ಸುಪ್ರೀಂ ನ್ಯಾಯಾಧೀಶ ಅಬ್ದುಲ್ ನಜೀರ್ ದಿಢೀರ್ ಭೇಟಿ ; ವಕೀಲರ ಭವನದ ಕಾಮಗಾರಿ ಕಳಪೆಯಾಗಿದ್ದಕ್ಕೆ ಗರಂ, ಅಧಿಕಾರಿಗಳಿಗೆ ತರಾಟೆ 

26-10-22 10:15 pm       HK News Desk   ಕರ್ನಾಟಕ

ಹುಟ್ಟೂರಿಗೆ ಆಗಮಿಸಿದ್ದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಅಬ್ದುಲ್ ನಝೀರ್‌ ಬುಧವಾರ ಮೂಡುಬಿದ್ರೆಯ ವಕೀಲರ ಭವನದ ಕಾಮಗಾರಿ ವೀಕ್ಷಣೆ ಮಾಡಿದ್ದು ಕಾಮಗಾರಿಯಲ್ಲಿ ಆಗಿರುವ ಲೋಪಗಳನ್ನು ತೋರಿಸಿ ಗುತ್ತಿಗೆದಾರ ಮತ್ತು ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್‌ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಮೂಡುಬಿದ್ರೆ, ಅ.26 : ಹುಟ್ಟೂರಿಗೆ ಆಗಮಿಸಿದ್ದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಅಬ್ದುಲ್ ನಝೀರ್‌ ಬುಧವಾರ ಮೂಡುಬಿದ್ರೆಯ ವಕೀಲರ ಭವನದ ಕಾಮಗಾರಿ ವೀಕ್ಷಣೆ ಮಾಡಿದ್ದು ಕಾಮಗಾರಿಯಲ್ಲಿ ಆಗಿರುವ ಲೋಪಗಳನ್ನು ತೋರಿಸಿ ಗುತ್ತಿಗೆದಾರ ಮತ್ತು ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್‌ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 

ಮೂಡುಬಿದ್ರೆ ನ್ಯಾಯಾಲಯದ ಆವರಣದಲ್ಲಿ ನಿರ್ಮಾಣ ಹಂತದ ವಕೀಲರ ಭವನದ ಕಾಮಗಾರಿಯ ವೀಕ್ಷಣೆಗೆ ನ್ಯಾಯಮೂರ್ತಿ ಅಬ್ದುಲ್ ನಝೀರ್ ಬುಧವಾರ ದಿಢೀರ್ ಭೇಟಿ ನೀಡಿದ್ದರು. ಈ ವೇಳೆ, ಕಳಪೆ ಮತ್ತು ಅಸಮರ್ಪಕ ಕಾಮಗಾರಿಯನ್ನು ಕಂಡು ನ್ಯಾಯಾಧೀಶರು ಗರಂ ಆದರು. ನ್ಯಾಯಾಧೀಶರ ಆಗಮನದ ಬಗ್ಗೆ ಗುತ್ತಿಗೆದಾರರಿಗೆ ಪೂರ್ವ ಮಾಹಿತಿ ಇದ್ದರೂ ಹಾಜರಿರಲಿಲ್ಲ ಎನ್ನಲಾಗಿದೆ. ಕಳಪೆ ಗುಣಮಟ್ಟದ ಟೈಲ್ಸ್, ಅವೈಜ್ಞಾನಿಕ ಕಾಮಗಾರಿಯನ್ನು ಒಡೆದು ಬೇರೆಯದ್ದೇ ಟೈಲ್ಸ್ ಬಳಸಿ ಸರಿಪಡಿಸುವಂತೆ ಇಂಜಿನಿಯರ್‌ಗೆ ತಾಕೀತು ಮಾಡಿದ್ದಾರೆ. 

ದನದ ಕೊಟ್ಟಿಗೆಗೆ ಬಳಸುವ ರೀತಿ ಸಾಮಾಗ್ರಿಗಳನ್ನು ಉಪಯೋಗ ಮಾಡಲಾಗಿದೆ ಎಂದು ಅಸಮಾಧಾನ ಹೊರಹಾಕಿದ ನ್ಯಾಯಾಧೀಶ ಅಬ್ದುಲ್ ನಜೀರ್, ಗುತ್ತಿಗೆದಾರ ಬಿಮಲ್ ಪ್ರವೀಣ್‌ನನ್ನು ಕಪ್ಪು ಪಟ್ಟಿಗೆ ಸೇರಿಸಿ ಐದು ವರ್ಷ ಯಾವುದೇ ಗುತ್ತಿಗೆ ಕೊಡದಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನ್ಯಾಯಾಧೀಶರಿಗೆ ಎಲ್ಲಾ ವಿಧದ ಪರಿಜ್ಞಾನವೂ ಇರುತ್ತದೆ. ನಮಗೆ ಸತ್ಯಾಂಶ ತಿಳಿಯಲು ಹೆಚ್ಚು ಸಮಯ ಬೇಕಾಗುವುದಿಲ್ಲ ಎಂದು ಪರೋಕ್ಷಾಗಿ ಕಿಡಿಕಾರಿದ್ದಾರೆ. ಕೊನೆ ಕ್ಷಣದಲ್ಲಿ ಗುತ್ತಿಗೆದಾರ ಆಗಮಿಸಿದ್ದು, ನನ್ನ ತವರೂರಿನಲ್ಲಿ ಈ ರೀತಿ ನಡೆದಿರುವುದರಿಂದ ನನ್ನ ಮನಸ್ಸಿಗೆ ಅತೀವ ನೋವಾಗಿದೆ ಎಂದ ಅವರು, ಗುತ್ತಿಗೆದಾರನ ಮುಖವನ್ನೂ ನೋಡದೆ ಹಿಂತಿರುಗಿದ್ದಾರೆ. ಜಿಲ್ಲಾ ಮುಖ್ಯ ನ್ಯಾಯಾಧೀಶರು, ವಕೀಲರ ಸಂಘದ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

Supreme Court judge Abdul Nazeer surprise visit to Moodbidri Court, turns angry looking at improper work.