ದೇವಸ್ಥಾನದಲ್ಲಿ ತೀರ್ಥ ಕುಡಿದರೆ ರೋಗ ಹರಡುತ್ತದೆ ; ಮತ್ತೆ ಕ್ಯಾತೆ ತೆಗೆದ ಲಲಿತಾ ನಾಯಕ್ 

06-11-22 07:31 pm       HK News Desk   ಕರ್ನಾಟಕ

ದೇವಸ್ಥಾನದಲ್ಲಿ ಕೊಡುವ ತೀರ್ಥವನ್ನು ಕುಡಿಯುವುದರಿಂದ ರೋಗಗಳು ಹರಡುತ್ತವೆ. ತೀರ್ಥ ಕೊಡುವವರು ತಮ್ಮ ಕೈಯನ್ನು ಶುದ್ಧವಾಗಿ ಕೈ ಇಟ್ಟುಕೊಂಡಿರುವುದಿಲ್ಲ.

ಗದಗ, ನ.6: ದೇವಸ್ಥಾನದಲ್ಲಿ ಕೊಡುವ ತೀರ್ಥವನ್ನು ಕುಡಿಯುವುದರಿಂದ ರೋಗಗಳು ಹರಡುತ್ತವೆ. ತೀರ್ಥ ಕೊಡುವವರು ತಮ್ಮ ಕೈಯನ್ನು ಶುದ್ಧವಾಗಿ ಕೈ ಇಟ್ಟುಕೊಂಡಿರುವುದಿಲ್ಲ. ಇದರಿಂದ ಎಷ್ಟೋ ಜನರು ವಾಂತಿ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವೆ, ವಿಚಾರವಾದಿ ಬಿ.ಟಿ.ಲಲಿತಾ ನಾಯಕ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಎಲ್ಲರ ಮನೆಯಲ್ಲಿಯೂ ನೀರು ಇದೆ. ಹೀಗಿದ್ದಾಗ ತೀರ್ಥ ಯಾಕೆ ಕುಡಿಯಬೇಕು. ಹೆಣ ಸುಟ್ಟು ಗಂಗಾ ನದಿಗೆ ಎಸೆಯುತ್ತಾರೆ. ಇದರಿಂದ ನದಿಯಲ್ಲಿ ಹೆಣಗಳು ತೇಲಿ ಬರುತ್ತವೆ. ಇಂತಹ ಜಲವನ್ನು ಗಂಗಾಜಲವೆಂದು ಯಾಕೆ ಕುಡಿಯಬೇಕು ಎಂದು ಲಲಿತಾ ನಾಯಕ್ ಪ್ರಶ್ನಿಸಿದ್ದಾರೆ. 

ಕಾಣದ ದೇವರಿಗೆ ಪೂಜೆ ಮಾಡುವಾಗ ಹೂವು, ಬಟ್ಟೆ ಯಾಕೆ ಹಾಕಬೇಕು. ದೇವಸ್ಥಾನದಲ್ಲಿ ಯಾರೋ ಹೇಳಿದರೆಂದು ದುಡ್ಡು ಹಾಕುತ್ತಾರೆ. ಜನರು ಅನಗತ್ಯವಾಗಿ ಹಣ ಪೋಲು ಮಾಡಬಾರದು. ಆದರೆ ಈಗ ಜನರಿಗೂ ತಿಳುವಳಿಕೆ ಬಂದಿದೆ. ಜನರು ದೇವಸ್ಥಾನದಲ್ಲಿ ದುಡ್ಡು ಹಾಕುತ್ತಿಲ್ಲ ಎಂದು ಹೇಳಿದರು.

ಪೂಜೆ ಎಂದರೆ ದೇಹ, ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವುದು ಎಂದರ್ಥ. ಇದನ್ನು ಸರ್ಕಾರಗಳು, ಸಂಘ- ಸಂಸ್ಥೆಗಳು ಜನರಿಗೆ ಮನವರಿಕೆ ಮಾಡಬೇಕಾಗಿದೆ. ವೈಜ್ಞಾನಿಕ ಸತ್ಯ ಏನಿವೆಯೋ ಅದನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ ಎಂದು ಲಲಿತಾ ನಾಯಕ್ ಅಭಿಪ್ರಾಯಪಟ್ಟಿದ್ದಾರೆ. 

ಕಾಂತಾರ ಸಿನಿಮಾ ಮತ್ತು ದೈವ ನರ್ತಕರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದ್ದ ಲಲಿತಾ ನಾಯಕ್ ಭಾರೀ ಟೀಕೆಗೆ ಒಳಗಾಗಿದ್ದರು.

Theertham in the temple will cause many diseases another controversy by activist Lalitha Naik