4.91 ಕೋಟಿ ರೂ. ಮೌಲ್ಯದ ನಕಲಿ ಔಷಧಿ ದಂಧೆ ಬಯಲು; ಆಸ್ಪತ್ರೆಗಳಿಗೆ ಸರಬರಾಜು ಮಾಡುತ್ತಿದ್ದ ಅಡ್ಡೆ ಮೇಲೆ ದಾಳಿ, ಓರ್ವ ಬಂಧನ

19-08-26 07:25 pm       HK News Staffer   ಕ್ರೈಂ

ಬಹುರಾಷ್ಟ್ರೀಯ ಔಷಧ ಕಂಪನಿಗಳ ಹೆಸರಿನ ನಕಲಿ ಲೇಬಲ್‌ಗಳನ್ನು ಬಳಸಿ ಕಡಿಮೆ ಬೆಲೆಯ ಔಷಧಿಗಳನ್ನು ಮರುಪ್ಯಾಕ್ ಮಾಡಿ ಆಸ್ಪತ್ರೆ ಹಾಗೂ ಔಷಧಾಲಯಗಳಿಗೆ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ಹಾಗೂ ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದಾರೆ. ಬಿಡದಿ ಸಮೀಪದ ಸಿ.ಕೆ. ತಾಂಡ್ಯ ಬಳಿಯ ಫಾರ್ಮ್‌ಹೌಸ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ₹4.91 ಕೋಟಿ ಮೌಲ್ಯದ ಔಷಧಿಗಳು, ಇಂಜೆಕ್ಷನ್‌ಗಳು, ನಕಲಿ ಲೇಬಲ್‌ಗಳು, ಖಾಲಿ ಬಾಟಲಿಗಳು, ಪ್ಯಾಕೇಜಿಂಗ್ ಸಾಮಗ್ರಿ ಹಾಗೂ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಮನಗರ, ಆ.19: ಬಹುರಾಷ್ಟ್ರೀಯ ಔಷಧ ಕಂಪನಿಗಳ ಹೆಸರಿನ ನಕಲಿ ಲೇಬಲ್‌ಗಳನ್ನು ಬಳಸಿ ಕಡಿಮೆ ಬೆಲೆಯ ಔಷಧಿಗಳನ್ನು ಮರುಪ್ಯಾಕ್ ಮಾಡಿ ಆಸ್ಪತ್ರೆ ಹಾಗೂ ಔಷಧಾಲಯಗಳಿಗೆ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ಹಾಗೂ ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದಾರೆ. ಬಿಡದಿ ಸಮೀಪದ ಸಿ.ಕೆ. ತಾಂಡ್ಯ ಬಳಿಯ ಫಾರ್ಮ್‌ಹೌಸ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ₹4.91 ಕೋಟಿ ಮೌಲ್ಯದ ಔಷಧಿಗಳು, ಇಂಜೆಕ್ಷನ್‌ಗಳು, ನಕಲಿ ಲೇಬಲ್‌ಗಳು, ಖಾಲಿ ಬಾಟಲಿಗಳು, ಪ್ಯಾಕೇಜಿಂಗ್ ಸಾಮಗ್ರಿ ಹಾಗೂ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿಯ ಆಧಾರದ ಮೇಲೆ ರಾಮನಗರ ಎಸ್‌ಪಿ ಶ್ರೀನಿವಾಸ್ ಗೌಡ ಹಾಗೂ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ದಂಧೆಯ ಹಿಂದೆ ಇನ್ನಷ್ಟು ಮಂದಿ ಇರುವ ಶಂಕೆ ವ್ಯಕ್ತವಾಗಿದೆ.

ಕಡಿಮೆ ಬೆಲೆಯ ಔಷಧಿಗೆ ದುಬಾರಿ ಕಂಪನಿಗಳ ಲೇಬಲ್

ಅಧಿಕಾರಿಗಳ ಪ್ರಕಾರ, ತೆಲಂಗಾಣ ಹಾಗೂ ಹಿಮಾಚಲ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಕಡಿಮೆ ಬೆಲೆಗೆ ಔಷಧಿಗಳನ್ನು ತರಿಸಿಕೊಳ್ಳುತ್ತಿದ್ದ ಆರೋಪಿಗಳು, ಅವುಗಳಿಗೆ ಬಹುರಾಷ್ಟ್ರೀಯ ಕಂಪನಿಗಳ ಹೆಸರಿನ ನಕಲಿ ಲೇಬಲ್‌ಗಳನ್ನು ಅಂಟಿಸಿ ಮರುಪ್ಯಾಕ್ ಮಾಡುತ್ತಿದ್ದರು. ಬಳಿಕ ಹೆಚ್ಚಿನ ಬೆಲೆಯ ಔಷಧಿಗಳಂತೆ ಬಿಂಬಿಸಿ ವಿವಿಧ ಆಸ್ಪತ್ರೆಗಳು ಹಾಗೂ ಔಷಧಾಲಯಗಳಿಗೆ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಸೆಫಿಯಾವಿಜೆಂಟ್, ಹಿಜ್ಲಾಮ್, ಕ್ಸಾವಿಟಾಜ್ ಸೇರಿದಂತೆ ಹಲವು ಔಷಧಿಗಳು ಹಾಗೂ ಇಂಜೆಕ್ಷನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುಮಾರು ₹20,000 ಮಾರುಕಟ್ಟೆ ಬೆಲೆಯ ನಕಲಿ ಇಂಜೆಕ್ಷನ್‌ಗಳನ್ನು ₹5,000ರಿಂದ ₹6,000ಕ್ಕೆ ಮಾರಾಟ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಶಪಡಿಸಿಕೊಂಡ ವಸ್ತುಗಳಲ್ಲಿ ₹3.38 ಕೋಟಿ ಮೌಲ್ಯದ 5,640 ಸೆಫಿಯಾವಿಜೆಂಟ್ ಬಾಟಲಿಗಳು, ₹52.24 ಲಕ್ಷ ಮೌಲ್ಯದ 1,531 ಹಿಜ್ಲಾಮ್ ಇಂಜೆಕ್ಷನ್‌ಗಳು, ₹35 ಲಕ್ಷ ಮೌಲ್ಯದ ಅವಧಿ ಮೀರಿದ ಔಷಧಿಗಳು ಹಾಗೂ ₹27.49 ಲಕ್ಷ ಮೌಲ್ಯದ 470 ಕ್ಸಾವಿಟಾಜ್ ಇಂಜೆಕ್ಷನ್‌ಗಳು ಸೇರಿದಂತೆ ವಿವಿಧ ಔಷಧಿಗಳು ಸೇರಿವೆ. ನಕಲಿ ಲೇಬಲ್‌ಗಳು, ಬಾಟಲಿಗಳು, ಇಂಜೆಕ್ಷನ್‌ ಫಿಲ್ಲಿಂಗ್‌ ಯೂನಿಟ್, ಸ್ಟಾಪರ್‌ಗಳು, ಕ್ಯಾಪ್‌ಗಳು ಹಾಗೂ ಪ್ಯಾಕೇಜಿಂಗ್ ಸಾಮಗ್ರಿಯನ್ನೂ ವಶಪಡಿಸಿಕೊಳ್ಳಲಾಗಿದೆ.

ಆರೋಗ್ಯ ಸಚಿವ ಯು.ಟಿ. ಖಾದರ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಕರ್ನಾಟಕ ಮಾತ್ರವಲ್ಲದೆ ಹಲವು ರಾಜ್ಯಗಳಿಗೆ ವಿಸ್ತರಿಸಿರುವ ಜಾಲದ ಬಗ್ಗೆ ತನಿಖೆ ಅಗತ್ಯವಿದೆ ಎಂದು ಹೇಳಿದ್ದಾರೆ. ದುಬೈನಲ್ಲಿ ನೆಲೆಸಿರುವ ಪ್ರಶಾಂತ್ ಎಂಬಾತ ಪ್ರಮುಖ ಆಪರೇಟರ್ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಆತನಿಗಾಗಿ ಕೆಲಸ ಮಾಡುತ್ತಿದ್ದ ಪ್ರಭಾದೇವ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ನಕಲಿ ಔಷಧಿಗಳ ಜಾಲದಲ್ಲಿ ತಯಾರಕರು, ಹಣಕಾಸುದಾರರು, ಸಾಗಣೆದಾರರು, ಮಧ್ಯವರ್ತಿಗಳು, ಆಸ್ಪತ್ರೆಗಳು ಹಾಗೂ ಔಷಧಾಲಯಗಳ ಪಾತ್ರವಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯಲಿದೆ. ಪ್ರಕರಣದ ವ್ಯಾಪ್ತಿ ದೊಡ್ಡದಾಗಿರುವ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ (SIT) ರಚಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.