ಜುಲೈ 24ರಂದೇ ಹಾಸ್ಟೆಲ್ ಬಿಟ್ಟು ಬೆಂಗಳೂರು ಬಂದಿದ್ದ ಮಕ್ಕಳು, ಪೊಲೀಸರ ಬಳಿಗೂ ಹೋಗಿದ್ದರು ; ಸ್ವಾಮೀಜಿ ದೌರ್ಜನ್ಯ ಬಗ್ಗೆ ನ್ಯಾಯಾಂಗ ತನಿಖೆ ಆಗ್ರಹ 

27-08-22 04:43 pm       HK News Desk   ಕರ್ನಾಟಕ

ಮುರುಘಾ ಮಠದ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯದ ಬಗ್ಗೆ ಎಫ್ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಘಟನೆ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೆಂದು ಮೈಸೂರಿನ ಒಡನಾಡಿ ಸಂಸ್ಥೆ ಆಗ್ರಹ ಮಾಡಿದೆ. 

ಮೈಸೂರು, ಆಗಸ್ಟ್ 27: ಮುರುಘಾ ಮಠದ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯದ ಬಗ್ಗೆ ಎಫ್ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಘಟನೆ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೆಂದು ಮೈಸೂರಿನ ಒಡನಾಡಿ ಸಂಸ್ಥೆ ಆಗ್ರಹ ಮಾಡಿದೆ. 

ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಪರಶು ಮತ್ತು ಕೌನ್ಸಿಲರ್ ಸರಸ್ವತಿ ಹೇಳಿಕೆ ನೀಡಿದ್ದು ಪ್ರೌಢಶಾಲೆಯ ಮಕ್ಕಳನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿರುವ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. 

ಜುಲೈ 24 ರಂದು ಮಕ್ಕಳು ದೌರ್ಜನ್ಯದಿಂದ ಬೇಸತ್ತು ಬೆಂಗಳೂರಿನ ಮೆಜೆಸ್ಟಿಕ್ ಗೆ ಬಂದಿದ್ದರು. ಅಲ್ಲಿ‌ ಬಹಳಷ್ಟು ಸಮಯ ಒಂದೇ ಕಡೆ ನಿಂತಿದ್ದರಿಂದ ಆಟೋ ಚಾಲಕರೊಬ್ಬರು ಅವರನ್ನು ವಿಚಾರಿಸಿ, ಸಮೀಪದ ಕಾಟನ್ ಪೇಟೆ ಪೊಲೀಸ್ ಸ್ಟೇಷನ್ ಗೆ ಕರೆದೊಯ್ದಿದ್ದಾರೆ. ಠಾಣೆಯಲ್ಲಿ‌ ಮಕ್ಕಳು ಯಾರನ್ನು ಭೇಟಿ ಮಾಡಿದ್ರು ಅನ್ನೋ ಮಾಹಿತಿ ನಮಗಿಲ್ಲ. ಆದರೆ ಠಾಣೆಗೆ ಹೋಗಿರೋದು ನಿಜ.‌ ಮಕ್ಕಳು ಭಯದ ಕಾರಣಕ್ಕೆ ತಮ್ಮ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಲ್ಲ. 

ಸ್ವಾಮೀಜಿಯವರು ತಮ್ಮ ಮೇಲೆ ದೈಹಿಕವಾಗಿ ಹಲ್ಲೆ ಮಾಡುತ್ತಾರೆ. ಕೆಟ್ಟದಾಗಿ ನಿಂದಿಸುತ್ತಾರೆ ಎಂದಷ್ಟೇ ಹೇಳಿದ್ದಾರೆ. ಠಾಣೆಯಲ್ಲಿ ಸತ್ಯ ಹೇಳಿದ್ರೆ ಸ್ವಾಮೀಜಿಯವರು ಪ್ರಭಾವಿಗಳು, ತೊಂದರೆ ಆಗಬಹುದು ಎಂಬ ಕಾರಣಕ್ಕೆ ಸತ್ಯ ಹೇಳಿಲ್ಲ.‌ ಪೊಲೀಸರು ಸಂಯಮದಿಂದ ಅವರನ್ನು ವಿಚಾರಿಸಿದ್ದರೆ ಸತ್ಯಾಂಶ ಹೊರಬರುತ್ತಿತ್ತು.‌ ಆದರೆ ಪೊಲೀಸರು ಅಪ್ರಾಪ್ತ ಹೆಣ್ಣು ಮಕ್ಕಳಿಂದ ಸರಿಯಾಗಿ ಮಾಹಿತಿ ಪಡೆಯದೆ ನಿರ್ಲಕ್ಷ್ಯ ಮಾಡಿದ್ದಾರೆ. 

ಪೊಲೀಸರಿಂದ ನ್ಯಾಯ ಸಿಗುತ್ತೆ ಎಂಬ ಖಾತ್ರಿ ಇದ್ದಿದ್ದರೆ ಆ ಮಕ್ಕಳು ನಮ್ಮ ತನಕ ಬರುತ್ತಿರಲಿಲ್ಲ. ಹೀಗಾಗಿ ಆ ಮಕ್ಕಳು ಬೇರೊಬ್ಬರ ಸಹಾಯ ಪಡೆದು ನಮ್ಮ ಬಳಿ ಬಂದಿದ್ದಾರೆ. ನಾವು ಅವರ ಪರ ನಿಂತು ಎಫ್.ಐ.ಆರ್. ಮಾಡಿಸಿದ್ದೇವೆ. ಮಕ್ಕಳ ಮಾನಸಿಕ ಸ್ಥಿತಿ ಧೃಡವಾಗಿಯೇನೂ ಇಲ್ಲ. ತುಂಬಾ ಹೆದರಿಕೆಯಿಂದಲೇ ನಮ್ಮ ಬಳಿ ಆಗಿರುವ ಅನ್ಯಾಯದ ಬಗ್ಗೆ ಹೇಳಿಕೊಂಡಿದ್ದಾರೆ ಎಂದು ಕೌನ್ಸಿಲರ್ ಸರಸ್ವತಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

Murugha Matha Sri Shivamuruthy alleged of continuous Sexual harassment of hostel girls posco case filed in Chitradurga.