ಆಲಪ್ಪುಝ ಜಿಲ್ಲೆಯಲ್ಲಿ ಹೊತ್ತಿಕೊಂಡ ದ್ವೇಷದ ಬೆಂಕಿ ; ಎಸ್ಡಿಪಿಐ ಮುಖಂಡನ ಹತ್ಯೆ ಬೆನ್ನಲ್ಲೇ ಬಿಜೆಪಿ ರಾಜ್ಯ ಸೆಕ್ರಟರಿ ಬರ್ಬರ ಕೊಲೆ !  

19-12-21 12:33 pm       HK News Desk   ಕ್ರೈಂ

ಕೇರಳದ ಆಲಪ್ಪುಝ ಜಿಲ್ಲೆಯಲ್ಲಿ ರಾಜಕೀಯ ವೈಷಮ್ಯಕ್ಕೆ ಬಿಜೆಪಿ ಮತ್ತು ಎಸ್ ಡಿಪಿಐ ಪಕ್ಷದ ಇಬ್ಬರು ಮುಖಂಡರು ಬಲಿಯಾಗಿದ್ದಾರೆ.

ಆಳಪ್ಪುಝ, ಡಿ.19: ಕೇರಳದ ಆಲಪ್ಪುಝ ಜಿಲ್ಲೆಯಲ್ಲಿ ರಾಜಕೀಯ ವೈಷಮ್ಯಕ್ಕೆ ಬಿಜೆಪಿ ಮತ್ತು ಎಸ್ ಡಿಪಿಐ ಪಕ್ಷದ ಇಬ್ಬರು ಮುಖಂಡರು ಬಲಿಯಾಗಿದ್ದಾರೆ. ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಸಮಿತಿ ಸೆಕ್ರಟರಿ, ಅಡ್ವಕೇಟ್ ರಂಜಿತ್ ಶ್ರೀನಿವಾಸ್ ಅವರನ್ನು ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನೆಯವರ ಎದುರಲ್ಲೇ ಬರ್ಬರವಾಗಿ ಕಡಿದು ಹತ್ಯೆ ಮಾಡಿದ್ದಾರೆ. 

ರಂಜಿತ್ ಶ್ರೀನಿವಾಸ್ ಬೆಳಗ್ಗೆ ಎದ್ದು ವಾಕಿಂಗ್ ಹೋಗಲು ರೆಡಿಯಾಗುತ್ತಿದ್ದಾಗ, ಮನೆಗೆ ನುಗ್ಗಿದ ದುಷ್ಕರ್ಮಿಗಳು ತಂಡ ತಲವಾರಿನಲ್ಲಿ ದಾಳಿ ನಡೆಸಿದ್ದು, ರಂಜಿತ್ ಸ್ಥಳದಲ್ಲೇ ಸಾವು ಕಂಡಿದ್ದಾರೆ. ತಾಯಿ ಮತ್ತು ಪತ್ನಿಯ ಎದುರಲ್ಲೇ ದುಷ್ಕರ್ಮಿಗಳು ಅಟ್ಟಾಡಿಸಿ ಹತ್ಯೆ ಮಾಡಿದ್ದಾರೆ. ರಂಜಿತ್ ಶ್ರೀನಿವಾಸ್ ಕಳೆದ ಬಾರಿ ಅಸೆಂಬ್ಲಿ ಚುನಾವಣೆಯಲ್ಲಿ ಆಲಪ್ಪುಝ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಅಲ್ಲದೆ, ಆಲಪ್ಪುಝ ನಗರದಲ್ಲಿ ವಕೀಲರಾಗಿ ವೃತ್ತಿ ನಡೆಸುತ್ತಿದ್ದು, ಸ್ಥಳೀಯವಾಗಿ ಹೆಸರು ಮಾಡಿದ್ದರು. 

ಶನಿವಾರ ಸಂಜೆ 7.30ರ ಸುಮಾರಿಗೆ ಇದೇ ಆಲಪ್ಪುಝ ನಗರದಿಂದ ಹತ್ತು ಕಿಮೀ ದೂರದ ಮನ್ನಾಚೇರಿ ಎಂಬಲ್ಲಿ ಎಸ್ ಡಿಪಿಐ ಮುಖಂಡನ ಮೇಲೆ ತಲವಾರು ದಾಳಿ ನಡೆದಿತ್ತು. ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ಕೆ.ಎಸ್.ಶಾನ್ ತನ್ನ ಮನೆಯತ್ತ ಬೈಕಿನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ದುಷ್ಕರ್ಮಿಗಳು ಕಾರು ಡಿಕ್ಕಿಯಾಗಿಸಿದ್ದರು. ಕಾರಿನಿಂದ ಇಳಿದಿದ್ದ ಆಗಂತುಕರು ಶಾನ್ ಮೇಲೆ ಯದ್ವಾತದ್ವಾ ತಲವಾರು ದಾಳಿ ನಡೆಸಿದ್ದರು. ಎಸ್ಡಿಪಿಐ, ಪಿಎಫ್ಐ ಬಲಿಷ್ಠವಾಗಿರುವ ಮನ್ನಾಚೇರಿಯಲ್ಲೇ ಘಟನೆ ನಡೆದಿದ್ದು, ಕೂಡಲೇ ಸುತ್ತುವರಿದ ಕಾರ್ಯಕರ್ತರು ತೀವ್ರ ಗಾಯಗೊಂಡಿದ್ದ ಶಾನ್ ಅವರನ್ನು ಕೊಚ್ಚಿ ಆಸ್ಪತ್ರೆಗೆ ಕರೆದೊಯ್ದಿದ್ದರು. ರಾತ್ರಿ 12 ಗಂಟೆ ವೇಳೆಗೆ ಶಾನ್ ಅಸುನೀಗಿದ್ದು, ರಾತ್ರಿಯೇ ಎಸ್ ಡಿಪಿಐ ಮತ್ತು ಪಿಎಫ್ಐ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದರು. 

ಎಸ್ಡಿಪಿಐ ಮುಖಂಡನ ಕೊಲೆಗೆ ಪ್ರತೀಕಾರವಾಗಿ ಬಿಜೆಪಿ ನಾಯಕನ ಹತ್ಯೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಆಳಪ್ಪುಝದಲ್ಲಿ ಕಳೆದ ಹಲವು ಸಮಯದಿಂದ ಬಿಜೆಪಿ ಮತ್ತು ಎಸ್ಡಿಪಿಐ ನಡುವೆ ಬೀದಿ ಕಾಳಗ ನಡೆದುಬಂದಿದೆ. ಕಳೆದ ಫೆಬ್ರವರಿಯಲ್ಲಿ ಎಸ್ಡಿಪಿಐ – ಆರೆಸ್ಸೆಸ್ ಮಧ್ಯೆ ಸಂಘರ್ಷ ನಡೆದು ನಂದು ಎಂಬ 22 ವರ್ಷದ ಆರೆಸ್ಸೆಸ್ ಕಾರ್ಯಕರ್ತನ ಕೊಲೆಯಾಗಿತ್ತು. ಇದೀಗ ಬಿಜೆಪಿ ಮತ್ತು ಎಸ್ಡಿಪಿಐ ಮುಖಂಡರಿಬ್ಬರು ಕೇವಲ 12 ಗಂಟೆಗಳ ಅಂತರದಲ್ಲಿ ಕೊಲೆಯಾಗಿದ್ದು ಉಭಯ ಗುಂಪುಗಳ ನಡುವೆ ದ್ವೇಷದ ಕಿಡಿ ಹೊತ್ತಿಸಿದೆ. 

ಆಲಪ್ಪುಝ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಗೊಳಿಸಿದ್ದು, ಆಯಕಟ್ಟಿನ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಈಗಾಗಲೇ ಘಟನೆಗೆ ಸಂಬಂಧಿಸಿ ಹಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಿಎಂ ಪಿಣರಾಯಿ ವಿಜಯನ್, ಕೊಲೆ ಗಡುಕರನ್ನು ಬಿಡುವುದಿಲ್ಲ. ಯಾವುದೇ ದ್ವೇಷಕ್ಕೆ ಕೊಲೆ ಉತ್ತರವಾಗಲ್ಲ. ದುಷ್ಕರ್ಮಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ. 

ಇತ್ತೀಚೆಗೆ ಪಾಲಕ್ಕಾಡ್ ಜಿಲ್ಲೆಯ ಎಡಪ್ಪಳ್ಳಿ ಎಂಬಲ್ಲಿ ಪತ್ನಿ ಜೊತೆ ಬೈಕಿನಲ್ಲಿ ತೆರಳುತ್ತಿದ್ದ ಆರೆಸ್ಸೆಸ್ ಕಾರ್ಯಕರ್ತ ಸಂಜಿತ್ ಎಂಬವರ ಕೊಲೆ ನಡೆದಿತ್ತು. ಬೈಕಿಗೆ ಕಾರು ಡಿಕ್ಕಿಯಾಗಿಸಿ ಹಾಡಹಗಲೇ ದುಷ್ಕರ್ಮಿಗಳ ತಂಡ 50 ಕ್ಕೂ ಹೆಚ್ಚು ಬಾರಿ ಕಡಿದು ಯುವಕನ ಹತ್ಯೆ ಮಾಡಿದ್ದರು. ಎಸ್ಡಿಪಿಐ- ಪಿಎಫ್ಐ ಕಾರ್ಯಕರ್ತರು ಕೃತ್ಯ ಎಸಗಿದ್ದರು ಎನ್ನಲಾಗಿತ್ತು. ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಐದು ಮಂದಿ ತಪ್ಪಿಸಿಕೊಂಡಿದ್ದಾರೆ. ಅದರಲ್ಲಿ ಮೂವರು ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದರು ಎನ್ನುವ ಮಾಹಿತಿಗಳಿವೆ. ಪೊಲೀಸರ ತನಿಖಾ ತಂಡ ಎರಡು ದಿನಗಳ ಹಿಂದೆ ಆರೋಪಿಗಳ ಪತ್ತೆಗಾಗಿ ಪಾಲಕ್ಕಾಡ್ ಮತ್ತು ಆಲಪ್ಪುಳ ಜಿಲ್ಲೆಯ ಎಸ್ಡಿಪಿಐ, ಪಿಎಫ್ಐ ಕಚೇರಿಗಳಿಗೆ ದಾಳಿ ನಡೆಸಿತ್ತು. ಪಾಲಕ್ಕಾಡ್ ಮತ್ತು ಆಲಪ್ಪುಳ ಅಕ್ಕಪಕ್ಕದ ಜಿಲ್ಲೆಗಳಾಗಿದ್ದು ಇದೀಗ ಬಿಜೆಪಿ ಮತ್ತು ಎಸ್ಡಿಪಿಐ ನಡುವೆ ದ್ವೇಷದ ಕಿಡಿ ಹೊತ್ತಿಸಿದೆ. ಸಂಜಿತ್ ಕೊಲೆಗೆ ಪ್ರತೀಕಾರ ರೂಪದಲ್ಲಿ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಕೆ.ಎಸ್.ಶಾನ್ ಕೊಲೆ ನಡೆದಿದೆ ಎನ್ನಲಾಗುತ್ತಿದೆ.

BJP leader in Kerala's Alappuzha was allegedly hacked to death at his home on Sunday by unidentified assailants. This comes a day after a Social Democratic Party of India (SDPI) leader was allegedly attacked and later killed in the same district.