ಹಣಕ್ಕಾಗಿ ತನ್ನದೇ ಸಿಬಂದಿಗೆ ಕಿರುಕುಳ, ಎಫ್ಐಆರ್ ದಾಖಲಿಸಲು ಲಂಚ ; ಇನ್ಸ್ ಪೆಕ್ಟರ್ ವಿರುದ್ಧ ರಾಷ್ಟ್ರಪತಿಗೆ ಪತ್ರ ಬರೆದ ಸುಬ್ರಹ್ಮಣ್ಯ ನಗರ ಠಾಣೆ ಸಿಬಂದಿ

28-03-23 02:09 pm       Bangalore Correspondent   ಕ್ರೈಂ

ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ, ಅಧಿಕಾರಿಗಳು ಜನಸಾಮಾನ್ಯರನ್ನು ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂಬ ಬಗ್ಗೆ ಆರೋಪ ಕೇಳಿಬಂದಿದ್ದವು.

ಬೆಂಗಳೂರು, ಮಾ.28: ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ, ಅಧಿಕಾರಿಗಳು ಜನಸಾಮಾನ್ಯರನ್ನು ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂಬ ಬಗ್ಗೆ ಆರೋಪ ಕೇಳಿಬಂದಿದ್ದವು. ಆದರೆ ಇದೀಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇನ್ಸ್ ಪೆಕ್ಟರ್ ಅಧಿಕಾರಿಯೊಬ್ಬನ ಭ್ರಷ್ಟಾಚಾರ, ಹಣಕ್ಕಾಗಿ ಸಿಬಂದಿಗೆ ಕಿರುಕುಳ ನೀಡುವುದ್ನು ತಾಳಲಾರದೆ ಅದೇ ಠಾಣೆಯ ಸಿಬಂದಿಯೊಬ್ಬರು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣಾಧಿಕಾರಿ ಕರ್ತವ್ಯದಲ್ಲಿರುವ ಶರಣು ಗೌಡ ಎಂಬವರ ವಿರುದ್ಧ ಅಲ್ಲಿನ ಪೊಲೀಸ್ ಸಿಬಂದಿಯೇ ಸೇರಿ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ತಮಗಾಗುತ್ತಿರುವ ಕಿರುಕುಳ, ಶರಣು ಗೌಡ ಹಣಕ್ಕಾಗಿ ಪೀಡಿಸುತ್ತಿರುವುದನ್ನು ವಿವರಿಸಿದ್ದಾರೆ. ಈ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದ್ದು ಪೊಲೀಸ್ ಇಲಾಖೆ ಒಳಗಿನ ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿಯುವಂತಿದೆ.

9 ಪುಟಗಳ ಪತ್ರವನ್ನು ಸುಬ್ರಹ್ಮಣ್ಯ ನಗರ ಠಾಣೆಯ ಸಿಬಂದಿಯೊಬ್ಬರು ಬರೆದಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದು, ಅಧಿಕಾರಿಯಿಂದ ತೀವ್ರ ಪೀಡನೆಗೆ ಒಳಗಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಅಗತ್ಯಕ್ಕೆ ರಜೆ ಕೇಳಲು ಹೋದರೆ, ಹಣ ತಂದುಕೊಟ್ಟವರಿಗೆ ಮಾತ್ರ ರಜೆ ಕೊಡುತ್ತೀನಿ, ಎಲ್ಲ ಸೌಕರ್ಯಗಳನ್ನೂ ಕೊಡಿಸ್ತೀನಿ. ಉಳಿದವರಿಗೆ ರಜೆ ಇಲ್ಲ ಎಂದು ಕಳುಹಿಸುತ್ತಾರೆ. ಅಧಿಕಾರಿಯ ಈ ರೀತಿಯ ನಡೆಯಿಂದ ಬಹಳಷ್ಟು ಸಿಬಂದಿ ನೋವು ಅನುಭವಿಸುತ್ತಿದ್ದಾರೆ. ಅಲ್ಲದೆ, ಬೀಟ್ ಕರ್ತವ್ಯಕ್ಕೆ ತೆರಳಲು ಪೊಲೀಸ್ ಇಲಾಖೆಯ ದ್ವಿಚಕ್ರ ವಾಹನ ಪಡೆಯಬೇಕಂದ್ರೆ, ಆತನಿಗೆ 5 ಸಾವಿರ ಲಂಚ ನೀಡಬೇಕು ಎಂದು ಪತ್ರದಲ್ಲಿ ಬರೆದಿದ್ದಾರೆ.

ಪೊಲೀಸ್ ಅಧಿಕಾರಿ ತನ್ನ ಪತ್ನಿಯನ್ನು ಠಾಣೆಗೆ ಕರೆತಂದು ಕಚೇರಿಯಲ್ಲೇ ಕುಳಿತು ಹರಟೆ ಹೊಡೆಯುತ್ತಾರೆ. ತನ್ನ ಮಕ್ಕಳನ್ನು ಸ್ವಿಮ್ಮಿಂಗ್ ಪೂಲ್ ಕರೆದೊಯ್ಯಲು ಪೊಲೀಸ್ ಜೀಪ್ ಬಳಸುತ್ತಾರೆ. ಇತರೇ ಕರ್ತವ್ಯಕ್ಕೆ ಜೀಪ್ ಕೊಡುವುದಿಲ್ಲ. ಠಾಣೆಯಲ್ಲಿ ಯಾರು ಭ್ರಷ್ಟಾಚಾರದಿಂದ ಹಣ ತಂದುಕೊಡುವುದಿಲ್ಲ ಅಂಥವರು ಟಾರ್ಗೆಟ್ ಆಗುತ್ತಿದ್ದಾರೆ. ಮಹಿಳಾ ಸಿಬಂದಿ ತಮ್ಮ ಮುಟ್ಟಿನ ಅವಧಿಯಲ್ಲಿ ರಜೆ ಕೇಳಲು ಹೋದರೆ, ಕೆಲಸ ಮಾಡಕ್ಕಾಗದಿದ್ದರೆ ರಿಸೈನ್ ಕೊಟ್ಟು ಮನೆಗೆ ಹೋಗಿ ಎಂದು ಗದರುತ್ತಾರೆ. ಕೆಲವು ಮಹಿಳಾ ಸಿಬಂದಿ ಜೊತೆಗೆ ದುರ್ನಡತೆ ತೋರಿದ್ದು, ಅವರನ್ನು ತನ್ನ ಮನೆಗೆ ಬರುವಂತೆ ಆಹ್ವಾನಿಸುತ್ತಾರೆ. ಠಾಣೆ ಒಳಗೆ ಮೀಟಿಂಗಲ್ಲಿ ಬಹಿರಂಗವಾಗಿಯೇ ತಾನು 25 ಲಕ್ಷ ಕೊಟ್ಟು ಈ ಪೋಸ್ಟಿಗೆ ಬಂದಿದ್ದೇನೆ, ಇಷ್ಟು ಹಣ ಕೊಟ್ಟು ಬಂದಿದ್ದು ನಿಮ್ಮ ಯೋಗ ಕ್ಷೇಮ ಕೇಳುವುದಕ್ಕೆ ಅಲ್ಲ ಎಂದು ಹೇಳುತ್ತಾರೆ. ಅಧಿಕಾರಿಯ ಕಿರುಕುಳಕ್ಕೆ ಬೇಸತ್ತು ಒಬ್ಬರು ಸಿಬಂದಿ ಆತ್ಮಹತ್ಯೆಗೂ ಪ್ರಯತ್ನಿಸಿದ್ದಾರೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಪೊಲೀಸ್ ಸಿಬಂದಿಯೇ ಮೇಲಧಿಕಾರಿಯ ಭ್ರಷ್ಟಾಚಾರದ ಬಗ್ಗೆ ಬೇಸತ್ತು ಬರೆದಿರುವ ಪತ್ರ ವೈರಲ್ ಆಗುತ್ತಿದ್ದು, ರಾಜ್ಯ ಸರಕಾರ ಮತ್ತು ಪೋಸ್ಟ್ ಮಾಡಿಕೊಳ್ಳಲು 25 ಲಕ್ಷ ಕೊಟ್ಟಿದ್ದೇನೆ ಎಂಬ ವಿಚಾರ ಇಲಾಖೆ ಒಳಗಿನ ಭ್ರಷ್ಟಾಚಾರದ ಬಗ್ಗೆ ಗಂಭೀರ ಪ್ರಶ್ನೆ ಎದ್ದಿದೆ. ಇದಲ್ಲದೆ, ಠಾಣೆ ವ್ಯಾಪ್ತಿಯ ಬಾರ್, ಪಬ್, ಮಾಲ್ ಗಳಿಗೆ ಇಂತಿಷ್ಟು ಮಾಮೂಲಿ ಕೊಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸಾರ್ವಜನಿಕರು ಬೈಕ್ ಕಳವಾಗಿದೆ ಎಂದು ಠಾಣೆಗೆ ದೂರು ಹೇಳಿಕೊಂಡು ಬಂದರೆ ಎಫ್ಐಆರ್ ದಾಖಲಿಸಲು 15 ಸಾವಿರ ಲಂಚ ಕೊಡಬೇಕು. ಲ್ಯಾಪ್ಟಾಪ್ ಕಳವು ಕುರಿತ ದೂರಿಗೆ 5 ಸಾವಿರ ಕೊಡಬೇಕು ಎಂದು ಪತ್ರದಲ್ಲಿ ಅಲ್ಲಿನ ಭ್ರಷ್ಟಾಚಾರದ ಬಗ್ಗೆ ಬರೆದಿದ್ದಾರೆ.

ಇದೇ ಅಧಿಕಾರಿಯ ಕಿರುಕುಳದಿಂದ ಸುಳ್ಳು ದೂರಿನಲ್ಲಿ ಸಿಕ್ಕಿಕೊಂಡಿದ್ದ ಯುವಕ ಹಿಂದೊಮ್ಮೆ ಆತ್ಮಹತ್ಯೆ ಮಾಡಿಕೊಂಡಿದ್ದ. ಸುಳ್ಳು ದೂರು ದಾಖಲಿಸಿ, ಯುವಕನಿಂದ ಅಧಿಕಾರಿ 3 ಲಕ್ಷ ರೂಪಾಯಿ ಪಡೆದಿದ್ದ. ಆನಂತರ, ಆತ್ಮಹತ್ಯೆ ಪ್ರಕರಣದಿಂದ ಬಚಾವ್ ಆಗಲು ಯುವಕನ ಕುಟುಂಬಕ್ಕೆ 15 ಲಕ್ಷ ರೂ. ಖರ್ಚು ಮಾಡುವಂತಾಗಿತ್ತು ಎಂದು ಪತ್ರದಲ್ಲಿ ಬರೆಯಲಾಗಿದೆ. ಇಂಥ ಹೊಣೆಗೇಡಿ, ಭ್ರಷ್ಟ ಅಧಿಕಾರಿಯನ್ನು ಸುಬ್ರಹ್ಮಣ್ಯ ನಗರ ಠಾಣೆಯಿಂದ ಬೇರೆ ಕಡೆಗೆ ವರ್ಗಾವಣೆ ಮಾಡಿಸಿ ಎಂದು ಪತ್ರ ಬರೆದಿರುವ ಸಿಬಂದಿ ರಾಷ್ಟ್ರಪತಿ ಅವರಲ್ಲಿ ಮನವಿ ಮಾಡಿದ್ದಾರೆ.

A letter allegedly written by the Police personnel attached to the Subramanyanagar police station in Bengaluru to President Droupadi Murmu went viral on social media on Monday. The nine-page letter claims that it is written by the policemen attached to the Subramanyanagar police station, who are victims of harassment. The letter alleges that the police inspector in-charge Sharana Gowda is torturing the lower rung officers and staff to mint money and give it to him. In the letter, the staff members have alleged that whenever they approached the police inspector for leaves, he told them they could only get leaves if they were able to mint money for him through corruption and bribes.