ಆ್ಯಸಿಡ್ ಆರೋಪಿ ಪತ್ತೆಗಾಗಿ ಮಾರಮ್ಮ ದೇವಿಗೆ ಹರಕೆ ಹೊತ್ತಿದ್ದ ಪೊಲೀಸರು ! ದೇಶಾದ್ಯಂತ ಹುಡುಕಾಡಿ ಸೋತಿದ್ದವರಿಗೆ ಎರಡೇ ದಿನದಲ್ಲಿ ಸಿಕ್ಕಿತ್ತು ಸುಳಿವು ! 

27-05-22 11:43 am       Bengalore Correspondent   ಕರ್ನಾಟಕ

ಇತ್ತೀಚೆಗೆ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿ ಯಾರಿಗೂ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗಾಗಿ ಪೊಲೀಸರು ಶಿವನಸಮುದ್ರ ಬಳಿಯ ಮಾರಮ್ಮ ದೇವಿಗೆ ಹರಕೆ ಹೊತ್ತಿದ್ದ ವಿಚಾರ ಈಗ ಬಯಲಾಗಿದೆ! 

ಬೆಂಗಳೂರು, ಮೇ 27: ಇತ್ತೀಚೆಗೆ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿ ಯಾರಿಗೂ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗಾಗಿ ಪೊಲೀಸರು ಶಿವನಸಮುದ್ರ ಬಳಿಯ ಮಾರಮ್ಮ ದೇವಿಗೆ ಹರಕೆ ಹೊತ್ತಿದ್ದ ವಿಚಾರ ಈಗ ಬಯಲಾಗಿದೆ! 

ಆರೋಪಿ ನಾಗೇಶ್ ಘಟನೆ ನಡೆದು 20 ದಿನ ಕಳೆದರೂ, ಸುಳಿವೇ ಸಿಗದ ಕಾರಣ ಪೊಲೀಸರು ಬಹಳಷ್ಟು ಕಂಗೆಟ್ಟು ಹೋಗಿದ್ದರು. ಉತ್ತರ ಭಾರತದ ವಾರಣಾಸಿ, ಡೆಹ್ರಾಡೂನ್ ಹೀಗೆ ಹಲವಾರು ಪ್ರವಾಸಿ ಕೇಂದ್ರ, ಪುಣ್ಯಕ್ಷೇತ್ರಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದರು. ದೇಶಾದ್ಯಂತ ಹುಡುಕಾಟ ನಡೆಸಿದರೂ ಎಲ್ಲಿಯೂ ಕೂಡ ಸಣ್ಣ ಸುಳಿವೂ ಸಿಕ್ಕಿರಲಿಲ್ಲ. 

ಕೊನೆಗೆ, ಆತ ಹೆಚ್ಚು ದೇವಸ್ಥಾನಗಳಿಗೆ ಸುತ್ತಾಟ ಮಾಡುತ್ತಿದ್ದ ಎಂಬ ಮಾಹಿತಿಯಿಂದಾಗಿ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೂ ಬಂದು ಹೋಗಿದ್ದರು. ಮಂಡ್ಯ ಜಿಲ್ಲೆಯ ಶಿವನಸಮುದ್ರ ಬಳಿಯ ಮಾರಮ್ಮ ದೇವಸ್ಥಾನಕ್ಕೂ ತೆರಳಿದ್ದರು.‌ ಅಲ್ಲಿಗೆ ತೆರಳಿದ್ದಾಗ ಪೊಲೀಸರು ಆರೋಪಿ ಬೇಗ ನಮ್ಮ ಕೈಗೆ ಸಿಗಲಿ ಎಂದು ಕೈಮುಗಿದು ಹರಕೆ ಪೂಜೆಯನ್ನೂ ಹೊತ್ತಿದ್ದರು.‌ ಆರೋಪಿ ಒಂದೆರಡು ದಿನದಲ್ಲಿ ಕೈಗೆ ಸಿಕ್ಕರೆ ವಿಶೇಷ ಪೂಜೆ ಹರಕೆ ನೀಡುತ್ತೇವೆಂದು ಕಾಮಾಕ್ಷಿಪಾಳ್ಯ ಪೊಲೀಸರು ಮಾರಮ್ಮ ದೇವಿಗೆ ಹರಕೆ ಹೊತ್ತಿದ್ದರಂತೆ. 

ಹರಕೆ ಹೊತ್ತುಕೊಂಡು ಹಿಂತಿರುಗಿದ ಎರಡೇ ದಿನದಲ್ಲಿ ಪೊಲೀಸರಿಗೆ ಆರೋಪಿ ಬಗ್ಗೆ ಮಾಹಿತಿ ಸಿಕ್ಕಿತ್ತು.‌ ತಮಿಳುನಾಡಿನ ತಿರುವಣ್ಣಾಮಲೈ ಆಶ್ರಮವೊಂದರಲ್ಲಿ ನಾಗೇಶ್ ತಲೆಮರೆಸಿಕೊಂಡು ಇದ್ದಾನೆ ಎಂಬ ಮಾಹಿತಿ ಆಧರಿಸಿ ಅಲ್ಲಿಗೆ ತೆರಳಿದ್ದರು. ಆರೋಪಿ ಖಚಿತ ಆಗುತ್ತಲೇ ಅದೇ ದಿನ ರಾತ್ರಿ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದರು. ಹೀಗಾಗಿ ಮಾರಮ್ಮ ದೇವಿ ಪೊಲೀಸರಿಗೂ ಕೃಪೆ ತೋರಿದ್ದಾಳೆ ಎಂಬ ಮಾತು ಇಲಾಖೆಯ ಒಳಗಿಂದ ಕೇಳಿಬರುತ್ತಿದೆ. ಹರಕೆ ಹೊತ್ತಿದ್ದ ಪೊಲೀಸರು ಗುರುವಾರ ಸಂಜೆ ಶಿವನಸಮುದ್ರ ಬಳಿಯ ಮಾರಮ್ಮ ಗುಡಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Acid attack in Bangalore, police had made vow at temple to show the accused soon.