ಪಿಎಸ್ಐ ಹಗರಣ ; ಗೃಹ ಸಚಿವರ ರಾಜಿನಾಮೆಗೆ ಸಿದ್ದರಾಮಯ್ಯ ಪಟ್ಟು, ಸದನದಲ್ಲಿ ಕಾಂಗ್ರೆಸ್ ಗದ್ದಲ, ಬಿಜೆಪಿ ಸರಕಾರಕ್ಕೆ ತೀವ್ರ ತರಾಟೆ 

21-09-22 10:25 am       Bangalore Correspondent   ಕರ್ನಾಟಕ

ಪಿಎಸ್‌ಐ ನೇಮಕಾತಿ ಹಗರಣದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸದನದಲ್ಲಿ ಒತ್ತಾಯಿಸಿದ್ದಾರೆ. 

ಬೆಂಗಳೂರು, ಸೆ.21 : ಪಿಎಸ್‌ಐ ನೇಮಕಾತಿ ಹಗರಣದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸದನದಲ್ಲಿ ಒತ್ತಾಯಿಸಿದ್ದಾರೆ. 

ಪಿಎಸ್‌ಐ ನೇಮಕಾತಿಯಲ್ಲಾಗಿರುವ ಅವ್ಯವಹಾರಗಳ ಬಗ್ಗೆ ಮಂಗಳವಾರ ವಿಧಾನಸಭೆ ಅಧಿವೇಶನದಲ್ಲಿ ಸುದೀರ್ಘ ಚರ್ಚೆ ನಡೆಸಿದ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.‌ ಅಲ್ಲದೆ, ಈವರೆಗೂ ಕೇವಲ ಒಂದಷ್ಟು ಅಧಿಕಾರಿಗಳು ಮತ್ತು ಅಭ್ಯರ್ಥಿಗಳನ್ನು ಬಂಧಿಸಿದ್ದೀರಿ. ರಾಜಕಾರಣಿಗಳ ಕೈವಾಡ ಇಲ್ವಾ.. ಯಾಕೆ ಅವರನ್ನು ವಿಚಾರಣೆಗೆ ಒಳಪಡಿಸಿಲ್ಲ. ಬಂಧನ ಮಾಡಿಲ್ಲ. ಒಟ್ಟು ಹಗರಣದ ಬಗ್ಗೆ ಗೃಹ ಸಚಿವರು ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದರು. 

ಫ್ರೀಡಂ ಪಾರ್ಕ್‌ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಲ್ಲಿಗೆ ಹೋಗಿದ್ದೆ. ಅಲ್ಲಿ ಎಸ್‌ಡಿಎ, ಎಫ್‌ಡಿಎ, ಇಂಜಿನಿಯರ್‌ಗಳು, ಪೊಲೀಸ್‌ ಕಾನ್ಸ್‌ಟೇಬಲ್‌, ಕೆಪಿಟಿಸಿಎಲ್‌ ಪರೀಕ್ಷೆ ಬರೆದವರು ಹಾಗೂ ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡುವರು ಇದ್ದರು. ಅವರು ತಮ್ಮಿಂದ ಲಂಚ ನೀಡಿ ಕೆಲಸ ತೆಗೆದುಕೊಳ್ಳಲು ಆಗಲ್ಲ, ಹಾಗಾಗಿ ನಮ್ಮ ತಂದೆ ತಾಯಂದಿರು ಬೆಳೆದಿರುವ ಹೆಸರು, ಉದ್ದು, ಕಡ್ಲೆ, ಗೋಧಿ, ಅಕ್ಕಿ ಮುಂತಾದವುಗಳನ್ನು ಚೀಲದಲ್ಲಿ ಕಟ್ಟಿ ನನಗೆ ಕೊಟ್ಟು ಕಳಿಸಿದ್ದಾರೆ, ಅದನ್ನು ಸಭಾಧ್ಯಕ್ಷರ ಮೂಲಕ ಸರ್ಕಾರಕ್ಕೆ ತಲುಪಿಸುವುದು ನನ್ನ ಜವಾಬ್ದಾರಿ ಎಂದು ಸಿದ್ದರಾಮಯ್ಯ ಹೇಳಿದರು. ಇದಕ್ಕೆ ಪೂರಕವಾಗಿ ಪ್ರಿಯಾಂಕ ಖರ್ಗೆ ಕೂಡ ಸರಕಾರಕ್ಕೆ ಛಾಟಿ ಬೀಸಿದರು. 

ಆದರೆ, ವಿಪಕ್ಷ ನಾಯಕರ ತರಾಟೆಗೆ ಮುಖ್ಯಮಂತ್ರಿ ಬೊಮ್ಮಾಯಿ ಅಷ್ಟೇ ಸಮರ್ಥವಾಗಿ ಪ್ರತಿ ಏಟು ಕೊಡುತ್ತಾ ಬಂದರು. ಬಿಜೆಪಿ ನಾಯಕರ ಸಮರ್ಥನೆಗೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಬೆಂಬಲಕ್ಕೆ ಬಂದು ಹಗರಣದ ಬಗ್ಗೆ ತನಿಖೆ ನಡೆಸಿದ್ದೇ ಸಾಧನೆಯೆಂದು ಬಿಂಬಿಸಿದರು. ಇದರಿಂದ ಕೆರಳಿದ ಸಿದ್ದರಾಮಯ್ಯ, ನೀವು ಏನೇ ತನಿಖೆಯ ನಾಟಕ ಮಾಡಿ. ಮೊನ್ನೆ ನಿಮ್ಮ ಶಾಸಕನೇ 15 ಲಕ್ಷ ತಗೊಂಡಿದ್ದು ಹೌದು ಎಂದಿದ್ದಾನೆ. ನೀವು ಏನು ಮಾಡಿದ್ರಿ. ಯಾವ ತನಿಖೆ ಕೈಗೊಂಡಿದ್ರಿ. ನೀವು ಆಡಳಿತ ಪಕ್ಷದವರು ಎಲ್ಲ ಸೇರಿಕೊಂಡಿದ್ದೀರಿ ಎಂದರ್ಥ ತಾನೇ. ನಿಮಗೆ ನೈತಿಕತೆ ಇದ್ದರೆ ಗೃಹ ಸಚಿವರ ರಾಜಿನಾಮೆ ಪಡೆದು ತನಿಖೆ ನಡೆಸಿ ಎಂದು ಸವಾಲು ಹಾಕಿದರು. ಇದೇ ವೇಳೆ, ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರ ನಡುವೆ ವಾಗ್ಯುದ್ಧವೇ ನಡೆಯಿತು. ಕಾಂಗ್ರೆಸ್ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದು ಗದ್ದಲ ಎಬ್ಬಿಸಿದ್ದರು. ಕೊನೆಗೆ ಸದನವನ್ನು ಸ್ಪೀಕರ್ ಮುಂದೂಡಿರುವುದಾಗಿ ಪ್ರಕಟಿಸಿ ಎದ್ದು ಹೋದರು.

The alleged scam in recruitment of police sub-inspectors generated heat in the Legislative Assembly on Tuesday with the Opposition Congress members staging a dharna in the House seeking a judicial probe and demanding the resignation of Home Minister Araga Jnanendra.