ಪ್ರತ್ಯೇಕ ಪ್ರಕರಣ ; ಗಾಂಜಾ, ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿದ ಸಿಸಿಬಿ ಪೊಲೀಸರು

08-01-23 01:08 pm       Mangalore Correspondent   ಕ್ರೈಂ

ಗಾಂಜಾ, ಡ್ರಗ್ಸ್ ಮಾರಾಟ ಪ್ರಕರಣದ ಪ್ರತ್ಯೇಕ ಘಟನೆಯಲ್ಲಿ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

ಮಂಗಳೂರು, ಜ.8 : ಗಾಂಜಾ, ಡ್ರಗ್ಸ್ ಮಾರಾಟ ಪ್ರಕರಣದ ಪ್ರತ್ಯೇಕ ಘಟನೆಯಲ್ಲಿ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

ಉತ್ತರ ಭಾರತ ಮೂಲದ ನೀಲ್ ಕಿಶೋರಿಲಾಲ್ ರಾಮ್ ಜಿ ಶಾ(38), ಮುಡಿಪು ಗೌಸಿಯಾ ಕಾಂಪೌಂಡ್ ನಿವಾಸಿ ನವಾಝ್ (35), ಕಾಸರಗೋಡಿನ ಬಂಬ್ರಾಣ ನಿವಾಸಿ ಕಿರಣ್ ರಾಜ್ ಶೆಟ್ಟಿ (24) ಬಂಧಿತರು. 

ನೀಲ್ ಕಿಶೋರಿಲಾಲ್ ರಾಮ್ ಜಿ ಶಾ ವಿದೇಶದಲ್ಲಿ ನೆಲೆಸಿದ್ದ ಭಾರತೀಯ ಪ್ರಜೆಯಾಗಿದ್ದು, ಸದ್ಯಕ್ಕೆ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನಲ್ಲಿ ಫ್ಲಾಟ್ ಒಂದರಲ್ಲಿ ವಾಸವಿದ್ದು ಗಾಂಜಾ ಇಟ್ಟುಕೊಂಡು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ. ಸಿಸಿಬಿ ಪೊಲೀಸರು ಖಚಿತ ಮಾಹಿತಿ ಪಡೆದು ಫ್ಲಾಟಿಗೆ ದಾಳಿ ನಡೆಸಿದ್ದು ಒಟ್ಟು 2 ಕೆ ಜಿ ತೂಕದ ರೂ.50,000 ಮೌಲ್ಯದ ಗಾಂಜಾ, 2 ಮೊಬೈಲ್ ಫೋನ್, ನಗದು ರೂ. 7000, ಡಿಜಿಟಲ್ ತೂಕ ಮಾಪನ ವಶಪಡಿಸಿಕೊಳ್ಳಲಾಗಿದೆ. ಮಾದಕ ವಸ್ತುಗಳನ್ನು ವಿಶಾಖಪಟ್ಟಣದಿಂದ ತಂದು ಮಂಗಳೂರು ನಗರದಲ್ಲಿ ಮಾರಾಟ ಮಾಡುತ್ತಿದ್ದ. 

ಇನ್ನೊಂದು ಪ್ರಕರಣದಲ್ಲಿ MDMA ಡ್ರಗ್ಸ್ ಅನ್ನು ಕೇರಳ-ಕರ್ನಾಟಕದ ಗಡಿಭಾಗ ಕೊಣಾಜೆ, ಮುಡಿಪು ಭಾಗದಲ್ಲಿ ಮಾರಾಟ ಮಾಡುತ್ತಿದ್ದ ನವಾಝ್ ನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಒಟ್ಟು 15 ಗ್ರಾಂ ತೂಕದ ರೂ. 75,000/- ಮೌಲ್ಯದ ಎಂಡಿಎಂಎ ಮಾದಕ ವಸ್ತುವನ್ನು, ಮೊಬೈಲ್ ಫೋನ್ -2, ಡಿಜಿಟಲ್ ತೂಕ ಮಾಪನ, ನಗದು ರೂ. 3200/- ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಬಜಾಜ್ ಅವೆಂಜರ್ ಬೈಕ್ ವಶಕ್ಕೆ ಪಡೆಯಲಾಗಿದೆ. ನವಾಝ್ ವಿರುದ್ಧ ಈ ಹಿಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಕೊಲೆಯತ್ನ, ದರೋಡೆಗೆ ಸಂಬಂಧಪಟ್ಟಂತೆ ಒಟ್ಟು 8 ಪ್ರಕರಣಗಳು, ಮುಲ್ಕಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ , ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಯತ್ನ ನಡೆಸಿದ ಪ್ರಕರಣ ಹೀಗೆ ಒಟ್ಟು 11 ಪ್ರಕರಣಗಳು ದಾಖಲಾಗಿರುತ್ತದೆ.

ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಮಾರುತಿ ಆಲ್ಟೋ ಕಾರಿನಲ್ಲಿ 27 ಕೇಜಿ ಗಾಂಜಾ ಸಾಗಿಸುತ್ತಿದ್ದಾಗ ಕಾಸರಗೋಡಿನ ಕಿರಣ್ ರಾಜ್ ಶೆಟ್ಟಿ(24)ಯನ್ನು ಬಂಧಿಸಲಾಗಿದೆ. ಮಂಗಳೂರಿನ ನೀರುಮಾರ್ಗದ ಕುಟ್ಟಿಕಳ ಎಂಬಲ್ಲಿ ಕಾರಿನಲ್ಲಿ ಬರುತ್ತಿದ್ದಾಗ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಗಡಿಭಾಗದ ಕೇರಳ, ಕರ್ನಾಟಕದಲ್ಲಿ ಗಾಂಜಾ ಪೂರೈಸುತ್ತಿದ್ದ ಈತನ ವಿರುದ್ಧ ಕಾಸರಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Three have been arrested for selling Ganja and drugs in Mangalore by CCB police.