ಶಿವಮೊಗ್ಗಕ್ಕೆ 15 ತುಕಡಿ ಆರ್​ಎಎಫ್ ಎಂಟ್ರಿ ; ಎಡಿಜಿಪಿ ನೇತೃತ್ವದಲ್ಲಿ ಫುಲ್ ರೌಂಡ್ಸ್ ! ರಾತ್ರಿ ದ್ವಿಚಕ್ರ ವಾಹನ ಬಳಕೆಗೆ ನಿಷೇಧ 

16-08-22 06:31 pm       HK News Desk   ಕರ್ನಾಟಕ

ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಆರ್ ಎಎಫ್ ತುಕಡಿ ನಿಯೋಜನೆ ಮಾಡಲಾಗಿದೆ. ಅಲ್ಲದೆ, ಶಿವಮೊಗ್ಗ ನಗರದಲ್ಲಿ ರಾತ್ರಿ  9 ರಿಂದ ಬೆಳಗ್ಗೆ ಐದು ಗಂಟೆ ವರೆಗೆ ದ್ವಿಚಕ್ರ ವಾಹನ ಚಾಲನೆಯನ್ನು ನಿಷೇಧಿಸಲಾಗಿದೆ.

ಶಿವಮೊಗ್ಗ, ಆಗಸ್ಟ್ 16: ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಆರ್ ಎಎಫ್ ತುಕಡಿ ನಿಯೋಜನೆ ಮಾಡಲಾಗಿದೆ. ಅಲ್ಲದೆ, ಶಿವಮೊಗ್ಗ ನಗರದಲ್ಲಿ ರಾತ್ರಿ  9 ರಿಂದ ಬೆಳಗ್ಗೆ ಐದು ಗಂಟೆ ವರೆಗೆ ದ್ವಿಚಕ್ರ ವಾಹನ ಚಾಲನೆಯನ್ನು ನಿಷೇಧಿಸಲಾಗಿದೆ. ಎಡಿಜಿಪಿ ಅಲೋಕ್ ಕುಮಾರ್ ಸ್ಥಳಕ್ಕೆ ಬಂದಿದ್ದು ಬಂದೋಬಸ್ತ್ ಪರಿಶೀಲನೆ ಮಾಡಿದ್ದಾರೆ.

ಶಿವಮೊಗ್ಗ ನಗರದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಆರ್​ಎಎಫ್(ರ್ಯಾಪಿಡ್ ಆಕ್ಷನ್ ಫೋರ್ಸ್) ತುಕಡಿಯಿಂದ ರೂಟ್ ಮಾರ್ಚ್ ನಡೆಸಲಾಗಿದೆ.‌ ಬೆಂಗಳೂರಿನಿಂದ ಆಗಮಿಸಿರುವ ಆರ್​ಎಎಫ್ ತುಕಡಿ ಜತೆಗೆ ಕೆಎಸ್​ಆರ್​ಪಿ ಹಾಗೂ ಡಿಎಆರ್ ಪಡೆಯಿಂದಲೂ ಪಥ ಸಂಚಲನ ನಡೆಸಲಾಗುತ್ತಿದೆ. ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದಿಂದ ಕೆ.ಆರ್. ಪುರಂ ರಸ್ತೆ ಸೇರಿದಂತೆ ಹಳೇ ಶಿವಮೊಗ್ಗ ಭಾಗದಲ್ಲಿ ರೂಟ್ ಮಾರ್ಚ್ ನಡೆದಿದೆ.

ಇದೇ ವೇಳೆ, ಸುದ್ದಿಗಾರರೊಂದಿಗೆ ಮಾತನಾಡಿದ ಅಲೋಕ್​ ಕುಮಾರ್, ಜನರು ಅಂಜಬೇಕಾದ ಅವಶ್ಯಕತೆಯಿಲ್ಲ‌. ಜನರ ಜತೆ ನಾವಿದ್ದೇವೆ. ಅಹಿತಕರ ಘಟನೆ ತಡೆಯುವ ನಿಟ್ಟಿನಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರ ಸಂಪೂರ್ಣ ನಿಷೇಧ ಮಾಡಲಾಗಿದೆ. ಆದರೆ ತುರ್ತು ಸಂದರ್ಭದಲ್ಲಿ ವಾಹನ ಚಾಲನೆ ಮಾಡಬಹುದು. ಅದರಲ್ಲೂ 18 ರಿಂದ 40 ವರ್ಷದ ಒಳಗಿನವರು ಹಿಂಬದಿ ಸವಾರರಾಗಿ ಹೋಗುವಂತಿಲ್ಲ. ಮಹಿಳೆಯರಿಗೆ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ. 

ರಾತ್ರಿ ವೇಳೆ ಸಂಚಾರವನ್ನು ತಡೆಯುವ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ. ತುರ್ತು ಸಂದರ್ಭ ಹೊರತುಪಡಿಸಿ ಜನರು ರಾತ್ರಿ ವೇಳೆ ಹೊರಗೆ ತೆರಳಬಾರದು. ಮೂರು ದಿನಗಳ ವರೆಗೆ ರಾತ್ರಿ ವೇಳೆ ನಿರ್ಬಂಧ ಇರಲಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ‌

ಸ್ವಾತಂತ್ರ್ಯ ದಿನ ಗಲಭೆಗೆ ಕಾರಣವಾದ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಹೇರಲಾಗುವುದು. ಗಲಭೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಲು ಕ್ರಮ ಕೈಗೊಳ್ಳಲಾಗುವುದು. ಹಬ್ಬದ ದಿನಗಳು ಬರುತ್ತಿದ್ದು ಈ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಅಗತ್ಯವಿದ್ದು ಯಾವುದೇ ಅಹಿತಕರ ಘಟನೆಗೂ ಆಸ್ಪದ ನೀಡುವುದಿಲ್ಲ ಎಂದಿದ್ದಾರೆ.

Prohibitory orders under Section 144 will stay in force till Thursday, 18 August, in Shivamogga city of Karnataka after two groups clashed over the installation of the posters of VD Savarkar and Tipu Sultan at Amir Ahmad Circle. Law and order ADGP Alok Kumar has said that sale of liquor has also been restricted in Shivamogga and Bhadravati.