ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದು ಹೇಳಿ 12ಕ್ಕೂ ಹೆಚ್ಚು ಮಹಿಳೆಯರಿಗೆ ಮದುವೆ ಭರವಸೆ ನೀಡಿ ವಂಚನೆ, ಚಿನ್ನಾಭರಣ ಕಿತ್ತು ಕಾಲ್ಕೀಳುತ್ತಿದ್ದ ಆಸಾಮಿ ಕೊಪ್ಪಳದಲ್ಲಿ ಬಂಧನ 

11-02-25 06:41 pm       HK News Desk   ಕ್ರೈಂ

ಮ್ಯಾಟ್ರಿಮನಿ ಆ್ಯಪ್‌ನಲ್ಲಿ ಪರಿಚಯ ಮಾಡಿಕೊಂಡು ಮದುವೆಯಾಗುವುದಾಗಿ ನಂಬಿಸಿ ರಾಜ್ಯದ ವಿವಿಧ ಕಡೆಗಳಲ್ಲಿ ಸುಮಾರು 12 ಮಹಿಳೆಯರನ್ನು ವಂಚಿಸಿ ಅವರಿಂದ ಚಿನ್ನಾಭರಣ, ಹಣ ಪಡೆದು ಪರಾರಿಯಾಗಿದ್ದ ವಿಜಯಪುರ ಜಿಲ್ಲೆಯ ಮೂಲದ ವ್ಯಕ್ತಿಯನ್ನು ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ, ಫೆ.11: ಮ್ಯಾಟ್ರಿಮನಿ ಆ್ಯಪ್‌ನಲ್ಲಿ ಪರಿಚಯ ಮಾಡಿಕೊಂಡು ಮದುವೆಯಾಗುವುದಾಗಿ ನಂಬಿಸಿ ರಾಜ್ಯದ ವಿವಿಧ ಕಡೆಗಳಲ್ಲಿ ಸುಮಾರು 12 ಮಹಿಳೆಯರನ್ನು ವಂಚಿಸಿ ಅವರಿಂದ ಚಿನ್ನಾಭರಣ, ಹಣ ಪಡೆದು ಪರಾರಿಯಾಗಿದ್ದ ವಿಜಯಪುರ ಜಿಲ್ಲೆಯ ಮೂಲದ ವ್ಯಕ್ತಿಯನ್ನು ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಹಿಟ್ಟಿನಹಳ್ಳಿ ಗ್ರಾಮದ ಜೈಭೀಮ್ ಪಡಕೋಟಿ ಅಲಿಯಾಸ್‌ ಭೀಮರಾವ್‌ (38) ಬಂಧಿತ. 

ಭದ್ರಾವತಿಯ ಮಹಿಳೆಯೊಬ್ಬರಿಂದ ₹ 9.70 ಲಕ್ಷ ಮೌಲ್ಯದ ನಗದು ಹಾಗೂ ಚಿನ್ನಾಭರಣ ಪಡೆದು ವಂಚಿಸಿದ ಬಗ್ಗೆ ದೂರು ದಾಖಲಾಗಿದ್ದು ಪ್ರಕರಣದಲ್ಲಿ ಆರೋಪಿಯನ್ನು ಬಾಡಿ ವಾರೆಂಟ್‌ ಮೇಲೆ ಕರೆತರಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌ ತಿಳಿಸಿದ್ದಾರೆ. ಆರೋಪಿ ವಿರುದ್ಧ ವಿಜಯಪುರ ಜಿಲ್ಲೆ ತಿಕೋಟಾ ಗ್ರಾಮೀಣ ಪೊಲೀಸ್ ಠಾಣೆ, ಹೊರ್ತಿ, ಮುದ್ದೇಬಿಹಾಳ, ಬಬಲೇಶ್ವರ, ಬಾಗಲಕೋಟೆ ನಗರ ಠಾಣೆ, ದೊಡ್ಡಬಳ್ಳಾಪುರ ಗ್ರಾಮೀಣ ಠಾಣೆ, ಶಿವಮೊಗ್ಗ ಜಿಲ್ಲೆ ಹೊಸನಗರ, ಬೆಂಗಳೂರು ನಗರ ಸಿಇಎನ್‌ ಠಾಣೆ ಹಾಗೂ ಕೊಪ್ಪಳ ಮಹಿಳಾ ಠಾಣೆಯಲ್ಲಿ 12 ಪ್ರಕರಣ ದಾಖಲಾಗಿವೆ. ಈ ಪೈಕಿ ನಾಲ್ವರು ಮಹಿಳೆಯರನ್ನು ಆರೋಪಿ ಮದುವೆಯಾಗಿದ್ದಾಗಿ ತನಿಖೆಯ ವೇಳೆ ತಿಳಿದುಬಂದಿದೆ.

ಮ್ಯಾಟ್ರಿಮನಿ ಸೈಟ್ ನಲ್ಲಿ ತಾನೊಬ್ಬ ಸರ್ಕಾರಿ ನೌಕರನೆಂದು ಪರಿಚಯ ಮಾಡಿಕೊಂಡು ಮದುವೆ ವಯಸ್ಸು ಮೀರಿದ ಹಾಗೂ ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರನ್ನು ಸಂಪರ್ಕಿಸುತ್ತಿದ್ದ. ತಾನು ದಾವಣಗೆರೆಯಲ್ಲಿ ಮಹಾನಗರ ಪಾಲಿಕೆ ಉದ್ಯೋಗಿ ಎಂದು ಪರಿಚಯ ಹೇಳಿ ಎರಡು ತಿಂಗಳ ಹಿಂದೆ ಭದ್ರಾವತಿಯ ಮಹಿಳೆಯನ್ನು ಪರಿಚಯಿಸಿಕೊಂಡಿದ್ದ. ಸರ್ಕಾರಿ ಉದ್ಯೋಗಿಯಾದ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ. ತನ್ನ ತಾಯಿಗೆ ಚಿಕಿತ್ಸೆಗಾಗಿ ರೂ. 8 ಲಕ್ಷ ಅವಶ್ಯಕತೆ ಇದೆ ಎಂದು ಹೇಳಿ, ಅವರಿಂದ ₹ 7.43 ಲಕ್ಷ ಹಣವನ್ನು ಪಡೆದಿದ್ದ. ನಂತರ ಆಕೆಯಿಂದ ₹ 2.25 ಲಕ್ಷ ಮೌಲ್ಯದ 30 ಗ್ರಾಂ ತೂಕದ ಚಿನ್ನಾಭರಣವನ್ನೂ ಪಡೆದು ಪರಾರಿಯಾಗಿದ್ದ.  

ಐಟಿಐ ಓದಿರುವ ಭೀಮರಾವ್‌ ದುಬಾರಿ ಬೆಲೆಯ ಬಟ್ಟೆ ಧರಿಸಿ ಓಡಾಡುತ್ತಿದ್ದ. ಶೂ ಧರಿಸಿ ಕೋಟ್‌ ಹಾಕಿಕೊಂಡು ಅಧಿಕಾರಿ ರೀತಿ ವರ್ತನೆ ಮಾಡುತ್ತಿದ್ದ. ತನ್ನ ಬಣ್ಣನೆ ಮಾತಿನಲ್ಲೇ ಮಹಿಳೆಯರನ್ನು ಮರುಳು ಮಾಡುತ್ತಿದ್ದ. ಶಿವಮೊಗ್ಗದಲ್ಲಿ ಸಂಬಂಧಿಯೊಬ್ಬರ ಮದುವೆ ಇದೆ. ಚಿನ್ನದ ಒಡವೆ ಧರಿಸದಿದ್ದರೆ ಸರ್ಕಾರಿ ಅಧಿಕಾರಿಯಾಗಿ ನನ್ನ ಸ್ಟೇಟಸ್‌ಗೆ ಕುಂದು ಬರುತ್ತದೆ ಎಂದು ಹೇಳಿ ಮಹಿಳೆಯಿಂದ ಚಿನ್ನಾಭರಣ ಪಡೆದು ಮರಳಿ ಕೊಡದೆ ವಂಚಿಸಿದ್ದ ಎಂದು ಭದ್ರಾವತಿಯ ಮಹಿಳೆ ನೀಡಿದ ದೂರಿನ ಬಗ್ಗೆ ಪೊಲೀಸರು ತಿಳಿಸಿದ್ದಾರೆ. 

ಆರೋಪಿ ವಿರುದ್ಧ ಕೊಪ್ಪಳದಲ್ಲಿ ಪ್ರಕರಣ 

ಕೊಪ್ಪಳ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಜೈಭೀಮ್ ಪಡಕೋಟಿ ವಿರುದ್ಧ ಮಹಿಳಾ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದರು. ಆರೋಪಿಯನ್ನು ಬಂಧಿಸಿ ಮೊಬೈಲ್‌ ಫೋನ್ ಪರಿಶೀಲಿಸಿದಾಗ ಭದ್ರಾವತಿಯ ಮಹಿಳೆ ಜೊತೆಗೂ ಸಂಪರ್ಕದಲ್ಲಿರುವುದು ತಿಳಿದುಬಂದಿತ್ತು.

Koppal police have arrested Jaibheem Padakoti alias Bheemarao (38) of Hittinahalli village in Vijayapura district, on charges of cheating 12 women including one from Bhadravathi in various parts of the state by posing himself as a government employee...