಳಿಂದ ಶೋಧ ನಡೆಸುತ್ತಿದ್ದರೂ, ಶವ ಪತ್ತೆಯಾಗಿಲ್ಲ.

ಆರೋಪಿಗಳಾದ ಶರತ್ ಹಾಗೂ ಧನುಷ್ ಎಂಬವರನ್ನು ಚಾರ್ಮಾಡಿ ಘಾಟಿಯ ವಿವಿಧ ಕಡೆಗಳಿಗೆ ಕರೆದೊಯ್ದು ಶೋಧ ನಡೆಸಿದ್ದಾರೆ. ಕ್ಷಣಕ್ಕೊಂದು ಜಾಗ ತೋರಿಸುತ್ತಿರುವುದರಿಂದ ಆರೋಪಿಗಳು ತೋರಿಸಿದ ಜಾಗದಲ್ಲೆಲ್ಲ ಹುಡುಕಾಟ ನಡೆಸಿದ್ದಾರೆ. ಬಣಕಲ್, ಮೂಡಿಗೆರೆಯ ಸಮಾಜ ಸೇವಕರು ಕೂಡ ಪೊಲೀಸರ ಜೊತೆಗೆ ಶೋಧಕ್ಕೆ ನೆರವು ನೀಡಿದ್ದಾರೆ.

ಒಂಬತ್ತು ತಿಂಗಳ ಹಿಂದೆ ಬೆಂಗಳೂರಿನ ಶರತ್ ಕುಮಾರ್ ಎಂಬ ಯುವಕನನ್ನು ಅಪಹರಿಸಿ, ಚಿತ್ರಹಿಂಸೆ ಕೊಟ್ಟು ಸಾಯಿಸಿದ್ದ ತಂಡ ಆನಂತರ ಶವವನ್ನು ಯಾರಿಗೂ ಸಿಗದಂತೆ ಚಾರ್ಮಾಡಿ ಘಾಟಿಯಲ್ಲಿ ಎಸೆದು ಹೋಗಿದ್ದರು. ರಾತ್ರಿ ವೇಳೆ ಪ್ರಪಾತಕ್ಕೆ ಎಸೆದಿದ್ದರಿಂದ ಅದು ಪೂರ್ತಿಯಾಗಿ ಕೊಳೆತು ಹೋಗಿರಬಹುದು ಅಥವಾ ಕಾಡು ಪ್ರಾಣಿಗಳು ತಿಂದು ಹಾಕಿರುವ ಸಾಧ್ಯತೆಯಿದೆ. ಆನಂತರ ಮಳೆಗಾಲ ಬಂದಿದ್ದರಿಂದ ಮಳೆಯಲ್ಲಿ ಅದರ ಕುರುಹುಗಳು ಕೂಡ ಸಿಗದೇ ಹೋಗಿರುವ ಸಾಧ್ಯತೆಯಿದೆ.

ಶರತ್ ಕುಮಾರ್ ಸರಕಾರದಿಂದ ಸಬ್ಸಿಡಿಯಲ್ಲಿ ಕಾರು ಕೊಡಿಸುವುದಾಗಿ ಹೇಳಿ ಹಲವರಿಂದ ಹಣವನ್ನು ಪಡೆದುಕೊಂಡಿದ್ದ. ಈ ಬಗ್ಗೆ ಹಣ ಕಳೆದುಕೊಂಡವರು ಬೆಂಗಳೂರಿನ ಕನ್ನಡ ರಕ್ಷಣಾ ವೇದಿಕೆಯ ಮುಖಂಡ ಚಲಪತಿ ಅನ್ನುವ ವ್ಯಕ್ತಿಗೆ ತಿಳಿಸಿದ್ದರು. ಚಲಪತಿ ತನ್ನ ಮಗ ಶರತ್ ಬಿಎನ್ ಬಳಿ ಹೇಳಿ, ಸಂತ್ರಸ್ತ ಶರತ್ ಕುಮಾರ್ ನನ್ನು ಅಪಹರಿಸಿದ್ದರು. ಚಿಕ್ಕಬಳ್ಳಾಪುರದಲ್ಲಿ ಮಾವಿನ ತೋಟದಲ್ಲಿರಿಸಿ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಲಾಗಿತ್ತು. ಬಳಿಕ ಅನ್ನ ನೀರು ಕೊಡದೇ ಚಿತ್ರಹಿಂಸೆ ನೀಡಿದ್ದರಿಂದ ಶರತ್ ಕುಮಾರ್ ಸಾವನ್ನಪ್ಪಿದ್ದ. ಈ ನಡುವೆ, ಮನೆಗೆ ಬಾರದೇ ಇದ್ದುದರಿಂದ ಶರತ್ ಕುಮಾರ್ ಮನೆಯವರು ನಾಪತ್ತೆ ದೂರು ದಾಖಲಿಸಿದ್ದರು. ಆದರೆ ಇದೇ ವೇಳೆ ಆತನದ್ದೇ ಮೊಬೈಲಿನಿಂದ ತನ್ನನ್ನು ಹುಡುಕಬೇಡಿ, ಹೊರ ರಾಜ್ಯಕ್ಕೆ ಕೆಲಸಕ್ಕೆ ಹೋಗುತ್ತಿದ್ದೇನೆ ಎಂದು ಶರತ್ ಮೊಬೈಲಿನಿಂದಲೇ ಮನೆಯವರಿಗೆ ಮೆಸೇಜ್ ಬಂದಿತ್ತು. ಆನಂತರ ಫೋನ್ ಮಾತ್ರ ಸಿಗುತ್ತಿರಲಿಲ್ಲ.

ಒಂದಷ್ಟು ತನಿಖೆ ನಡೆಸಿದ್ದ ಪೊಲೀಸರು ಪ್ರಕರಣವನ್ನು ಹಾಗೇ ಬಿಟ್ಟು ಬಿಟ್ಟಿದ್ದರು. ಇತ್ತೀಚೆಗೆ ಪೊಲೀಸ್ ಇಲಾಖೆಗೆ ಬಂದಿದ್ದ ಅನಾಮಧೇಯ ಪತ್ರ ಮತ್ತು ಪೆನ್ ಡ್ರೈವ್ ಇಡೀ ಪ್ರಕರಣದ ಜಾತಕ ಬಿಚ್ಚಿಟ್ಟಿತ್ತು. ಆರೋಪಿಗಳು ಚಿತ್ರಹಿಂಸೆ ನೀಡುತ್ತಿದ್ದ ವಿಡಿಯೋ ಸೇರಿದಂತೆ ಆ ಬಗ್ಗೆ ಪತ್ರದಲ್ಲಿಯೂ ಮಾಹಿತಿ ನೀಡಲಾಗಿತ್ತು. ಬೆನ್ನತ್ತಿದ ಪೊಲೀಸರು ಚಲಪತಿ ಸೇರಿದಂತೆ ಆತನ ಮಗ ಹಾಗೂ ಸಂಗಡಿಗರನ್ನು ಬಂಧಿಸಿದ್ದಾರೆ. ಆದರೆ, ಶವವನ್ನು ಚಾರ್ಮಾಡಿ ಘಾಟಿಯಲ್ಲಿ ಎಸೆದಿದ್ದಾಗಿ ಮಾಹಿತಿ ನೀಡಿದ್ದರಿಂದ ಇಲ್ಲಿ ಶವಕ್ಕೆ ಹುಡುಕಾಟ ನಡೆಸಿದರೂ, ಕುರುಹು ಪತ್ತೆಯಾಗದೇ ಇರುವುದು ಪೊಲೀಸರಿಗೆ ತಲೆನೋವಾಗಿದೆ. ಚಾರ್ಜ್ ಶೀಟ್ ಪುರಾವೆಗೆ ಶವದ ಕುರುಹಾದ್ರೂ ಸಿಗಬೇಕಾದ್ದು ಅನಿವಾರ್ಯ ಆಗುತ್ತದೆ.

Bengaluru Sharath Kumar murder police search for body thrown in Charmadi Ghat months ago with accused. Cubbon Park police of Bengaluru have begun a search operation at the valley of Charmadi Ghat to recover the body of H Sharath, a resident of Konanakunte of Bengaluru, who was allegedly abducted and murdered over some financial matter. The search continued on Wednesday also.