ಸಿದ್ದರಾಮಯ್ಯ ಕಾಲದಲ್ಲಿ ಸಸ್ಪೆಂಡ್ ಆಗಿದ್ದ ಅಧಿಕಾರಿ ತನಿಖೆ ಹಾಳು ಮಾಡಿದ್ದಾರೆ ; ರೇಣುಕಾಚಾರ್ಯ ಕಿಡಿ

05-11-22 09:43 pm       HK News Desk   ಕರ್ನಾಟಕ

ಸಹೋದರನ ಮಗ ಚಂದ್ರಶೇಖರ್ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರ ವಿರುದ್ಧ ಶಾಸಕ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ದಾವಣಗೆರೆ, ನ.5: ಸಹೋದರನ ಮಗ ಚಂದ್ರಶೇಖರ್ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರ ವಿರುದ್ಧ ಶಾಸಕ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ. ಚಂದ್ರಶೇಖರ್ ಪತ್ತೆ ಮಾಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಈಗ ತನಿಖೆ ವಿಳಂಬ ಮಾಡಿ ಕಥೆ ಕಟ್ಟುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರೇಣುಕಾಚಾರ್ಯ, ಪ್ರಕರಣದ ಬಗ್ಗೆ ಸರಿಯಾಗಿ ತನಿಖೆ ಮಾಡದೆಯೇ ಒಬ್ಬ ಅಧಿಕಾರಿ ಹೇಳಿಕೆ ಕೊಟ್ಟಿದ್ದಾರೆ. ಆ ಅಧಿಕಾರಿ ಒಂದಂಕಿ ಲಾಟರಿ ಹಗರಣದಲ್ಲಿ ಸಸ್ಪೆಂಡ್ ಆಗಿದ್ದರು. ಅವರಿಂದ ಯಾವ ರೀತಿ ಸಮರ್ಪಕ ತನಿಖೆಯಾಗಲಿದೆ? ಸಿದ್ದರಾಮಯ್ಯ ಕಾಲದಲ್ಲಿ ಸಸ್ಪೆಂಡ್ ಆದ ಅಧಿಕಾರಿ ತನಿಖೆ ಹಾಳು ಮಾಡಿದ್ದಾರೆ ಎಂದು ಹೇಳುವ ಮೂಲಕ ಎಡಿಜಿಪಿ ಅಲೋಕ್ ಕುಮಾರ್ ವಿರುದ್ಧ ಪರೋಕ್ಷವಾಗಿ ಗುಡುಗಿದ್ದಾರೆ.

ಪೊಲಿಸರು ಬೋಗಸ್ ತನಿಖೆ ಮಾಡುತ್ತಿದ್ದಾರೆ. ಚಂದ್ರಶೇಖರ್ ಶವ ಪತ್ತೆ ಮಾಡಿದ್ದು ನಮ್ಮ ಕಾರ್ಯಕರ್ತರು. ಸಿಸಿ ಟಿವಿ ದೃಶ್ಯ ಪತ್ತೆ ಮಾಡಿದ್ದು ನಮ್ಮ ಕಾರ್ಯಕರ್ತರು. ಚಂದ್ರಶೇಖರ್ ನದ್ದು ಕೊಲೆ. ಕೆಲ ಫೋಟೋ, ವಿಡಿಯೋಗಳನ್ನು ಸಿಎಂ ಹಾಗೂ ಗೃಹ ಸಚಿವರಿಗೆ ಕಳುಹಿಸುತ್ತೇನೆ. ಪಾರದರ್ಶಕ ತನಿಖೆ ಮಾಡಿ ನ್ಯಾಯ ಕೊಡಿಸಲಿ ಎಂದು ಹೇಳಿದ್ದಾರೆ.

Renukacharyas nephew , suspended police has spoilt the case slams Renukacharya