ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಕಾಂಗ್ರೆಸ್ ಕಾರ್ಯಕರ್ತ ಬಂಧನ ; ಟಿಪ್ಪು ಹೆಸರಲ್ಲಿ ಕೊಡಗರನ್ನು ಅವಮಾನಿಸಿದ್ದಕ್ಕೆ ಮೊಟ್ಟೆ ಎಸೆದಿದ್ದೇನೆ !

20-08-22 08:30 pm       HK News Desk   ಕರ್ನಾಟಕ

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣದಲ್ಲಿ ಸೋಮವಾರಪೇಟೆ ನಿವಾಸಿ ಕಾಂಗ್ರೆಸ್ ಕಾರ್ಯಕರ್ತ ಸಂಪತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮಡಿಕೇರಿ, ಆಗಸ್ಟ್ 20: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣದಲ್ಲಿ ಸೋಮವಾರಪೇಟೆ ನಿವಾಸಿ ಕಾಂಗ್ರೆಸ್ ಕಾರ್ಯಕರ್ತ ಸಂಪತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಕುಶಾಲನಗರ ಠಾಣೆಯಲ್ಲಿ ಸಂಪತ್ ಸೇರಿ ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ‌ಶನಿವಾರ ಮಧ್ಯಾಹ್ನ ಸಂಪತ್ ಕುಶಾಲನಗರ ನ್ಯಾಯಾಲಯಕ್ಕೆ ಶರಣಾಗಲು ಆಗಮಿಸಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಂಪತ್, ಸಿದ್ದರಾಮಯ್ಯ ಈ ಹಿಂದೆ ಕೊಡಗಿನವರು ದನದ ಮಾಂಸ ತಿನ್ನುತ್ತಾರೆಂದು ಹೇಳಿದ್ದರು.‌ ಟಿಪ್ಪು ವಿಷಯದಲ್ಲಿ ಕೊಡಗಿನ ಜನರ ಭಾವನೆಗೆ ಧಕ್ಕೆ ತಂದಿದ್ದಾರೆ.‌ ಇದು ನನಗೆ ಇಷ್ಟವಾಗಿಲ್ಲ. ಯಾರೋ ಕೆಲವರು ತಿಂತಾರೆಂದು ಎಲ್ಲರೂ ಗೋಮಾಂಸ ತಿನ್ನುತ್ತಾರೆಂದು ಹೇಳಿದ್ದು ತಪ್ಪು. ಅದಕ್ಕಾಗಿ ಸಿದ್ದರಾಮಯ್ಯ ಬಗ್ಗೆ ಕೋಪ ಇತ್ತು. ಹಾಗಾಗಿ ನಾನು ಅಲ್ಲಿ ಹೋಗಿದ್ದಾಗ, ಸಿದ್ದರಾಮಯ್ಯ ಕಾರು ಬಂದಿದ್ದು ಎಲ್ಲರ ಜೊತೆ ಸೇರಿ ಮೊಟ್ಟೆ ಎಸೆದಿದ್ದೇನೆ ಎಂದು ಹೇಳಿದ್ದಾರೆ. ‌

ನಾನು ಈ ಹಿಂದೆ ಜೆಡಿಎಸ್ ಕಾರ್ಯಕರ್ತನಾಗಿದ್ದೆ. ಮಾಜಿ ಸಚಿವ ಜೀವಿಜಯ ಜೊತೆಗೆ ಕಾಂಗ್ರೆಸ್ ಬಂದಿದ್ದೇನೆ ಎಂದು ಸಂಪತ್ ಹೇಳಿದ್ದಾರೆ. ಅಪ್ಪಚ್ಚು ರಂಜನ್ ಅವರೊಂದಿಗೆ ಫೋಟೊ ವೈರಲ್ ಬಗ್ಗೆ ಕೇಳಿದ್ದಕ್ಕೆ, ಯಾವುದೋ ಹಿಂದು ಸಂಘಟನೆಯ ಕಾರ್ಯಕ್ರಮದಲ್ಲಿ ಫೋಟೊ ತೆಗೆದುಕೊಂಡಿದ್ದೆ.‌ ನಾನೇನು ಬಿಜೆಪಿ ಕಾರ್ಯಕರ್ತ ಅಲ್ಲ ಎಂದು ಸ್ಪಷ್ಟನೆ ನೀಡಿದರು.

ಇದಕ್ಕೂ ಮುನ್ನ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಜೊತೆ ಕೇಸರಿ ಶಾಲು ಹಾಕಿ ನಿಂತುಕೊಂಡಿದ್ದ ಸಂಪತ್ ಫೋಟೊ ವೈರಲ್ ಆಗಿತ್ತು. ಕಾಂಗ್ರೆಸಿಗರು, ಆತ ಬಿಜೆಪಿಯವನು ಎನ್ನುವ ರೀತಿ ಬಿಂಬಿಸಿ ಫೋಟೊ ವೈರಲ್ ಮಾಡಿದ್ದರು.‌ ಮತ್ತೊಂದು ಕಡೆ ಕಾಂಗ್ರೆಸ್ ಬಾವುಟ ಹಿಡಿದು ನಿಂತಿರುವ ಪೋಟೋ ಕೂಡ ವೈರಲ್ ಆಗಿತ್ತು. ಈ ಬಗ್ಗೆ ಸ್ವತಃ ಸಂಪತ್, ಸ್ಪಷ್ಟನೆ ನೀಡಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

Siddaramaiah attacked with egg by own congress member in Madikeri. The arrested says that he didn't like what Siddaramaiah about Madikeri in the media.