ಕುರುಬರ ಸಮಾವೇಶಕ್ಕೆ ಈಶ್ವರಪ್ಪ ಆಹ್ವಾನ ಇಲ್ಲ ; ಸಿದ್ದರಾಮಯ್ಯ- ಈಶ್ವರಪ್ಪ ಬಣದ ಸದಸ್ಯರ ಕಿತ್ತಾಟ, ತುಮಕೂರು ನಡುರಸ್ತೆಯಲ್ಲೇ ಹೊಡೆದಾಟ ! 

27-05-22 01:22 pm       HK News Desk   ಕರ್ನಾಟಕ

ತುಮಕೂರಿನಲ್ಲಿ ಆಯೋಜಿಸಿದ ಕುರುಬರ ಸಮಾವೇಶದ ನೆಪದಲ್ಲಿ ಸಿದ್ದರಾಮಯ್ಯ ಬಣ ಹಾಗೂ ಈಶ್ವರಪ್ಪ ಬಣಗಳ ಬೆಂಬಲಿಗರು ನಡುರಸ್ತೆಯಲ್ಲೇ ಕಿತ್ತಾಡಿಕೊಂಡಿದ್ದಾರೆ. 

ತುಮಕೂರು, ಮೇ 27 : ತುಮಕೂರಿನಲ್ಲಿ ಆಯೋಜಿಸಿದ ಕುರುಬರ ಸಮಾವೇಶದ ನೆಪದಲ್ಲಿ ಸಿದ್ದರಾಮಯ್ಯ ಬಣ ಹಾಗೂ ಈಶ್ವರಪ್ಪ ಬಣಗಳ ಬೆಂಬಲಿಗರು ನಡುರಸ್ತೆಯಲ್ಲೇ ಕಿತ್ತಾಡಿಕೊಂಡಿದ್ದಾರೆ. 

ಮೇ 28 ರಂದು ತುಮಕೂರಿನಲ್ಲಿ ನಡೆಯುವ ಕುರುಬರ ಸಮಾವೇಶಕ್ಕೆ ಸಂಬಂಧಿಸಿ ಕರೆದಿದ್ದ ಸುದ್ದಿಗೋಷ್ಟಿಯ ಸಂದರ್ಭದಲ್ಲಿ ಎರಡು‌ ಬಣಗಳ ಸದಸ್ಯರು ಕಾದಾಟ ನಡೆಸಿದ್ದಾರೆ.‌ ಈಶ್ವರಪ್ಪ ಅವರನ್ನು ಸಮಾವೇಶಕ್ಕೆ ಆಹ್ವಾನಿಸದೇ ಕೇವಲ ಸಿದ್ದರಾಮಯ್ಯರನ್ನು ಮಾತ್ರ ಆಹ್ವಾನಿಸದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿ ಕೈ ಮಿಲಾಯಿಸಿದ್ದಾರೆ.‌

ಸುದ್ದಿಗೋಷ್ಠಿ ಬಳಿಕ ಎರಡೂ ಬಣಗಳ ಸದಸ್ಯರು ಪರಸ್ಪರ ಕೈ ಕೈ ಮಿಲಾಯಿಸಿಕೊಂಡಿದ್ದು ಈಶ್ವರಪ್ಪ ಬಗ್ಗೆ ಹೀನಾಯವಾಗಿ ಜರೆದಿದ್ದಾರೆ.‌ ಈಶ್ವರಪ್ಪ ಯಾವತ್ತೂ ಹಿಂದುಳಿದವರ ಪರ ಧ್ವನಿ ಎತ್ತಿಲ್ಲ. ಕೇವಲ ಸಿದ್ದರಾಮಯ್ಯ ಮಾತ್ರ ಕುರುಬರ ಪರ ನಿಲ್ಲುತ್ತಾರೆ. ಈಶ್ವರಪ್ಪ ಮೊದಲು ತಾನು ಕುರುಬ ಎಂದು ಹೇಳಲಿ, ಆಮೇಲೆ ಅವರನ್ನು ಸಮಾವೇಶಕ್ಕೆ ಕರಿತೀವಿ ಎಂದು ಕುರುಬರ ರಾಜ್ಯ ಸಂಘದ ನಿರ್ದೇಶಕ ರಾಮಚಂದ್ರಪ್ಪ ಹೇಳಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ರಾಮಚಂದ್ರಪ್ಪ ಈ ರೀತಿ ಹೇಳಿಕೆ ಕೊಟ್ಟಿದ್ದು ಇದರ ಬೆನ್ನಲ್ಲೇ ಒಂದು ಬಣದ ಸದಸ್ಯರು ಇನ್ನಷ್ಟು ಕೆರಳಿದ್ದು ಜಗಳ ಶುರು ಮಾಡಿದ್ದಾರೆ. ಖಾಸಗಿ‌ ಹೋಟೆಲ್ ನಲ್ಲಿ ಸುದ್ದಿಗೋಷ್ಟಿ ನಡೆದಿದ್ದು ಒಳಗಿನಿಂದ ತಳ್ಳಾಡಿಕೊಂಡು ಬಂದು ಹೊರಗಡೆಯೂ ಮುಂಭಾಗ ನಡುರಸ್ತೆಯಲ್ಲಿ ಎರಡೂ‌ ಬಣಗಳ ಮಂದಿ ಕಿತ್ತಾಟ ನಡೆಸಿದ್ದಾರೆ.

Tumakuru Kurubara Samavesha no entry for K S Eshwarappa, members fight in the middle of road.