Ullal Police Station, Mangalore, Crime: ಪಿಎಸ್ಐ ಇದ್ದ ಪೊಲೀಸ್ ಜೀಪಿನಿಂದಲೇ ವಾಕಿಟಾಕಿ ಕಳವು, ಬ್ಯಾಂಕ್ ದರೋಡೆ ಪ್ರಕರಣದ ನಡುವಲ್ಲೇ ಉಳ್ಳಾಲ ಪೊಲೀಸಿಂಗ್ ವ್ಯವಸ್ಥೆಗೆ ಅಣಕ ; ಪೊಲೀಸರ ಸೊತ್ತುಗಳಿಗೇ ಭದ್ರತೆ ಇಲ್ಲ, ಉಳಿದವರ ಗತಿ..?

03-02-25 05:46 pm       Mangalore Correspondent   ಕ್ರೈಂ

ನೈಟ್ ರೌಂಡ್ಸ್ ನಲ್ಲಿದ್ದ ಉಳ್ಳಾಲ ಠಾಣೆಯ ಪಿಎಸ್ಐ ನೇತೃತ್ವದ ಬೀಟ್ ಪೊಲೀಸ್ ಜೀಪಿನಿಂದಲೇ ವಾಕಿಟಾಕಿಯೊಂದನ್ನ ಕಳ್ಳರು ಕದ್ದೊಯ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ ಹಸಿಯಾಗಿರುವ ಸಂದರ್ಭದಲ್ಲೇ ವಾಕಿಟಾಕಿ ಕಳವು ಸುದ್ದಿ ಉಳ್ಳಾಲ ಠಾಣೆ ಪೊಲೀಸಿಂಗ್ ವ್ಯವಸ್ಥೆಯನ್ನ ಅಣಕಿಸಿದಂತಿದೆ.

ಉಳ್ಳಾಲ, ಫೆ.3: ನೈಟ್ ರೌಂಡ್ಸ್ ನಲ್ಲಿದ್ದ ಉಳ್ಳಾಲ ಠಾಣೆಯ ಪಿಎಸ್ಐ ನೇತೃತ್ವದ ಬೀಟ್ ಪೊಲೀಸ್ ಜೀಪಿನಿಂದಲೇ ವಾಕಿಟಾಕಿಯೊಂದನ್ನ ಕಳ್ಳರು ಕದ್ದೊಯ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ ಹಸಿಯಾಗಿರುವ ಸಂದರ್ಭದಲ್ಲೇ ವಾಕಿಟಾಕಿ ಕಳವು ಸುದ್ದಿ ಉಳ್ಳಾಲ ಠಾಣೆ ಪೊಲೀಸಿಂಗ್ ವ್ಯವಸ್ಥೆಯನ್ನ ಅಣಕಿಸಿದಂತಿದೆ.

ಕಳೆದ ಜ.22 ರಂದು ಉಳ್ಳಾಲ ಪೊಲೀಸ್ ಠಾಣೆ ಪಿಎಸ್ಐ ಧನರಾಜ್ ಅವರು ರಾತ್ರಿ ಪಾಳಿ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ತಮ್ಮ ಜೊತೆ ಇಲಾಖೆಗೆ ಸೇರಿರುವ ಬೀಟ್-3 ಎಂದು ಬರೆದಿದ್ದ ಮೋಟೊರೋಲ ಕಂಪನಿಯ ವಾಕಿಟಾಕಿಯನ್ನ ಕೊಂಡೊಯ್ದಿದ್ದರು. ಪಂಪ್ವೆಲ್ ತೆರಳಿದ್ದ ಪಿಎಸ್ಐ ಧನರಾಜ್ ಅವರು ಜೀಪನ್ನ ತಾನೇ ಚಲಾಯಿಸಿ ಮತ್ತೆ ಉಳ್ಳಾಲದ ಕಡೆಗೆ ಬಂದಿದ್ದಾರೆ. ಮಧ್ಯರಾತ್ರಿ 11.45ರ ವೇಳೆ ದಾರಿ ಮಧ್ಯದ ಕಲ್ಲಾಪು ಗ್ಲೋಬಲ್ ಮಾರ್ಕೆಟ್ ಬಳಿಯ ಹೆದ್ದಾರಿ ಬದಿಯಲ್ಲಿ ಜನರು ಗುಂಪು ಸೇರಿದ್ದರಿಂದ ಧನರಾಜ್ ಅವರು ಪೊಲೀಸ್ ವಾಹನವನ್ನ ನಿಲ್ಲಿಸಿದ್ದಾರೆ. ಪೊಲೀಸ್ ಜೀಪಿನ ಸೀಟಿನಲ್ಲಿ ವಾಕಿಟಾಕಿಯನ್ನು ಇಟ್ಟು ಕೆಳಗಿಳಿದಿದ್ದ ಪಿಎಸ್ಐ ಧನರಾಜ್ ಅವರು ಹೆದ್ದಾರಿಯಲ್ಲಿ ಜಮಾಯಿಸಿದ್ದ ಜನರನ್ನ ಚದುರಿಸಿ ಮತ್ತೆ ಜೀಪ್ ಏರಿದಾಗ ವಾಕಿಟಾಕಿ ಕಳವಾಗಿತ್ತು.

ಬೀಟ್-3 ಎಂದು ಬರೆದಿದ್ದ (865EAF0143 ID) ಮೋಟೋರೋಲ ಕಂಪನಿಯ ವಾಕಿಟಾಕಿ ಕಳವಾಗಿರುವ ಬಗ್ಗೆ ಪಿಎಸ್ಐ ಧನರಾಜ್ ತಾನು ಕರ್ತವ್ಯ ನಿರ್ವಹಿಸುತ್ತಿರುವ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ. ಕೋಟೆಕಾರು ವ್ಯ.ಸೇ.ಸ. ಸಂಘದ ಕೆ.ಸಿ ರೋಡ್ ಶಾಖೆಯಲ್ಲಿ ದರೋಡೆ ನಡೆಸಿದ ಪ್ರಮುಖ ಕಿಂಗ್ ಪಿನ್ ಆರೋಪಿಗಳನ್ನ ಬಂಧಿಸಲು ಪೊಲೀಸರು ಹೆಣಗಾಟ ನಡೆಸುತ್ತಿರುವ ಸಂದರ್ಭದಲ್ಲಿ ಪೊಲೀಸರ ವಾಕಿಟಾಕಿಯೇ ಕಳವಾಗಿರುವುದು ಉಳ್ಳಾಲ ಠಾಣೆಯ ಪೊಲೀಸಿಂಗ್ ವ್ಯವಸ್ಥೆಗೆ ಕನ್ನಡಿ ಹಿಡಿದಂತಿದೆ. ಠಾಣಾ ವ್ಯಾಪ್ತಿಯಲ್ಲಿ ಅದೆಷ್ಟೋ ದ್ವಿಚಕ್ರ ವಾಹನಗಳು ಕಳವಾದರೂ ಪೊಲೀಸರು ಬರೀ ಪ್ರಕರಣ ದಾಖಲಿಸುತ್ತಾರೆಯೇ ಹೊರತು, ಕಳವಾದ ವಾಹನಗಳನ್ನ ಪತ್ತೆ ಹಚ್ಚುವ ಗೋಜಿಗೆ ಹೋಗೋದಿಲ್ಲ. ಇದೀಗ ಪೊಲೀಸ್ ಇಲಾಖೆಯ ಸಾಮಗ್ರಿಗಳೇ ಕಳವಾಗುತ್ತಿದ್ದು ಇವರು ಜನಸಾಮಾನ್ಯರ ಸೊತ್ತುಗಳಿಗೆ ಎಷ್ಟರ ಮಟ್ಟಿಗೆ ರಕ್ಷಣೆ ನೀಡುವರೆಂಬ ಭಾವನೆ ಜನಸಾಮಾನ್ಯರಲ್ಲಿ ಮೂಡುವಂತಾಗಿದೆ.

ರೂಲ್ಸ್ ಬ್ರೇಕರ್ ಪಿಎಸ್ಐ ಧನರಾಜ್ ! 

ಉಳ್ಳಾಲ ಠಾಣೆಯ ಎಸ್ಐ ಧನರಾಜ್ ಅವರು ಕರ್ತವ್ಯದಲ್ಲಿ ತೀರಾ ಬೇಜವಾಬ್ದಾರಿತನ ಮೆರೆಯುತ್ತಿರುವ ಬಗ್ಗೆ ಸಾಕಷ್ಟು ಆರೋಪಗಳಿವೆ. ಪೊಲೀಸ್ ಅಧಿಕಾರಿಯಾಗಿದ್ದು ಸ್ವತಃ ತಾನೇ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುವುದಲ್ಲದೆ, ಕೆಲವೊಮ್ಮೆ ರಸ್ತೆಯ ವಿರುದ್ಧ ದಿಕ್ಕುಗಳಲ್ಲೂ ವಾಹನ ಚಲಾಯಿಸಿ ಟ್ರಾಫಿಕ್ ನಿಯಮಗಳನ್ನ ಬ್ರೇಕ್ ಮಾಡುತ್ತಾರೆ. ಕಳೆದ ಬಾರಿ ಹೆಲ್ಮೆಟ್ ಹಾಕದೆ ದ್ವಿಚಕ್ರ ವಾಹನ ಚಲಾಯಿಸಿರುವ ಕುರಿತಂತೆ ಫೋಟೊ ಸಮೇತ ಹೆಡ್ ಲೈನ್ ಕರ್ನಾಟಕದಲ್ಲಿ ವರದಿ ಮಾಡಲಾಗಿತ್ತು. ಮಾಧ್ಯಮದಲ್ಲಿ ವರದಿ ಓದಿದ್ದ ಧನರಾಜ್ ಅವರು ಮಾಧ್ಯಮ ಪ್ರತಿನಿಧಿಗೆ ಫೋನಾಯಿಸಿ ನನ್ನ ಸ್ಕೂಟರ್, ನನಗಿಷ್ಟ ಬಂದ ಹಾಗೆ ಹೋಗ್ತೇನೆ. ಅದನ್ನ ಬರೆಯಲು ನೀವ್ಯಾರೆಂದು ಆವಾಜ್ ಹಾಕಿದ್ದರು.

Mangalore Ullal Police sub inspector Dhanraj walkie talkie stolen from police car during night rounds. The incident has come to light during their investigation of kotekar bank robbery.