ಸಚಿವ ಸ್ಥಾನಕ್ಕೆ ಸಿ.ಟಿ ರವಿ ರಾಜಿನಾಮೆ, ಅಂಗೀಕರಿಸದ ಸಿಎಂ ಯಡಿಯೂರಪ್ಪ ! 

04-10-20 10:17 am       Bangalore Correspondant   ಕರ್ನಾಟಕ

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನೇಮಕಗೊಂಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. 

ಬೆಂಗಳೂರು, ಅಕ್ಟೋಬರ್ 4: ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನೇಮಕಗೊಂಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. 

ಸಿಎಂ ಯಡಿಯೂರಪ್ಪ ಅವರನ್ನು ಶನಿವಾರ ಭೇಟಿ ಮಾಡಿದ್ದ ಸಿಟಿ ರವಿ, ಕೆಲ ಕಾಲ ಚರ್ಚೆ ನಡೆಸಿದ ಬಳಿಕ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಆದರೆ ರಾಜಿನಾಮೆ ಪತ್ರವನ್ನು ಸಿಎಂ ಯಡಿಯೂರಪ್ಪ ಅಂಗೀಕರಿಸಿಲ್ಲ ಎನ್ನಲಾಗ್ತಿದೆ. 

ಇದೇ ವೇಳೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಸಿಟಿ ರವಿ, ವರಿಷ್ಠರಿಗೆ ಮಾಹಿತಿ ರವಾನಿಸಿದ್ದಾರೆ. ಮೂಲಗಳ ಪ್ರಕಾರ ನವೆಂಬರ್‌ನಲ್ಲಿ ಸಚಿವ ಸಂಪುಟ ಪುನಾ‌ರಚನೆಯಾಗಲಿದೆ. ಇದೇ ವೇಳೆಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಕನ್ನಡ -ಸಂಸ್ಕೃತಿ ಇಲಾಖೆಯಲ್ಲಿ ಮಹತ್ವದ ಚಟುವಟಿಕೆಗಳು ನಡೆಯುತ್ತವೆ. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಸಚಿವ ಸ್ಥಾನದಲ್ಲಿ ಮುಂದುವರಿಯುವಂತೆ ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ ಎನ್ನಲಾಗಿದೆ. 

ಅಕ್ಟೋಬರ್‌ 5 ಹಾಗೂ 6ರಂದು ದಿಲ್ಲಿಯಲ್ಲಿ ಪಕ್ಷದ ಸಂಘಟನಾ ಸಭೆ ನಡೆಯಲಿದೆ. ಪಕ್ಷದ ವಿವಿಧ ಹುದ್ದೆಗಳಿಗೆ ಆಯ್ಕೆಗೊಂಡ ರಾಜ್ಯದ ಎಲ್ಲ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಲಿದ್ದು, ರಾಜೀನಾಮೆ ಬಗ್ಗೆ ವರಿಷ್ಠರು ಅಲ್ಲಿಯೇ ರ್ನಿಯ ತೆಗೆದುಕೊಳ್ಳುವ ಸಾಧ್ಯತೆಯಿದೆ.