ಬಿಜೆಪಿಗೆ ಬರಲಿದ್ದಾರೆ ಹೊಸ ಸಾರಥಿ ; ರಾಜ್ಯದ ಬೆಳವಣಿಗೆ ಬಗ್ಗೆ ಹೈಕಮಾಂಡ್ ತೀವ್ರ ನಿರಾಸೆ, ಒಂದೇ ವಾರದಲ್ಲಿ ಮೇಜರ್ ಸರ್ಜರಿ !

05-08-22 11:01 pm       Bangalore Correspondent   ಕರ್ನಾಟಕ

ರಾಜ್ಯದಲ್ಲಿ ಸರಣಿ ಹತ್ಯೆಗಳ ಕಾರಣದಿಂದಾಗಿ ಬಿಜೆಪಿ ಕಾರ್ಯಕರ್ತರ ಆಕ್ರೋಶ ಮುಗಿಲು ಮುಟ್ಟಿರುವಾಗಲೇ ಗೃಹ ಸಚಿವ ಅಮಿತ್ ಷಾ ಬೆಂಗಳೂರಿಗೆ ಆಗಮಿಸಿದ್ದರು.

ಬೆಂಗಳೂರು, ಆಗಸ್ಟ್ 5: ರಾಜ್ಯದಲ್ಲಿ ಸರಣಿ ಹತ್ಯೆಗಳ ಕಾರಣದಿಂದಾಗಿ ಬಿಜೆಪಿ ಕಾರ್ಯಕರ್ತರ ಆಕ್ರೋಶ ಮುಗಿಲು ಮುಟ್ಟಿರುವಾಗಲೇ ಗೃಹ ಸಚಿವ ಅಮಿತ್ ಷಾ ಬೆಂಗಳೂರಿಗೆ ಆಗಮಿಸಿದ್ದರು. ಬಿಜೆಪಿ ಕಾರ್ಯಕರ್ತರ ಹತ್ಯೆಗಳ ಕಾರಣಕ್ಕೆ ಮುಖ್ಯಮಂತ್ರಿ, ಗೃಹ ಸಚಿವರನ್ನು ಕರೆದು ತೀವ್ರವಾಗಿ ತರಾಟೆಗೆತ್ತಿಕೊಂಡಿದ್ದು ಭಾರೀ ಸುದ್ದಿಯಾಗಿತ್ತು. ಇದಕ್ಕೂ ಮೊದಲೇ ದೆಹಲಿಯಲ್ಲಿ ಅಮಿತ್ ಷಾ ಅವರನ್ನು ಭೇಟಿಯಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರನ್ನೂ ಷಾ ತರಾಟೆಗೆತ್ತಿಕೊಂಡಿದ್ದರು ಅನ್ನೋದೂ ಚರ್ಚೆಗೀಡಾಗಿತ್ತು.

ಇಷ್ಟೆಲ್ಲ ಬೆಳವಣಿಗೆ ಆಗಿದ್ದರೂ ಅಮಿತ್ ಷಾ ಬಂದು ಹೋದ ಸಂದರ್ಭದಲ್ಲಿಯೇ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲವೆಂದೇ ರಾಜ್ಯ ನಾಯಕರು ರಾಗ ಎಳೆದಿದ್ದರು. ಆದರೆ ಬಿಜೆಪಿ ಮೂಲಗಳ ಪ್ರಕಾರ, ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಅಮಿತ್ ಷಾ ತೀವ್ರ ನಿರಾಸೆಗೊಂಡಿದ್ದು, ಇಡೀ ರಾಜ್ಯ ಘಟಕಕ್ಕೇ ಸರ್ಜರಿ ಮಾಡಲು ಮುಂದಾಗಿದ್ದಾರಂತೆ. ಒಂದೇ ವಾರದಲ್ಲಿ ಈ ಬಗ್ಗೆ ನಿರ್ಧಾರಕ್ಕೆ ಬರಲಿದ್ದಾರೆ ಎಂದು ಬಿಜೆಪಿ ನಾಯಕರಲ್ಲಿ ಕೆಲವರು ಮಾತನಾಡಿಕೊಂಡಿದ್ದಾರೆ.

Dakshina Kannada: BJP youth wing leader hacked to death in Bellare, CM  condemns killing

ಮೂರು ತಿಂಗಳ ಹಿಂದೆ ಶಿವಮೊಗ್ಗದಲ್ಲಿ ಹರ್ಷನ ಸಾವು ಆಕಸ್ಮಿಕ ಎಂದೇ ಆಗಿದ್ದರೂ, ಸುಳ್ಯದಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಸಾವು ಆಕಸ್ಮಿಕ ಆಗಿರಲಿಲ್ಲ. ಅದರಲ್ಲಿ ಬಿಜೆಪಿ ಸರಕಾರದ ಗುಪ್ತಚರ ವೈಫಲ್ಯದ ಜೊತೆಗೆ ಸ್ಥಳೀಯ ಪೊಲೀಸರ ನಿರಾಸಕ್ತಿಯೂ ಎದ್ದು ಕಂಡಿತ್ತು. ಅಷ್ಟೇ ಅಲ್ಲ, ಬಿಜೆಪಿಯೇ ಆಡಳಿತದಲ್ಲಿದ್ದರೂ, ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದ್ದು ರಾಜ್ಯದೆಲ್ಲೆಡೆ ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿತ್ತು. ಇದೇ ಕಾರಣಕ್ಕೆ ರಾಜ್ಯದ ಹೆಚ್ಚಿನ ಕಡೆಗಳಲ್ಲಿ ಯುವಮೋರ್ಚಾ ಕಾರ್ಯಕರ್ತರು ಪಕ್ಷದ ಜವಾಬ್ದಾರಿಗಳಿಗೆ ರಾಜಿನಾಮೆ ನೀಡಿದ್ದರು.

Adhikari meets Amit Shah with demand for CAA rules | Latest News India -  Hindustan Times

ಇಷ್ಟೇ ಅಲ್ಲದೆ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಊರಲ್ಲೇ ಈ ಸ್ಥಿತಿ ಎದುರಾಗಿದ್ದು ಮತ್ತು ಅವರು ಅಂತಿಮ ದರ್ಶನಕ್ಕೆ ಆಗಮಿಸಿದ್ದ ವೇಳೆಯೇ ಕಾರ್ಯಕರ್ತರು ತಿರುಗಿ ಬಿದ್ದಿದ್ದು ಇವೆಲ್ಲ ತುಂಬ ನೆಗೆಟಿವ್ ಆಗಿದ್ದ ಅಂಶಗಳಾಗಿದ್ದವು. ಬಿಜೆಪಿ ಕಾರ್ಯಕರ್ತನ ಹತ್ಯೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದ್ದು ರಾಜ್ಯ ಬಿಜೆಪಿ ಪಾಲಿಗೆ ಭಾರೀ ಮೈನಸ್ ಆಗಿತ್ತು. ಇದನ್ನೇ ನೆಪವಾಗಿಟ್ಟು ರಾಜ್ಯಾಧ್ಯಕ್ಷರನ್ನು ಸೇರಿದಂತೆ ರಾಜ್ಯ ಘಟಕವನ್ನೇ ಸರ್ಜರಿ ಮಾಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎನ್ನುವ ಮಾತು ಕೇಳಿಬಂದಿದೆ. ಅಮಿತ್ ಷಾ ಬಂದ ಸಂದರ್ಭದಲ್ಲಿಯೇ ಈ ಬಗ್ಗೆ ಮಾತುಕತೆ ಆಗಿದ್ದಲ್ಲದೆ, ಮುಂದಿನ ನಾಯಕನ ಬಗ್ಗೆಯೂ ನಿರ್ಧಾರ ಆಗಿದೆ ಎನ್ನಲಾಗುತ್ತಿದೆ.

ಈ ಹೊತ್ತಿಗೆ ಹರ್ಷ, ಪ್ರವೀಣ್ ಹತ್ಯೆಯ ವಿಚಾರಕ್ಕೆ ತಲೆದಂಡ ಅನ್ನುವುದಕ್ಕಿಂತಲೂ ನಳಿನ್ ಕುಮಾರ್ ಅವಧಿಯೂ ಮುಗಿದಿದೆ. ಬಿಜೆಪಿಯ ಈಗಿನ ನಿಯಮದ ಪ್ರಕಾರ, ಯಾವುದೇ ಅಧ್ಯಕ್ಷನನ್ನು ಮೂರು ವರ್ಷಕ್ಕಿಂತ ಹೆಚ್ಚು ಮುಂದುವರಿಸುವ ಪದ್ಧತಿ ಇಲ್ಲ. ರಾಷ್ಟ್ರೀಯ ಅಧ್ಯಕ್ಷರಾಗಲೀ, ರಾಜ್ಯ ಘಟಕದ ಅಧ್ಯಕ್ಷರಾಗಲೀ ಈಗ ಒಂದು ಬಾರಿಗೆ ಮಾತ್ರ ಅವಕಾಶ. ಅಮಿತ್ ಷಾ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅವಧಿಯಲ್ಲೂ ತುಂಬ ಪ್ರಭಾವಿ ಮತ್ತು ಚಾಣಾಕ್ಷ ಆಗಿದ್ದರೂ, ಒಂದು ಬಾರಿಯ ನಂತರ ಬದಲಾವಣೆ ಮಾಡಲಾಗಿತ್ತು. ನಿಯಮದಂತೆ ಜೆಪಿ ನಡ್ಡಾಗೆ ಅಧಿಕಾರ ಹಸ್ತಾಂತರಿಸಿದರೂ, ಪಕ್ಷದ ಚುಕ್ಕಾಣಿ ಅಮಿತ್ ಷಾ ಕೈಯಲ್ಲೇ ಇದೆ. ಹಿಂದೆ ಅಧ್ಯಕ್ಷರ ಅವಧಿ ಎರಡು ವರ್ಷ ಇದ್ದಾಗ ಉತ್ತಮ ಎನಿಸಿದರೆ, ಮುಂದಿನ ಅವಧಿಗೆ ಮುಂದುವರಿಕೆ ಇತ್ತು. ಈಗ ಮೂರು ವರ್ಷ ಮಾಡಿ, ಮುಂದುವರಿಕೆ ಇಲ್ಲವೆಂದು ಬಿಜೆಪಿಯಲ್ಲೇ ನಿಯಮ ಮಾಡಲಾಗಿದೆ. ಇದರ ಪ್ರಕಾರ, ನಳಿನ್ ಕುಮಾರ್ ಬದಲಾವಣೆ ಮೊದಲೇ ಖಾತ್ರಿಯಾಗಿದ್ದ ಅಂಶ. ಅಂದ ಹಾಗೆ, ನಳಿನ್ ಕುಮಾರ್ 2019, ಆಗಸ್ಟ್ 19ಕ್ಕೆ ಪದಗ್ರಹಣ ಮಾಡಿದ್ದರು. ಹಾಗಾಗಿ ಅದಕ್ಕೂ ಮೊದಲೇ ಹೊಸ ಅಧ್ಯಕ್ಷರ ನೇಮಕ ಆಗೋದು ಪಕ್ಕಾ ಆಗಿದೆ.

C T Ravi's 'Sarvajna' remark on SC judges triggers row | Deccan Herald

From Puttur to parliament: Shobha Karandlaje's inspiring success story |  Deccan Herald

ಯಾರಾಗ್ತಾರೆ ಹೊಸ ಅಧ್ಯಕ್ಷ ?  

ಈವರೆಗೂ ಬಿಜೆಪಿಯಲ್ಲಿ ಒಕ್ಕಲಿಗ ಕೋಟಾದಿಂದ ರಾಜ್ಯಾಧ್ಯಕ್ಷರಾಗಬೇಕೆಂಬ ನೆಲೆಯಲ್ಲಿ ಸಿಟಿ ರವಿ ಅಥವಾ ಶೋಭಾ ಕರಂದ್ಲಾಜೆ ಹೆಸರು ಕೇಳಿಬಂದಿತ್ತು. ಇತ್ತೀಚೆಗೆ ಡೈನಾಮಿಕ್ ಅನ್ನುವ ನೆಲೆಯಲ್ಲಿ ಹಾಲಿ ಇಂಧನ ಸಚಿವ ಸುನಿಲ್ ಕುಮಾರ್ ಹೆಸರು ಮುನ್ನೆಲೆಗೆ ಬಂದಿದೆ. ವರ್ಷದ ಹಿಂದೆ ಬಿಟ್ ಕಾಯಿನ್ ವಿಚಾರದಲ್ಲಿ ರಾಜ್ಯಾಧ್ಯಕ್ಷರ ತಲೆದಂಡ ಆಗುತ್ತೆ ಎನ್ನಲಾಗಿತ್ತು. ಆ ಸಂದರ್ಭದಲ್ಲಿ ಅರವಿಂದ ಲಿಂಬಾವಳಿ ಹೆಸರು ಚಾಲ್ತಿಯಲ್ಲಿತ್ತು. ಲಿಂಬಾವಳಿ ಹೆಸರು ಈಗ ಚಾಲ್ತಿಯಲ್ಲಿ ಇಲ್ಲದೇ ಇದ್ದರೂ, ಕೇಂದ್ರ ಮಟ್ಟದಲ್ಲಿ ಛಾಪು ಹೊಂದಿದ್ದಾರೆ. ಹೀಗಾಗಿ ಈ ನಾಲ್ವರಲ್ಲಿ ಒಬ್ಬರನ್ನು ರಾಜ್ಯಾಧ್ಯಕ್ಷರಾಗಿ ಮಾಡುವುದು ಖಚಿತ.

Karnataka to have a new State BJP president in a weeks time, high command disappointed with Nalin Kumar Kateel after turmoil due to killing of Praveen Nattaru in Bellare, Sullia.