Mangalore crime, police, Gold: ಕ್ರಿಸ್ತಿಯನ್ ಅಂಟಿಗಳಿಗೆ ಪ್ರೀತಿ, ಸ್ನೇಹದ ಹೆಸ್ರಲ್ಲಿ ವಂಚನೆ, ಚಿನ್ನಾಭರಣ ಕಿತ್ಕೊಂಡು ಎಸ್ಕೇಪ್, ಮುಂಬೈನಲ್ಲಿ ಅಡಗಿದ್ದ 'ಬುದ್ಧಿವಂತ' ವಂಚಕ ಮಂಗಳೂರು ಪೊಲೀಸರ ಬಲೆಗೆ

18-09-24 10:08 pm       Mangalore Correspondent   ಕ್ರೈಂ

ಕೆಲವರಿಗೆ ಇದೊಂದು ಖಯಾಲಿ. ಪ್ರೀತಿ, ಸ್ನೇಹದ ನೆಪದಲ್ಲಿ ಮಹಿಳೆಯರ ಗೆಳೆತನ ಸಂಪಾದಿಸಿ ಅವರ ಚಿನ್ನಾಭರಣಗಳನ್ನೇ ಕಿತ್ಕೊಂಡು ನಾಪತ್ತೆಯಾಗುವುದು.

ಮಂಗಳೂರು, ಸೆ.18: ಕೆಲವರಿಗೆ ಇದೊಂದು ಖಯಾಲಿ. ಪ್ರೀತಿ, ಸ್ನೇಹದ ನೆಪದಲ್ಲಿ ಮಹಿಳೆಯರ ಗೆಳೆತನ ಸಂಪಾದಿಸಿ ಅವರ ಚಿನ್ನಾಭರಣಗಳನ್ನೇ ಕಿತ್ಕೊಂಡು ನಾಪತ್ತೆಯಾಗುವುದು. ಕಾರ್ಕಳ ಮೂಲದ ರೋಹಿತ್ ಮಥಾಯಸ್ ಎಂಬ ನಟೋರಿಯಸ್ ವ್ಯಕ್ತಿಯೊಬ್ಬ ಮಂಗಳೂರು ನಗರದ ಕುಲಶೇಖರದ ಮಹಿಳೆಯೊಬ್ಬರನ್ನು ವಂಚಿಸಿ ಚಿನ್ನಾಭರಣ ಕಿತ್ಕೊಂಡು ಪರಾರಿಯಾಗಿದ್ದ. ಘಟನೆ ನಡೆದ ಬಳಿಕ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.

ಕುಲಶೇಖರದ ಕ್ರಿಸ್ತಿಯನ್ ಮಹಿಳೆಯೊಬ್ಬರನ್ನು ನಂಬಿಸಿ ಜೊತೆಗೆ ವಾಸ ಮಾಡಿಕೊಂಡಿದ್ದ ರೋಹಿತ್ ಮಥಾಯಸ್ 2021ರ ನವೆಂಬರ್ 7ರಂದು ಚಿನ್ನಾಭರಣಗಳ ಜೊತೆಗೆ ಪರಾರಿಯಾಗಿದ್ದ. ಈ ಬಗ್ಗೆ ಮಹಿಳೆ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದ. ಮುಂಬೈನಲ್ಲಿ ತಲೆಮರೆಸಿಕೊಂಡಿದ್ದಾನೆಂದು ಪತ್ತೆಹಚ್ಚಿದ್ದ ಪೊಲೀಸರು ಆತನ ಬರುವಿಕೆಗಾಗಿ ಕಾದು ಕುಳಿತಿದ್ದರು. ಇದೀಗ ಅಲ್ಲಿಂದ ಹಿಂದಿರುಗುತ್ತಲೇ ಆರೋಪಿಯನ್ನು ಬಂಧಿಸಿದ್ದಾರೆ. 7 ಲಕ್ಷ ಮೌಲ್ಯದ ಚಿನ್ನಾಭರಣಗಳ ಜೊತೆಗೆ ಮೂಲತಃ ಬೆಳ್ಮಣ್ ನಿವಾಸಿಯಾಗಿರುವ ರೋಹಿತ್ ನನ್ನು ಪೊಲೀಸರು ಬಂಧಿಸಿದ್ದಾರೆ. 

ಇದೇ ಆರೋಪಿ ರೋಹಿತ್ ಈ ಹಿಂದೆ 2019ರಲ್ಲಿ ಕಾರ್ಕಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬೆಳ್ಮಣ್ ಗ್ರಾಮದಲ್ಲಿ ನಿವೃತ್ತ ಪಿಡಿಓ ಆಗಿದ್ದ ಭರತಲಕ್ಷ್ಮಿ ಎಂಬ ಮಹಿಳೆಯನ್ನು ಚಿನ್ನಾಭರಣದ ಆಸೆಯಿಂದ ಕೊಲೆ ಮಾಡಿದ್ದ. ಮಹಿಳೆಯನ್ನು ಆಕೆಯ ಮನೆಯಲ್ಲೇ ಕೊಲೆಗೈದು ಬಳಿಕ ದೇಹವನ್ನು ಇತರೊಂದಿಗೆ ಸೇರಿಕೊಂಡು ಬಾವಿಗೆಸೆದಿದ್ದರು. ಮೃತದೇಹವನ್ನು ಪ್ಲಾಸ್ಟಿಕ್ ನಲ್ಲಿ ಸುತ್ತಿ ಎಸೆದ ಪ್ರಕರಣವನ್ನು ಪತ್ತೆ ಮಾಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ, ಜೈಲಿಗಟ್ಟಿದ್ದರು. ಜೈಲಿನಿಂದ ಜಾಮೀನಿನಲ್ಲಿ ಹೊರಬಂದಿದ್ದ ಆರೋಪಿ ಆನಂತರ ಪೊಲೀಸರ ಕೈಗೆ ಸಿಗದೆ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ.

ಆರೋಪಿ ರೋಹಿತ್ ಮಥಾಯಸ್ ಕ್ರಿಸ್ತಿಯನ್ ಸಮುದಾಯದ ಯುವತಿ, ಮಹಿಳೆಯರನ್ನೇ ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯ ಮಾಡಿಕೊಂಡು ಸ್ನೇಹ ಗಳಿಸಿ, ಬಳಿಕ ಅವರ ಮನೆಗಳಿಂದಲೇ ಹಣ, ಚಿನ್ನಾಭರಣಗಳೊಂದಿಗೆ ಪರಾರಿಯಾಗುವ ಖಯಾಲಿ ಇಟ್ಟುಕೊಂಡಿದ್ದಾನೆ. ಇದೇ ರೀತಿ ಹಲವು ಮಹಿಳೆಯರಿಗೆ ವಂಚನೆ ನಡೆಸಿದ್ದಾನೆಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಕನ್ನಡಲ್ಲಿ ಉಪೇಂದ್ರ ನಟನೆಯ ಬುದ್ಧಿವಂತ ಎನ್ನುವ ಚಲನಚಿತ್ರ ಬಂದಿತ್ತು. ಅದರಲ್ಲಿ ಉಪೇಂದ್ರ ಯುವತಿಯರನ್ನು ಇದೇ ರೀತಿಯಲ್ಲಿ ವಂಚಿಸಿ, ಚಿನ್ನಾಭರಣಗಳ ಜೊತೆಗೆ ಪರಾರಿಯಾಗುವ ಕಥಾನಕ ಇತ್ತು. ಅದೇ ಶೈಲಿಯಲ್ಲಿ ಆರೋಪಿ ರೋಹಿತ್ ಮಥಾಯಸ್ ಮಂಗಳೂರು, ಉಡುಪಿ, ಕಾರ್ಕಳದ ಯುವತಿಯರಿಗೆ ಬಲೆ ಬೀಸಿ ವಂಚಿಸಿರುವುದು ಪತ್ತೆಯಾಗಿದೆ.

ತಲೆತಪ್ಪಿಸಿಕೊಂಡೇ ವಂಚನೆ ಪ್ರಕರಣ ಎಸಗುತ್ತಿದ್ದ ಆರೋಪಿಯನ್ನು ಕಂಕನಾಡಿ ಇನ್ಸ್ ಪೆಕ್ಟರ್ ನಾಗರಾಜ್ ಟಿ.ಡಿ. ನೇತೃತ್ವದ ಪೊಲೀಸರು ಉಪಾಯದಿಂದ ಅರೆಸ್ಟ್ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ವಿನಾಯಕ ಬಾವಿಕಟ್ಟಿ, ಶಿವಕುಮಾರ್, ಯೋಗೀಶ್ವರನ್, ಜಯಾನಂದ, ರಾಘವೇಂದ್ರ, ಗಂಗಾಧರ್, ರಾಜೆಸಾಬ ಮುಲ್ಲಾ, ಚೇತನ್, ಮುತ್ತಣ್ಣ ಮತ್ತು ಪ್ರವೀಣ್ ಪಾಲ್ಗೊಂಡಿದ್ದರು.

Mangalore Notorious thief targeting christian ladies and looting gold has been arrested from Mumbai by Mangalore police. The arrested has been identified as Mathias from Belman. Gold worth Rs 7 lac has been recovered from the accused, who was apprehended after a detailed investigation.