ಬ್ರೇಕಿಂಗ್ ನ್ಯೂಸ್
15-12-24 01:03 pm Giridhar Shetty, Mangalore ಕ್ರೈಂ
ಮಂಗಳೂರು, ಡಿ.13: ಕಳ್ಳ, ಪೊಲೀಸ್ ಮತ್ತು ಬ್ಯಾಂಕಿನವರು ಜೊತೆಗೂಡಿದರೆ ಏನಾದೀತು? ಬ್ಯಾಂಕ್ ಲೂಟಿಯಾಗೋದು ಮಾತ್ರನಾ, ಇಡೀ ವ್ಯವಸ್ಥೆಯೇ ಲೂಟಿ ಆಗಬಹುದಾ..? ದಾಖಲೆಗಳನ್ನು ಪೋರ್ಜರಿ ಮಾಡಿ, ಬೋಗಸ್ ಕಂಪನಿಯನ್ನು ಸೃಷ್ಟಿಸಿ 36 ಲಕ್ಷ ಲೋನ್ ತೆಗೆದು ಕುತ್ತಿಗೆ ಬರುತ್ತೆ ಎಂದಾಗ, ಬ್ಯಾಂಕ್ ಅಧಿಕಾರಿಗಳು ಕಳ್ಳ ಮತ್ತು ಪೊಲೀಸರನ್ನು ಮುಂದಿಟ್ಟು ಬಡಪಾಯಿ ಸಂತ್ರಸ್ತರನ್ನೇ ಕಳ್ಳನಾಗಿಸಲು ಹೊರಟಿದ್ದಾರೆ. ಹೌದು.. ಈ ಪ್ರಕರಣದಲ್ಲಿ ಮಂಗಳೂರು ಪೊಲೀಸರು ಮತ್ತು ಬ್ಯಾಂಕ್ ಅಧಿಕಾರಿಗಳೇ ನೇರ ಶಾಮೀಲಾಗಿರುವಂತೆ ತೋರುತ್ತಿದೆ.
2017ರಲ್ಲಿ ಅಡ್ಯಾರ್ ಪದವು ನಿವಾಸಿ ನೋಯಲ್ ಮೈಕಲ್ ಸಲ್ದಾನಾ ಎಂಬವರು ತನ್ನ ಮದುವೆ ಖರ್ಚಿಗೆಂದು ಜಾಗದ ಮೇಲೆ ಲೋನ್ ಪಡೆಯಲು ಮುಂದಾಗಿದ್ದರು. ತನ್ನ ಸ್ನೇಹಿತ ಇಬ್ರಾಹಿಂ ಎಂಬವರಲ್ಲಿ ಬ್ಯಾಂಕ್ ಲೋನ್ ಬಗ್ಗೆ ಕೇಳಿದಾಗ, ಮಂಗಳೂರಿನ ಶೇಖ್ ಅಬ್ದುಲ್ಲಾ ಮತ್ತು ಬಂಟ್ವಾಳದ ಅಂಬ್ರೋಸ್ ಡಿಸೋಜ ಎಂಬ ಆಸಾಮಿಗಳನ್ನು ಪರಿಚಯಿಸಿದ್ದರು. ಜಾಗದ ಲೋನ್ ಪಡೆಯಲು ತನ್ನ ಕೃಷಿ ಜಮೀನು ಇರುವುದನ್ನು ಹೇಳಿ, ಅದರ ಒರಿಜಿನಲ್ ದಾಖಲೆ ಪತ್ರಗಳನ್ನು ಅವರಿಗೆ ಕೊಟ್ಟಿದ್ದರು. ಶೇಖ್ ಅಬ್ದುಲ್ಲಾ ಮತ್ತು ಅಂಬ್ರೋಸ್ ಡಿಸೋಜ ಅದಕ್ಕೂ ಮೊದಲೇ ಗೋಲ್ಡನ್ ಎಂಟರ್ ಪ್ರೈಸಸ್ ಹೆಸರಿನಲ್ಲಿ ನಕಲಿ ಕಂಪನಿಯೊಂದನ್ನು ಸೃಷ್ಟಿಸಿದ್ದರು. ನೋಯಲ್ ಮೈಕಲ್ ಸಲ್ದಾನಾ ಅವರಿಗೆ ತಿಳಿಸದೆ, ತಮ್ಮ ಕಂಪನಿಗೆ ಇವರನ್ನೂ ಪಾರ್ಟ್ನರ್ ಎಂದು ತೋರಿಸಿ ಇವರದ್ದೇ ಜಾಗವನ್ನು ಅಡವಿಟ್ಟು ಮಂಗಳೂರಿನ ಕೆನರಾ ಬ್ಯಾಂಕ್, ನೆಲ್ಲಿಕಾಯಿ ರೋಡ್ ಶಾಖೆಯಿಂದ 36 ಲಕ್ಷ ಸಾಲ ತೆಗೆದಿದ್ದಾರೆ.
ಇದಕ್ಕಾಗಿ ನೋಯಲ್ ಸಲ್ದಾನ ಅವರ 35 ಸೆಂಟ್ಸ್ ಜಾಗವನ್ನು ಅಕ್ರಮವಾಗಿ ಡಿಸಿ ಕನ್ವರ್ಶನ್ ಮತ್ತು 9-11 ದಾಖಲೀಕರಣವನ್ನೂ ಮಾಡಿದ್ದಾರೆ. ನೋಯಲ್ ಅವರಿಗೆ ತಿಳಿಸದೆ ಇದೆಲ್ಲವನ್ನೂ ಮಾಡಿದ್ದರು. ಆನಂತರ ಗೋಲ್ಡನ್ ಎಂಟರ್ ಪ್ರೈಸಸ್ ಖಾತೆಯಿಂದ 3 ಲಕ್ಷ ಹಾಗೂ ಶೇಖ್ ಅಬ್ದುಲ್ಲಾ ಖಾತೆಯಿಂದ ಮತ್ತೆ 60 ಸಾವಿರ ರೂ.ವನ್ನು ನೋಯಲ್ ಅವರಿಗೆ ವರ್ಗಾವಣೆ ಮಾಡಲಾಗಿತ್ತು. ಪ್ರತಿಯಾಗಿ ನೋಯಲ್ ಅವರಲ್ಲಿ ತಿಂಗಳಿಗೆ 50 ಸಾವಿರದಂತೆ ಕಂತು ಪಾವತಿ ಮಾಡಲು ಸೂಚಿಸಿದ್ದರು. ಇವರನ್ನು ಎಷ್ಟು ನಂಬಿದ್ದರಂದ್ರೆ, ನೋಯಲ್ ತಮ್ಮ ತಿಂಗಳ ಕಂತಿನ ಹಣವನ್ನೂ ಶೇಖ್ ಅಬ್ದುಲ್ಲಾ ಬಳಿಯೇ ನೀಡತೊಡಗಿದ್ದರು. ಆದರೆ, 2018ರ ಡಿಸೆಂಬರ್ ತಿಂಗಳಲ್ಲಿ ಕೆನರಾ ಬ್ಯಾಂಕಿನಿಂದ ನೋಯಲ್ ಮೈಕಲ್ ಸಲ್ದಾನ ಮತ್ತು ಅವರ ತಂದೆ ಜಾನ್ ಸಲ್ದಾನಾ ಅವರಿಗೆ ನೋಟೀಸ್ ಬಂದಿದ್ದು, ನಿಮ್ಮ ಜಾಗವನ್ನು ಅಡವಿಟ್ಟಿದ್ದು, ಒಟ್ಟು 40.19 ಲಕ್ಷ ಹಣವನ್ನು ಕಟ್ಟಬೇಕಾಗುತ್ತದೆ ಎಂದು ಸೂಚಿಸಿತ್ತು. ನೀವಿಬ್ಬರು 36 ಲಕ್ಷ ಸಾಲಕ್ಕೆ ಗ್ಯಾರಂಟಿ ಇದ್ದೀರಿ ಎಂದು ತೋರಿಸಿದ್ದರು.
ಇಷ್ಟಾಗುತ್ತಿದ್ದಂತೆ ಎಚ್ಚೆತ್ತ ನೋಯಲ್ ಸಲ್ದಾನ ಬ್ಯಾಂಕಿನಲ್ಲಿ ಚೆಕ್ ಮಾಡಿದಾಗ, ತಮ್ಮ ಜಾಗದ ದಾಖಲೆಯನ್ನು ಬಳಸಿ ಶೇಖ್ ಅಬ್ದುಲ್ಲಾ ಮತ್ತು ಅಂಬ್ರೋಸ್ ಡಿಸೋಜ ಸಾಲ ತೆಗೆದಿರುವುದು ತಿಳಿದುಬಂದಿತ್ತು. ಅಡ್ಯಾರು ಗ್ರಾಮ ಪಂಚಾಯತ್ ನಲ್ಲಿ ಪರಿಶೀಲಿಸಿದ ಸಂದರ್ಭದಲ್ಲಿ ತನ್ನ ಸಹಿಯನ್ನೇ ಪೋರ್ಜರಿ ಮಾಡಿರುವುದು ಮತ್ತು 9-11 ದಾಖಲೆ ಪಡೆದಿರುವುದೂ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ 2019ರ ಮೇ 26ರಂದು ಪಾಂಡೇಶ್ವರ ಠಾಣೆಯಲ್ಲಿ ಪೋರ್ಜರಿ ದಾಖಲೆ ಸೃಷ್ಟಿಸಿ ತನ್ನ ಜಾಗದ ಮೇಲೆ 36 ಲಕ್ಷ ಸಾಲ ತೆಗೆದಿರುವುದು ಮತ್ತು ಬೇನಾಮಿ ಕಂಪನಿಯನ್ನು ಸೃಷ್ಟಿಸಿರುವ ಬಗ್ಗೆ ನೋಯಲ್ ದೂರು ದಾಖಲಿಸಿದ್ದರು. ಆನಂತರ, ಆರೋಪಿಗಳನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದೂ ಆಗಿತ್ತು. ನಕಲಿ ಕಂಪನಿ ಮತ್ತು ಪೋರ್ಜರಿ ದಾಖಲೆ ಸೃಷ್ಟಿಸಿದ್ದ ಬಗ್ಗೆ ಸ್ಪಷ್ಟ ಸಾಕ್ಷ್ಯ ಇದ್ದರೂ, ಪೊಲೀಸರು ಮಾತ್ರ ತನಿಖೆಯನ್ನೇ ದಿಕ್ಕುತಪ್ಪಿಸಿದ್ದರು.
ಬೋಗಸ್ ಕಂಪನಿ ಮೇಲೆ ಬ್ಯಾಂಕ್ ಲೋನ್
ಗೋಲ್ಡನ್ ಎಂಟರ್ ಪ್ರೈಸಸ್ ಮಂಗಳೂರು ಬಂದರಿನ ರೀಗಲ್ ಪಾರ್ಕ್, ಮಿಶನ್ ಸ್ಟ್ರೀಟ್ ನಲ್ಲಿರುವ ಫರ್ನಿಚರ್ ಮಾರಾಟ ಮಳಿಗೆಯೆಂದು ತೋರಿಸಿದ್ದು, ದಾಖಲೆಗಳಲ್ಲಿ ಒಂದು ಕಡೆ ಪ್ರೊಪ್ರೈಟರ್ ಶಿಪ್ ಕಂಪನಿಯೆಂದು ತೋರಿಸಿದ್ದರೆ, ಮತ್ತೊಂದು ಕಡೆ ಪಾಲುದಾರಿಕೆಯ ಸಂಸ್ಥೆಯೆಂದು ತೋರಿಸಿದ್ದಾರೆ. ಪಾಲುದಾರಿಕೆ ಡೀಡ್ ನಲ್ಲಿ ಮೈಕಲ್ ಸಲ್ದಾನ ಮತ್ತು ಶೇಖ್ ಅಬ್ದುಲ್ಲಾ ಎಂಬವರನ್ನು ಪಾಲುದಾರರು ಎಂದು ತೋರಿಸಿದ್ದರೆ, ಅಂಬ್ರೋಸ್ ಡಿಸೋಜ ಮತ್ತು ಶೇಖ್ ಅಬ್ದುಲ್ಲಾ ಅವರು ಸಾಕ್ಷಿಯಾಗಿ ತಮ್ಮ ವಿಳಾಸ ಸಹಿತ ಸಹಿ ಹಾಕಿದ್ದಾರೆ. ಇವರೆಡನ್ನೂ 2017ರಲ್ಲಿ ರಚಿಸಿರುವಂತೆ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಮೇಲ್ನೋಟಕ್ಕೆ ಈ ಕಂಪನಿಯೇ ನಕಲಿಯೆಂದು ಕಂಡುಬರುತ್ತದೆ. ಪಾಲುದಾರಿಕೆ ಡೀಡ್ ನಲ್ಲಿಯೂ ನಕಲಿ ಸಹಿಯನ್ನೇ ಹಾಕಲಾಗಿದೆ.
ಇದಲ್ಲದೆ, ನೋಯಲ್ ಅವರ ತಂದೆ ಜಾನ್ ಸಲ್ದಾನಾ ಅವರಿಗೆ ಸೇರಿದ ಹತ್ತು ಸೆಂಟ್ಸ್ ಜಾಗವನ್ನು ಬಂಟ್ವಾಳ ನಿವಾಸಿ ಸಚ್ಚಿದಾನಂದ ಶೆಟ್ಟಿ ಎಂಬವರಿಗೆ ದಾನ ನೀಡಿರುವುದಾಗಿ ಮತ್ತೊಂದು ಪೋರ್ಜರಿ ಮಾಡಲಾಗಿದೆ. ಇದನ್ನೂ ಅಂಬ್ರೋಸ್ ಮತ್ತು ಶೇಖ್ ಅಬ್ದುಲ್ಲಾ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ನೋಯಲ್ ಸಲ್ದಾನ ಅವರು ತಮ್ಮ ಜಾಗದ ಪೋರ್ಜರಿ ಆಗಿರುವುದಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಬೆಂಗಳೂರು ಕಚೇರಿಗೆ ದೂರು ಬರೆದಿದ್ದರು. ಇದರ ಬಗ್ಗೆ ತನಿಖೆಗೆ ಆದೇಶ ಆಗಿದ್ದು, ಮಂಗಳೂರಿನ ಉಪ ನೋಂದಣಾಧಿಕಾರಿ ಶಶಿಧರ್ ಘಂಟಿಮಠ ಅವರು 2022ರ ಎಪ್ರಿಲ್ 29ರಂದು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ. ನೋಯಲ್ ನೀಡಿರುವ ದೂರಿನಲ್ಲಿ ಸಚ್ಚಿದಾನಂದ ಶೆಟ್ಟಿ, ಅಂಬ್ರೋಸ್ ಡಿಸೋಜ, ಶೇಖ್ ಅಬ್ದುಲ್ಲಾ ಮತ್ತು ಆಗಿನ ಸಬ್ ರಿಜಿಸ್ಟ್ರಾರ್ ಕೆಪಿ ನಂಜೇಶ್ ವಿರುದ್ಧ ಆರೋಪಿಸಲಾಗಿತ್ತು. ಎಫ್ಐಆರ್ ದಾಖಲು ಸಂದರ್ಭದಲ್ಲಿ ಸಬ್ ರಿಜಿಸ್ಟ್ರಾರ್ ಹೆಸರನ್ನು ಕೈಬಿಟ್ಟಿದ್ದಲ್ಲದೆ, ಈ ಪ್ರಕರಣದಲ್ಲಿಯೂ ಪೊಲೀಸರು ತನಿಖೆಯನ್ನು ಪೂರ್ತಿಗೊಳಿಸಿಲ್ಲ.
ಇದೇ ವೇಳೆ, ಅಡ್ಯಾರ್ ಪಂಚಾಯತಿನಿಂದ ಸದ್ರಿ ಜಾಗದ ಬಗ್ಗೆ ಇ-ಸ್ವತ್ತು 9-11 ಎ ವಿತರಿಸಿದ ಬಗ್ಗೆ ಜಿಪಂ ಸಿಇಓ ಸೂಚನೆಯಂತೆ ಪ್ರತ್ಯೇಕ ಕಮಿಟಿ ತನಿಖೆ ನಡೆಸಿ 2021ರಲ್ಲಿ ವರದಿ ನೀಡಿತ್ತು. ಆ ವರದಿಯಲ್ಲಿ ಅಡ್ಯಾರು ಪಂಚಾಯತ್ ನಲ್ಲಿ ಪಿಡಿಓ ಆಗಿದ್ದ ಓಸ್ವಾಲ್ಡ್ ಪಿಂಟೋ ತಪ್ಪೆಸಗಿರುವುದಾಗಿ ತಿಳಿಸಿದ್ದು, ಇವರ ಮೇಲೆ ಕ್ರಮ ಜರುಗಿಸಲು ಸೂಚಿಸಲಾಗಿದೆ. ಇದೇ ವಿಚಾರದಲ್ಲಿ ಪೋರ್ಜರಿ ದಾಖಲೆಗಳನ್ನು ಸೃಷ್ಟಿಸಿದ್ದ ಪಿಡಿಓ ಓಸ್ವಾಲ್ಡ್ ಪಿಂಟೋ ವಿರುದ್ಧ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಮಂಗಳೂರು ತಾಪಂ ಇಓ ಆಗಿದ್ದ ಎನ್.ಜಿ ನಾಗರಾಜ್ ಅವರು 2022ರ ಎಪ್ರಿಲ್ 5ರಂದು ದೂರು ದಾಖಲಿಸಿದ್ದರು. ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸದೆ ಅಸಡ್ಡೆ ವಹಿಸಿದ್ದಾರೆ.
ಪೋರ್ಜರಿ ಕೇಸು ಮುಚ್ಚಿ ಹಾಕಲು ಯತ್ನ
ಪೋರ್ಜರಿ ದಾಖಲೆ ಸೃಷ್ಟಿಸಿ ಬ್ಯಾಂಕಿಗೆ ಮೋಸಗೈದ ಬಗ್ಗೆ ಮೂರು ಪ್ರತ್ಯೇಕ ಎಫ್ಐಆರ್ ದಾಖಲಾದರೂ, ಮಂಗಳೂರು ಪೊಲೀಸರು ಒಟ್ಟು ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನ ಪಡುತ್ತಿದ್ದಾರೆಂದು ನೋಯಲ್ ಮೈಕಲ್ ಸಲ್ದಾನ ನೋವು ವ್ಯಕ್ತಪಡಿಸಿದ್ದಾರೆ. ವಿಚಿತ್ರ ಏನಂದ್ರೆ, ನೋಯಲ್ ಮೈಕಲ್ ಸಲ್ದಾನ ನೀಡಿರುವ ದೂರಿನಂತೆ ಪಾಂಡೇಶ್ವರ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ರಘು ನಾಯ್ಕ್ ಸಾಕ್ಷ್ಯಾಧಾರಗಳ ಕೊರತೆಯೆಂದು 2023ರಲ್ಲಿ ಬಿ ರಿಪೋರ್ಟ್ ಹಾಕಿದ್ದಾರೆ. ಅಲ್ಲದೆ, ಈ ಪ್ರಕರಣದ ದಾಖಲೆಗಳನ್ನು ಕೋರ್ಟಿನ ಅನುಮತಿ ಪಡೆಯದೆ ಕೆನರಾ ಬ್ಯಾಂಕಿನ ಅಧಿಕಾರಿಗಳ ಪರವಾಗಿ ಅವರಿಗೆ ನೀಡಿರುವುದು ಪತ್ತೆಯಾಗಿದೆ. ಇದೇ ದಾಖಲೆಯನ್ನು ಮುಂದಿಟ್ಟು ಕೆನರಾ ಬ್ಯಾಂಕಿನ ಅಧಿಕಾರಿಗಳು ಟ್ರಿಬ್ಯುನಲ್ ಮುಂದೆ ದೂರು ಕೊಟ್ಟು ಜಾಗವನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ.
ಈ ನಡುವೆ, ಮಂಗಳೂರು ಪೊಲೀಸ್ ಕಮಿಷನರ್ ಆಗಿ ಕುಲದೀಪ್ ಜೈನ್ ಬಂದಿದ್ದಾಗ ಬಿ ರಿಪೋರ್ಟ್ ಹಾಕಿದ್ದ ಪ್ರಕರಣವನ್ನು ರೀ ಓಪನ್ ಮಾಡಿದ್ದಲ್ಲದೆ, ರಘು ನಾಯ್ಕ್ ಮೇಲೆ ತಪರಾಕಿ ಹಾಕಿದ್ದರು. ಮರು ತನಿಖೆಗಾಗಿ ಒಟ್ಟು ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಿದ್ದರು. ಆದರೆ, ಆನಂತರ ಕಮಿಷನರ್ ಆಗಿ ಬಂದ ಅನುಪಮ್ ಅಗರ್ವಾಲ್ ಈ ಬಗ್ಗೆ ಗಮನವನ್ನೇ ಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ.
ಲೂಟಿಗೆ ಬ್ಯಾಂಕ್ ಅಧಿಕಾರಿಗಳದ್ದೇ ಸಾಥ್
ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಾಲ ಕೊಡುವಾಗ, ಜಾಗದ ದಾಖಲೆಗಳನ್ನು ಪರಿಶೀಲಿಸದೆ ನಿರ್ಲಕ್ಷ್ಯ ವಹಿಸಿದ್ದಲ್ಲದೆ, ಮೋಸಗಾರರ ಜೊತೆಗೆ ಬ್ಯಾಂಕ್ ಮ್ಯಾನೇಜರುಗಳೇ ಶಾಮೀಲಾಗಿದ್ದಾರೆಂಬ ಗಂಭೀರ ಆರೋಪ ಈ ಪ್ರಕರಣದಲ್ಲಿದೆ. ಇದೇ ಕಾರಣಕ್ಕೆ ಪೋರ್ಜರಿ ಬಗ್ಗೆ ಇಷ್ಟೆಲ್ಲ ದಾಖಲೆಗಳಿದ್ದರೂ, ಒಂದೇ ವಿಚಾರದಲ್ಲಿ ಪೋರ್ಜರಿ ಕಾರಣಕ್ಕೆ ಮೂರು ಎಫ್ಐಆರ್ ದಾಖಲಾದರೂ ಬ್ಯಾಂಕಿನ ಅಧಿಕಾರಿಗಳು ಬಿ ರಿಪೋರ್ಟ್ ಹಾಕಿಸಲು ಪೊಲೀಸರಿಗೆ ಒತ್ತಡ ಹೇರುತ್ತಿದ್ದಾರೆ. ಅಲ್ಲದೆ, ತಾವು ಸಿಕ್ಕಿಬೀಳುವ ಭಯದಲ್ಲಿ ಸಂತ್ರಸ್ತ ವ್ಯಕ್ತಿಯ ಪರ ನಿಲ್ಲದೆ ಮೋಸಗಾರರ ಪರ ವಹಿಸಿದ್ದಾರೆಂದು ನೋಯಲ್ ಹೇಳುತ್ತಿದ್ದಾರೆ. ಕೆನರಾ ಬ್ಯಾಂಕಿನಲ್ಲಿ ಈ ಹಿಂದೆ ಮ್ಯಾನೇಜರ್ ಆಗಿದ್ದ ಜಯಂತ್ ಭಟ್ ಮತ್ತು ಅಣ್ಣು ನಾಯ್ಕ್ ಎಂಬಿಬ್ಬರು ಅಧಿಕಾರಿಗಳ ಮೇಲೆ ಆರೋಪಗಳನ್ನು ಮಾಡಿದ್ದಾರೆ.
ವಿಶೇಷ ಅಂದ್ರೆ, ಸಾಲದ ಪ್ರಕರಣದಲ್ಲಿ ಮೂಲಾಧಾರ ಎನ್ನಲಾದ 25 ಸೆಂಟ್ಸ್ ಮತ್ತು ಹತ್ತು ಸೆಂಟ್ಸ್ ಜಾಗದ ಡಿಸಿ ಕನ್ವರ್ಷನ್ ಅನ್ನು 2024ರ ಆಗಸ್ಟ್ 20ರಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರದ್ದುಪಡಿಸಿದ್ದಾರೆ. 9-11 ದಾಖಲಾತಿಯನ್ನೂ ತಾಲೂಕು ಪಂಚಾಯತ್ ಇಓರವರು ರದ್ದುಪಡಿಸಿದ್ದಾರೆ. ಇದಲ್ಲದೆ, ಜಾಗದ ಪಹಣಿ ಪತ್ರದ ದಾಖಲೆಯನ್ನೂ ಜಾನ್ ಸಲ್ದಾನ ಮತ್ತು ನೋಯಲ್ ಮೈಕಲ್ ಸಲ್ದಾನ ತಮ್ಮ ಹೆಸರಿನಲ್ಲೇ ಮಾಡಿಕೊಂಡಿದ್ದಾರೆ. ಹೀಗಿದ್ದರೂ, 40 ಲಕ್ಷ ರೂ. ಸಾಲ ಪಡೆದು ತಿಂದು ತೇಗಿರುವ ಅಂಬ್ರೋಸ್ ಡಿಸೋಜ ಮತ್ತು ಶೇಖ್ ಅಬ್ದುಲ್ಲಾ ಕುರಿತು ಪೊಲೀಸರು ಕ್ರಮ ಜರುಗಿಸಿಲ್ಲ. ಇದಕ್ಕೆ ಸಾಥ್ ನೀಡಿರುವ ಬ್ಯಾಂಕ್ ಅಧಿಕಾರಿಗಳನ್ನೂ ಪ್ರಕರಣದಲ್ಲಿ ಸೇರ್ಪಡೆ ಮಾಡಿಲ್ಲ. ಪ್ರಕರಣದಲ್ಲಿ ತನಿಖೆಯನ್ನೂ ಮಾಡದೇ ಚಾರ್ಜ್ ಶೀಟನ್ನೂ ಹಾಕದೇ, ಬಡ ರೈತನಿಗಾದ ಮೋಸದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಈಗ ಹೇಳಿ, ಕಳ್ಳ, ಪೊಲೀಸ್, ಬ್ಯಾಂಕು ಜೊತೆಗೂಡಿದರೆ ಏನಾದೀತು ?
A major bank fraud has come to light, involving a Mangalore farmer, Noel Michel Saldanha, who has been wrongfully implicated in a fraudulent loan scheme. The allegations point to serious misconduct by both Canara Bank’s Nellikai branch and the Mangalore Police especially Raghu Naik who was the was the investigating officer of this case. According to Saldanha, he did not apply for such a substantial loan, and yet, documents and approvals seem to indicate otherwise. He asserts that the Canara Bank branch in Nellakai failed to conduct proper due diligence and allowed the disbursement of this fraudulent loan without his consent.
06-06-25 10:58 pm
Bangalore Correspondent
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
Police Constable Protest, Commissioner Dayana...
06-06-25 09:03 pm
RCB Manager Arrest, Court; ಸಿಎಂ ಸೂಚನೆಯಂತೆ ತನಿ...
06-06-25 05:32 pm
Rcb, Death, Dayanand IPS, Congress: ಕಾಲ್ತುಳಿತ...
06-06-25 02:14 pm
06-06-25 11:08 pm
HK News Desk
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
MP Brijesh Chowta, Delegation: ಐದು ದೇಶಗಳಲ್ಲಿ...
03-06-25 10:10 pm
ಎರಡನೇ ಮಹಡಿಯಿಂದ ಕೆಳಕ್ಕೆ ಬಿದ್ದ ಕಟ್ಟಡ ಕಾರ್ಮಿಕನನ್...
01-06-25 12:35 pm
07-06-25 05:37 pm
Mangalore Correspondent
Mangalore Fire Accident, Derlakatte: ದೇರಳಕಟ್ಟ...
07-06-25 12:08 pm
Magalore Bus Accident, Bangalore: ಮಂಗಳೂರು- ಬೆ...
07-06-25 11:46 am
ಮಂಗಳೂರಿನ ಹುಡುಗ ಜಾಗತಿಕ ವೇದಿಕೆಯತ್ತ ಹೆಜ್ಜೆ ; ಜೂನ...
06-06-25 09:29 pm
Mangalore Minister Mankal Vaidya: ನಾಪತ್ತೆಯಾದ...
06-06-25 07:20 pm
03-06-25 10:25 pm
Mangalore Correspondent
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm
Mangalore Police, CCB, Cattle trafficking, Ta...
02-06-25 04:01 pm
Ullal, Mangalore, Crime: ಕೋಮು ದ್ವೇಷದ ನೆಲದಲ್ಲ...
01-06-25 11:02 pm