ಕೋಟೆಪುರ ಕೊಳೆತ ಶವ ಪತ್ತೆ ಪ್ರಕರಣ ; ವ್ಯಕ್ತಿಯ ಕೊಲೆಗೈದು ಸಮುದ್ರಕ್ಕೆ ಎಸೆದ ಶಂಕೆ, ತಲೆ- ಹೊಟ್ಟೆಯ ಭಾಗಕ್ಕೆ ಇರಿತದ ಗಾಯ ಪತ್ತೆ, ಮೇಜರ್ ಟ್ವಿಸ್ಟ್ ಕೊಟ್ಟ ಮರಣೋತ್ತರ ಪರೀಕ್ಷೆ ! ಬೋಟಿನಿಂದ ಬಿದ್ದ ಪ್ರಕರಣಕ್ಕೆ ತಿರುವು

20-08-26 04:25 pm       HK News Staffer   ಕ್ರೈಂ

ಉಳ್ಳಾಲ ಕೋಟೆಪುರ ಸಮುದ್ರ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದ ಘಟನೆಗೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಮೀನುಗಾರಿಕಾ ಬೋಟ್ ನಿಂದ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ ಎನ್ನಲಾದ ವ್ಯಕ್ತಿಯನ್ನು ತಲೆಗೆ ಮತ್ತು ಹೊಟ್ಟೆಗೆ ಹರಿತ ಆಯುಧದಿಂದ ಹೊಡೆದು ಕೊಲ್ಲಲಾಗಿದೆ ಎನ್ನುವ ವರದಿ ಮರಣೋತ್ತರ ಪರೀಕ್ಷೆಯಲ್ಲಿ ಬಂದಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ವ್ಯಕ್ತಿಯನ್ನು ಯಾರೋ ಕೊಲೆಗೈದು ಸಮುದ್ರಕ್ಕೆ ಎಸೆದಿರುವ ಶಂಕೆಯಲ್ಲಿ ಪ್ರಕರಣ ದಾಖಲಾಗಿದೆ.

ಉಳ್ಳಾಲ, ಆ.20: ಉಳ್ಳಾಲ ಕೋಟೆಪುರ ಸಮುದ್ರ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದ ಘಟನೆಗೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಮೀನುಗಾರಿಕಾ ಬೋಟ್ ನಿಂದ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ ಎನ್ನಲಾದ ವ್ಯಕ್ತಿಯನ್ನು ತಲೆಗೆ ಮತ್ತು ಹೊಟ್ಟೆಗೆ ಹರಿತ ಆಯುಧದಿಂದ ಹೊಡೆದು ಕೊಲ್ಲಲಾಗಿದೆ ಎನ್ನುವ ವರದಿ ಮರಣೋತ್ತರ ಪರೀಕ್ಷೆಯಲ್ಲಿ ಬಂದಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ವ್ಯಕ್ತಿಯನ್ನು ಯಾರೋ ಕೊಲೆಗೈದು ಸಮುದ್ರಕ್ಕೆ ಎಸೆದಿರುವ ಶಂಕೆಯಲ್ಲಿ ಪ್ರಕರಣ ದಾಖಲಾಗಿದೆ. 

ಆಗಸ್ಟ್ 17ರಂದು ಕೋಟೆಪುರ ಮಸೀದಿ ಹಿಂಭಾಗದ ಕಡಲ ಕಿನಾರೆಯಲ್ಲಿ ವ್ಯಕ್ತಿಯೊಬ್ಬರ ಶವವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ಉಳ್ಳಾಲ ಪೊಲೀಸರು ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿದ್ದರು. ಈ ನಡುವೆ, ಪಾಂಡೇಶ್ವರ ಠಾಣೆಯಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಮೀನುಗಾರ ನಾರಾಯಣ ಎಂಬವರ ಸಹೋದರ ಕೃಷ್ಣಪ್ಪ ಅವರನ್ನ ಸ್ಥಳಕ್ಕೆ ಕರೆಸಿದ್ದರು. ಮೃತದೇಹ ತನ್ನ ತಮ್ಮನದ್ದೇ ಎಂದು ಗುರುತಿಸಿದ್ದರಿಂದ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಅವರಿಗೆ ಬಿಟ್ಟು ಕೊಡಲಾಗಿತ್ತು. 

ಉಡುಪಿ ಜಿಲ್ಲೆಯ ಕಿರಿಮಂಜೇಶ್ವರ ನಿವಾಸಿ ನಾರಾಯಣ (31) ಎಂಬವರು ಆ.3ರಂದು ಮಂಗಳೂರಿನ ಮೀನುಗಾರರೊಂದಿಗೆ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ್ದು ಆ.9ರಂದು ವಾಪಾಸು ಬರುತ್ತಿದ್ದಾಗ ನೇತ್ರಾವತಿ ನದಿ ಸೇರುವ ಅಳಿವೆ ಬಾಗಿಲಿನಲ್ಲಿ ಅಲೆಯ ಹೊಡೆತಕ್ಕೆ ಸಿಲುಕಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಅಣ್ಣ ಕೃಷ್ಣಪ್ಪ ಆ.10ರಂದು ಮಂಗಳೂರಿನ ಪಾಂಡೇಶ್ವರ ಠಾಣೆಯಲ್ಲಿ ನಾಪತ್ತೆ ಕೇಸು ದಾಖಲಿಸಿದ್ದರು. ಆ.17ರಂದು ಶವ ಪತ್ತೆಯಾದ ಸಂದರ್ಭದಲ್ಲಿ ಅದು ತಮ್ಮ ನಾರಾಯಣ ಅವರದ್ದೇ ಆಗಿರಬಹುದು ಎಂದು ಗುರುತು ಹಿಡಿದರೂ, ಪೊಲೀಸರು ಡಿಎನ್ಎ ಆಗದೆ ಸಾಬೀತು ಮಾಡಲು ಸಾಧ್ಯವಿಲ್ಲ ಎಂದಿದ್ದರು.‌ ಯಾಕಂದ್ರೆ, ದೇಹದಲ್ಲಿ ಗುರುತಿಸುವಂತಹ ಬಟ್ಟೆಯಾಗಲೀ, ಇನ್ನಿತರ ವಸ್ತುವಾಗಲೀ ಇರಲಿಲ್ಲ. ಹೀಗಾಗಿ ಕೊಳೆತ ಸ್ಥಿತಿಯಲ್ಲಿ ದೊರಕಿದ್ದ ಶವ ನಾರಾಯಣ ಅವರದ್ದಾ, ಬೇರೆಯವರದ್ದಾ ಎನ್ನುವುದು ಇನ್ನೂ ದೃಢಪಟ್ಟಿಲ್ಲ. 

ಇದೀಗ ಶವ ಮಹಜರು ಮಾಡಿದ ವೈದ್ಯರು ಮೃತದೇಹದ ತಲೆ ಬುರುಡೆಗೆ ಹರಿತ ಆಯುಧ ಮತ್ತು ಸುತ್ತಿಗೆಯಂತಹ ವಸ್ತುಗಳ ಪ್ರಹಾರದಿಂದ ಒಡೆದಿರುವುದು ಮತ್ತು ಹಲವು ರೀತಿಯ ಗಾಯಗಳಾಗಿರುವುದನ್ನು ಪತ್ತೆ ಮಾಡಿದ್ದಾರೆ. ಮುಖದ ಗದ್ದ ಭಾಗ ಮತ್ತು ಹೊಟ್ಟೆಯ ಭಾಗಗಳಲ್ಲೂ ಹರಿತವಾದ ಆಯುಧಗಳಿಂದ ಉಂಟಾದ ಗಾಯಗಳಿರುವುದನ್ನು ದೃಢಪಡಿಸಿದ್ದಾರೆ. ಹೀಗಾಗಿ ಈ ವ್ಯಕ್ತಿಯನ್ನು ಯಾರೋ ಹೊಡೆದು ಕೊಲೆಗೈದು ಸಮುದ್ರಕ್ಕೆ ಎಸೆದಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದ್ದು ಉಳ್ಳಾಲ ಪೊಲೀಸರು ಅಸಹಜ ಸಾವು ಪ್ರಕರಣವನ್ನು ಶಂಕಿತ ಕೊಲೆ ಕೇಸಾಗಿ ಪರಿವರ್ತಿಸಿದ್ದಾರೆ. 

ಈ ಬಗ್ಗೆ ಉಳ್ಳಾಲ ಠಾಣೆ ಪಿಎಸ್ಐ ರೇವಣಸಿದ್ದಪ್ಪ ಸ್ವತಃ ದೂರು ದಾಖಲಿಸಿಕೊಂಡು ಬಿಎನ್ಎಸ್ 118(2) ಮತ್ತು 103(1) ಅಡಿ ಕೇಸು ದಾಖಲಿಸಿದ್ದಾರೆ. ಅಲ್ಲದೆ, ತನ್ನ ತಮ್ಮನದ್ದೇ ಶವ ಎಂದಿರುವ ಕೃಷ್ಣಪ್ಪ ಅವರ ಸ್ಯಾಂಪಲ್ ಪಡೆದು ಡಿಎನ್ಎ ಪರೀಕ್ಷೆಗೆ ಮುಂದಾಗಿದ್ದಾರೆ. ಅಲ್ಲದೆ, ನಾರಾಯಣ ಅವರನ್ನು ಬೋಟಿನಲ್ಲಿ ಕರೆದೊಯ್ದಿದ್ದ ಇತರ ಸಿಬಂದಿಯನ್ನು ತನಿಖೆಗೆ ಒಳಪಡಿಸಲಿದ್ದಾರೆ.