Kothanur Police, Bangalore crime, Murder: ನಾಲ್ಕು ತಿಂಗಳ ಹಿಂದೆ ಒಂಟಿ ಮಹಿಳೆ ನಾಪತ್ತೆ ; 50 ಗ್ರಾಂ ಚಿನ್ನದಾಸೆಗೆ ಆಂಟಿ ಹತ್ಯೆಗೈದು ಡಂಪಿಗೆಸೆದ ! ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲೆತ್ನಿಸಿ ಸಿಕ್ಕಿಬಿದ್ದ ಆಟೋ ಡ್ರೈವರ್ ! 

11-03-25 07:34 pm       Bangalore Correspondent   ಕ್ರೈಂ

ನಾಲ್ಕು ತಿಂಗಳ ಹಿಂದೆ ದಾಖಲಾಗಿದ್ದ ಒಂಟಿ ಮಹಿಳೆ ನಾಪತ್ತೆ ಪ್ರಕರಣವನ್ನು ಭೇದಿಸುವಲ್ಲಿ ಕೊತ್ತನೂರು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲದೆ, ಮಹಿಳೆಯ ಮೃತದೇಹ ಮತ್ತು ಆಕೆಯನ್ನು ಕೊಂದು ಶವ ಎಸೆದಿದ್ದ ಆರೋಪಿಯನ್ನೂ ಬಂಧಿಸಿದ್ದಾರೆ. 

ಬೆಂಗಳೂರು, ಮಾ.11 : ನಾಲ್ಕು ತಿಂಗಳ ಹಿಂದೆ ದಾಖಲಾಗಿದ್ದ ಒಂಟಿ ಮಹಿಳೆ ನಾಪತ್ತೆ ಪ್ರಕರಣವನ್ನು ಭೇದಿಸುವಲ್ಲಿ ಕೊತ್ತನೂರು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲದೆ, ಮಹಿಳೆಯ ಮೃತದೇಹ ಮತ್ತು ಆಕೆಯನ್ನು ಕೊಂದು ಶವ ಎಸೆದಿದ್ದ ಆರೋಪಿಯನ್ನೂ ಬಂಧಿಸಿದ್ದಾರೆ. 

2024 ನವೆಂಬರ್ 26ರಂದು ನಾಗೇನಹಳ್ಳಿಯ ಸ್ಲಂ ಬೋರ್ಡ್‌ ವಸತಿ ಪ್ರದೇಶದಿಂದ ಮೇರಿ (59) ಎಂಬ ಮಧ್ಯವಯಸ್ಕ ಮಹಿಳೆ ಕಾಣೆಯಾಗಿದ್ದರು. ಪೊಲೀಸರು ಆಕೆಯ ಪತ್ತೆಗಾಗಿ ಹುಡುಕಾಟ ನಡೆಸಿದ್ದರೂ, ಸರಿಯಾದ ಸುಳಿವು ಸಿಕ್ಕಿರಲಿಲ್ಲ. ಇದೀಗ ಮಾರ್ಚ್ 9ರಂದು ಬಾಗಲೂರಿನ ಹೊಸೂರು ಬಂಡೆ ಬಳಿ ಮಹಿಳೆಯ ಶವ ಪತ್ತೆ ಮಾಡಲಾಗಿದೆ. ಮಹಿಳೆಯ ಮೈಲಿದ್ದ ಚಿನ್ನಕ್ಕಾಗಿ ಆಕೆಯನ್ನು ಹತ್ಯೆಗೈದಿದ್ದ ಲಕ್ಷ್ಮಣ್ ಎಂಬ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಮೇರಿ ವಾಸವಿದ್ದ ಪ್ರದೇಶದಲ್ಲಿಯೇ ಲಕ್ಷ್ಮಣ್ ಕೂಡ ವಾಸವಿದ್ದ. ವಾಟರ್ ಮ್ಯಾನ್ ಹಾಗೂ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಲಕ್ಷ್ಮಣ್, ಮೇರಿ ಜೊತೆಗೆ ಪರಿಚಯವಿತ್ತು. 2 ಲಕ್ಷ ರೂ. ಸಾಲ ಮಾಡಿಕೊಂಡಿದ್ದ ಆರೋಪಿ ಲಕ್ಷ್ಮಣ್,‌ ಮೇರಿಯ ಬಳಿಯಿದ್ದ 50 ಗ್ರಾಂ ಚಿನ್ನಾಭರಣದ ಆಸೆಗೆ ನವೆಂಬರ್ 25ರಂದು ಹತ್ಯೆಗೈಯ್ಯಲು ಯೋಜನೆ ರೂಪಿಸಿದ್ದ. ಮೇರಿಯ ಮನೆಯ ವಿದ್ಯುತ್ ಸಂಪರ್ಕ ಕತ್ತರಿಸಿದರೆ, ಸರಿ ಮಾಡಲು ತನ್ನನ್ನೇ ಕರೆಯುತ್ತಾರೆಂದು ಪ್ಲಾನ್ ಹಾಕಿದ್ದ. ಆದರೆ ವಿದ್ಯುತ್ ಸಂಪರ್ಕ ಕತ್ತರಿಸಿದರೂ ಮೇರಿ ಲಕ್ಷ್ಮಣ್‌ನನ್ನ ಸಹಾಯಕ್ಕೆ ಕರೆದಿರಲಿಲ್ಲ. ಆದರೆ ಲಕ್ಷ್ಮಣ್ ಆಕೆಯ ಮನೆಗೆ ಬಂದು ನವೆಂಬರ್ 26ರಂದು ಹತ್ಯೆಗೈದಿದ್ದು ಬಳಿಕ ಆಟೋದಲ್ಲಿ ಮೇರಿಯ ಶವ ಕೊಂಡೊಯ್ದು ಬಾಗಲೂರು ಸಮೀಪದ‌ ಹೊಸೂರು ಬಂಡೆಯ ಕಸ ಡಂಪಿಂಗ್ ಯಾರ್ಡ್‌ನಲ್ಲಿ ಎಸೆದಿದ್ದ. ಬಳಿಕ ಲಕ್ಷ್ಮಣ್‌ ಸಹ ನಾಪತ್ತೆಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ

ಪೊಲೀಸರ ದಾರಿ ತಪ್ಪಿಸಲು ಪ್ಲ್ಯಾನ್ 

ಮೃತದೇಹ ಎಸೆದ ಲಕ್ಷ್ಮಣ್, ಬಳಿಕ ಮೇರಿಯ ಮೊಬೈಲ್ ಆನ್ ಮಾಡಿ ಕಸ ಸಂಗ್ರಹಿಸುವ ಆಟೋದಲ್ಲಿ ಎಸೆದಿದ್ದ. ಅದೇ ರೀತಿ ತಾನು ಬಳಸುತ್ತಿದ್ದ ಒಟ್ಟು 4 ಸಿಮ್ ಕಾರ್ಡ್‌ಗಳ ಪೈಕಿ 3 ಸಿಮ್ ಕಾರ್ಡ್‌ಗಳಿರುವ ಫೋನ್‌ಗಳನ್ನ ನವೆಂಬರ್ 26ರಂದೇ ಡಿ.ಜೆ ಹಳ್ಳಿಯಲ್ಲಿರುವ ತನ್ನ ಪತ್ನಿಯ ಮನೆಯಲ್ಲಿಟ್ಟಿದ್ದ. ಇತ್ತ ಮೇರಿಯ ನಾಪತ್ತೆ ಪ್ರಕರಣದ ತನಿಖೆ ಆರಂಭಿಸಿದ್ದ ಕೊತ್ತನೂರು ಠಾಣೆ ಪೊಲೀಸರು, ಮಹಿಳೆಯ ಪರಿಚಯದಲ್ಲಿದ್ದ ಲಕ್ಷ್ಮಣ್‌ ಫೋನ್ ಕರೆ ವಿವರ, ಟವರ್ ಲೊಕೇಷನ್‌ ಪರಿಶೀಲಿಸಿದ್ದರು. ಅದರ ಪ್ರಕಾರ ಮೇರಿ ಕಾಣೆಯಾಗಿದ್ದ ದಿನ (ನವೆಂಬರ್ 26) ಆತನ ಲೊಕೇಶನ್ ಡಿ.ಜೆ ಹಳ್ಳಿಯಲ್ಲಿತ್ತು. ಹಾಗಾಗಿ ಪೊಲೀಸರಿಗೆ ಲಕ್ಷ್ಮಣ್‌ ಮೇಲೆ ಹೆಚ್ಚು ಅನುಮಾನ ಮೂಡಿರಲಿಲ್ಲ. ಆದರೂ ಸಹ ನಾಪತ್ತೆಯಾಗಿದ್ದ ಲಕ್ಷ್ಮಣ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. 

ಇತ್ತೀಚೆಗೆ ಸ್ನೇಹಿತೆಯೊಬ್ಬಳಿಗೆ ಕರೆ ಮಾಡಿದಾಗ ಲಕ್ಷ್ಮಣ್‌ ಮತ್ತೊಂದು‌ ಸಿಮ್ ಸಕ್ರಿಯ ಇರುವುದು ಪತ್ತೆಯಾಗಿತ್ತು. ತಕ್ಷಣ ಆತನನ್ನ ಪತ್ತೆಹಚ್ಚಿದ ಪೊಲೀಸರು, ಕರೆತಂದು ವಿಚಾರಿಸಿದಾಗ ಹತ್ಯೆ ವಿಚಾರ ಬಯಲಾಗಿದೆ.

Kothanur Police crack case of 40 year old women body found at dumping yard in hennur, auto driver arrested. The deceased mary was murdered for 50 grams of gold and later was thrown at a dumping yard near hennur. The arrested has been identified as lakshman