Udupi crime, robbery: ಐಟಿ ಅಧಿಕಾರಿಗಳ ಸೋಗಿನಲ್ಲಿ ದರೋಡೆ ಸಂಚು ; ಮುಂಬೈನಲ್ಲಿ ಇಬ್ಬರು ಸೆರೆ, ಸಿಸಿಟಿವಿ ಅಲರ್ಟ್ ನಿಂದ ಬಚಾವಾಗಿದ್ದ ಪ್ರಕರಣ, ತಿಂಗಳ ಬಳಿಕ ಪತ್ತೆ ಮಾಡಿದ ಕೋಟ ಪೊಲೀಸರು 

22-08-24 11:33 am       Udupi Correspondent   ಕ್ರೈಂ

ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಲು ಯತ್ನಿಸಿ, ದರೋಡೆಗೆ ಹೊಂಚು ಹಾಕಿದ್ದ ಪ್ರಕರಣದ ಬೆನ್ನತ್ತಿದ ಕೋಟ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಜುಲೈ 25ರಂದು ಮಣೂರು ಸಮೀಪದ ಕರಿಕಲ್ ಕಟ್ಟೆಯಲ್ಲಿ ಮನೆ ಆವರಣದ ಗೋಡೆಯನ್ನು ದಾಟಿ ದರೋಡೆಗೆ ಯತ್ನಿಸಿದ್ದ ಘಟನೆ ನಡೆದಿತ್ತು. 

ಉಡುಪಿ, ಆಗಸ್ಟ್ 22: ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಲು ಯತ್ನಿಸಿ, ದರೋಡೆಗೆ ಹೊಂಚು ಹಾಕಿದ್ದ ಪ್ರಕರಣದ ಬೆನ್ನತ್ತಿದ ಕೋಟ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಜುಲೈ 25ರಂದು ಮಣೂರು ಸಮೀಪದ ಕರಿಕಲ್ ಕಟ್ಟೆಯಲ್ಲಿ ಮನೆ ಆವರಣದ ಗೋಡೆಯನ್ನು ದಾಟಿ ದರೋಡೆಗೆ ಯತ್ನಿಸಿದ್ದ ಘಟನೆ ನಡೆದಿತ್ತು. 

ಮೂಲತಃ ಚಿಕ್ಕಮಗಳೂರು ಜಿಲ್ಲೆಯವನಾದ ಮುಂಬೈ ನಿವಾಸಿ ಸಂತೋಷ್‌ ನಾಯಕ್‌(45) ಹಾಗೂ ಉಡುಪಿ ಜಿಲ್ಲೆ ಕಾಪು ಪೊಲಿಪು ಮೂಲದ, ಪ್ರಸ್ತುತ ಮುಂಬೈ ನಿವಾಸಿ ದೇವರಾಜ್‌ ಸುಂದರ್‌ ಮೆಂಡನ್‌(46) ಬಂಧಿತ ಆರೋಪಿಗಳು. ಇವರು ಕೃತ್ಯಕ್ಕೆ ಬಳಸಿದ್ದ ಇನ್ನೋವಾ ಕಾರನ್ನು ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ಸ್ಥಳೀಯರು ಸೇರಿದಂತೆ ಹಲವರು ಭಾಗಿಯಾಗಿದ್ದು, ಉಳಿದ ಆರೋಪಿತರ ಪತ್ತೆಗಾಗಿ ಹುಡುಕಾಟ ನಡೆದಿದೆ.

ಜು.25 ರಂದು ಬೆಳಿಗ್ಗೆ 8.30ರ ವೇಳೆಯಲ್ಲಿ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ತೆಕ್ಕಟ್ಟೆ ಮಣೂರಿನ ನಿವಾಸಿ ಕವಿತಾ ಎಂಬವರ ಮನೆಯ ಗೇಟಿನ ಹೊರಗೆ ದೆಹಲಿ ನೋಂದಣಿಯ ಸ್ವಿಫ್ಟ್ ಮತ್ತು ಇನೋವಾ ಕಾರಿನಲ್ಲಿ ಸುಮಾರು 6 -8 ಜನ ಅಪರಿಚಿತರು ಆಗಮಿಸಿದ್ದು ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆಯ ಒಳನುಗ್ಗುವ ಪ್ರಯತ್ನ ಮಾಡಿತ್ತು. ತಂಡದಲ್ಲಿದ್ದವರು ಅಧಿಕಾರಿಗಳಂತೆ ಪೋಸು ನೀಡಿದ್ದಲ್ಲದೆ, ಒಬ್ಬ ಪೊಲೀಸ್ ಅಧಿಕಾರಿಯ ಸಮವಸ್ತ್ರ ಧರಿಸಿದ್ದ. ಮನೆಯವರು ಗೇಟಿನ ಬಾಗಿಲು ತೆರೆಯದೇ ಇದ್ದಾಗ, ಗೇಟನ್ನು ಹಾರಿ ಅಕ್ರಮ ಪ್ರವೇಶ ಮಾಡಲು ಪ್ರಯತ್ನ ನಡೆಸಿತ್ತು.

ಆದರೆ ಮನೆಯಲ್ಲಿ ಅಳವಡಿಸಿದ್ದ ಸೈನ್ ಇನ್ ಸೆಕ್ಯೂರಿಟಿ ಸಿಸಿ ಕ್ಯಾಮರಾ ಕಣ್ಗಾವಲಿನ ತಂಡ ಕೂಡಲೇ ಅಲರ್ಟ್ ಆಗಿದ್ದಲ್ಲದೆ, ಅನುಮಾನಗೊಂಡು ಮನೆಯವರನ್ನು ಸಂಪರ್ಕಿಸಿ ಗೇಟ್ ಓಪನ್ ಮಾಡದಂತೆ ಸೂಚನೆ ನೀಡಿತ್ತು. ಕೊನೆಗೆ, ಹಾಡಹಗಲೇ ಅಧಿಕಾರಿಗಳ ಸೋಗಿನಲ್ಲಿ ಬಂದಿದ್ದವರು ಮನೆಯ ಬಾಗಿಲು ಸಾಧ್ಯವಾಗದೆ ಬರಿಗೈಲಿ ವಾಪಾಸಾಗಿದ್ದರು. ಮನೆಯಾಕೆ ಕೂಡಲೇ ಕೋಟ ಪೊಲೀಸರಿಗೆ ಮಾಹಿತಿ ನೀಡಿದ್ದರು.‌

ಅಪರಿಚಿತರ ತಂಡ ಸಾಸ್ತಾನ ಟೋಲ್ ಗೇಟ್‌ನಲ್ಲಿ ಸಾಗದೆ ಬಾರ್ಕೂರು ಮೂಲಕ ಪರಾರಿಯಾಗಿರುವ ಅಂಶ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿತ್ತು. ದೂರು ದಾಖಲಿಸಿಕೊಂಡಿದ್ದ ಕೋಟ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿಗಳ ಆಧಾರದಲ್ಲಿ ಅಪರಿಚಿತರ ಜಾಲ ಹುಡುಕಲು ಮುಂದಾಗಿದ್ದರು. ಬ್ರಹ್ಮಾವರ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ ಪಿ.ಎಂ ನೇತೃತ್ವದಲ್ಲಿ ಕೋಟ ಠಾಣಾ ಎಸ್‌ಐಗಳಾದ ಗುರುನಾಥ ಬಿ ಹಾದಿಮನಿ ಹಾಗೂ ಸುಧಾಪ್ರಭು, ಹಿರಿಯಡ್ಕ ಠಾಣಾ ಎಸ್‌ಐ ಮಂಜುನಾಥ ಅವರನ್ನು ಒಳಗೊಂಡ ಪ್ರತ್ಯೇಕ 3 ತಂಡಗಳನ್ನು ರಚಿಸಲಾಗಿತ್ತು. ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು, ಮುಂಬೈ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಆರೋಪಿಗಳ ಚಲನವಲನಗಳನ್ನು ಪತ್ತೆ ಮಾಡಿದ್ದ ಪೊಲೀಸರು ಮುಂಬೈಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ಮಹಾರಾಷ್ಟ್ರದಿಂದ ಬಂದಿದ್ದ ಆರೋಪಿತರು ಸ್ಥಳೀಯರ ಸಹಕಾರದಲ್ಲಿ ಐಟಿ ದಾಳಿ ನೆಪದಲ್ಲಿ ಮನೆಗೆ ನುಗ್ಗಿ ದರೋಡೆ ಮಾಡುವ ಸಂಚು ರೂಪಿಸಿದ್ದರು ಎನ್ನುವ ಅಂಶ ಬೆಳಕಿಗೆ ಬಂದಿದೆ.

Udupi Kota police arrest two in attempted robbery case posing as IT officers. The incident took place in one Kavitha's house, located near the Manuru bus stop in Manuru village in Kota of the taluk.