Job Fraud, Puttur: ಉದ್ಯೋಗ ಇದೆಯೆಂದು ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟು ಮೋಸ ; 2 ಲಕ್ಷಕ್ಕೂ ಹೆಚ್ಚು ಕಳಕೊಂಡ ಪುತ್ತೂರಿನ ಯುವತಿ, ತುಮಕೂರಿನ ಲೇಡಿ ಸೇರಿ ಮೂವರು ಅರೆಸ್ಟ್ ! 

09-02-24 06:41 pm       Mangalore Correspondent   ಕ್ರೈಂ

ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವತಿಯೊಬ್ಬರಿಗೆ ಹಣ ವಂಚನೆ ಮಾಡಿದ ಪ್ರಕರಣವನ್ನು ಭೇದಿಸಿರುವ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ತುಮಕೂರು ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪುತ್ತೂರು, ಫೆ.9: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವತಿಯೊಬ್ಬರಿಗೆ ಹಣ ವಂಚನೆ ಮಾಡಿದ ಪ್ರಕರಣವನ್ನು ಭೇದಿಸಿರುವ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ತುಮಕೂರು ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ತುಮಕೂರಿನ ಚಿಕ್ಕನಾಯಕನಹಳ್ಳಿಯ ಸುಮಿತ್ರ ಬಾಯಿ ಸಿ.ಆರ್.(23), ಹಾಸನದ ಹಳಸಿನಹಳ್ಳಿಯ ಸೌಂದರ್ಯ ಎಂ.ಎಸ್.(21), ತುಮಕೂರಿನ ಚಿಕ್ಕನಾಯಕನಹಳ್ಳಿಯ ರಾಹುಲ್‌ ಕುಮಾರ್ ನಾಯ್ಕ(19) ಬಂಧಿತರು. 

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಚೇರಿ ಕೆಲಸ ಖಾಲಿ ಇದೆ. ನಿರುದ್ಯೋಗಿಗಳಿಗೆ ಬಂದ ದಿನವೇ ಕೆಲಸ ಸಿಗುತ್ತದೆ ಎಂಬುದಾಗಿ ಪತ್ರಿಕೆಗಳಲ್ಲಿ ಬಂದಿದ್ದ ಜಾಹೀರಾತು ನೋಡಿದ ಪುತ್ತೂರಿನ ಆರ್ಯಾಪು ಗ್ರಾಮದ ಯುವತಿಯೊಬ್ಬಳು ಜಾಹೀರಾತಿನಲ್ಲಿ ನಮೂದಿಸಿದ್ದ ಫೋನ್ ನಂಬ‌ರ್ ಗೆ ಕರೆ ಮಾಡಿ ವಿಚಾರಿಸಿದ್ದರು. ಕರೆಯನ್ನು ಸ್ವೀಕರಿಸಿದವರು, ನೀವು ಕೆಲಸಕ್ಕೆ ಸೇರ ಬಯಸಿದರೆ ಇಂತಿಷ್ಟು ಶುಲ್ಕ ಕೊಡಬೇಕಾಗುತ್ತದೆ ಎಂದು ತಿಳಿಸಿದ್ದರು. ಅದರಂತೆ, ಕಳೆದ 7 ತಿಂಗಳಿನಿಂದ ಯುವತಿ ಆನ್ ಲೈನ್ ಮೂಲಕ ಹಣ ಪಾವತಿ ಮಾಡಿದ್ದರು. ಗೂಗಲ್ ಪೇ ಮುಖಾಂತರ ಒಟ್ಟು 2,25,001 ರೂ.ವನ್ನು ಆರೋಪಿಗಳ ಖಾತೆಗೆ ಪಾವತಿಸಿದ್ದರು. ಉದ್ಯೋಗದ ಬಗ್ಗೆ ವಿಚಾರಿಸಿದರೆ, ಇಲ್ಲಸಲ್ಲದ ನೆಪ ಹೇಳಿ ಕಾಲ ತಳ್ಳುತ್ತಿದ್ದರು. 

ಇದರ ಬಳಿಕವೂ ಆರೋಪಿಗಳು ಉದ್ಯೋಗ ನೀಡದೇ ವಂಚಿಸಿದ್ದಾರೆ ಎಂದು ಯುವತಿ ಪುತ್ತೂರಿನ ಸಂಪ್ಯ ಠಾಣೆಗೆ ದೂರು ನೀಡಿದ್ದರು. ಮೊಬೈಲ್ ನಂಬರ್, ಗೂಗಲ್ ಪೇ, ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿ ಆಧರಿಸಿ ಪೊಲೀಸರು ತನಿಖೆ ನಡೆಸಿದ್ದು ಆರೋಪಿಗಳ ಜಾಡು ಪತ್ತೆ ಮಾಡಿ ಅರೆಸ್ಟ್ ಮಾಡಿದ್ದಾರೆ. ‌ಇಬ್ಬರು ಯುವತಿಯರು ಸೇರಿ ಒಂದೇ ಪ್ರಾಯದ ಮೂವರು ಪ್ರಕರಣದಲ್ಲಿ ಸಿಕ್ಕಿಬಿದ್ದು ಈಗ ಜೈಲು ಸೇರಿದ್ದಾರೆ. ಸೈಬರ್ ಅಪರಾಧ ರೀತಿಯ ಪ್ರಕರಣ ಆಗಿದ್ದರೂ, ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟು ಮೋಸ ಎಸಗಿದ್ದನ್ನು ಗಂಭೀರ ಪರಿಗಣಿಸಿದ ಎಸ್ಪಿ ರಿಷ್ಯಂತ್ ಸಿಂಗ್ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ರವಿ ಬಿ.ಎನ್ ನೇತೃತ್ವದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Puttur rural police have arrested three persons from Tumakuru in connection with the case of duping a woman of money on the pretext of providing her a job.