ಸಚಿವ ಗಡ್ಕರಿಗೆ ಬೆದರಿಕೆ ಕರೆ ; ಪುತ್ತೂರಿನ ಕೈದಿ ಜಯೇಶ್ ಕೃತ್ಯ, ಬೆಚ್ಚಿಬಿದ್ದ ನಾಗಪುರ ಪೊಲೀಸರು 

15-01-23 01:28 pm       HK News Desk   ಕರ್ನಾಟಕ

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಾಗ್ಪುರ ಕಚೇರಿಗೆ ಬೆದರಿಕೆ ಕರೆ ಮಾಡಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ಜಯೇಶ್ ಕುಮಾರ್ ಎಂದು ತಿಳಿದುಬಂದಿದೆ.

ಬೆಳಗಾವಿ, ಜ.15 : ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಾಗ್ಪುರ ಕಚೇರಿಗೆ ಬೆದರಿಕೆ ಕರೆ ಮಾಡಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ಜಯೇಶ್ ಕುಮಾರ್ ಎಂದು ತಿಳಿದುಬಂದಿದೆ. ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಜಯೇಶ್ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದು ಜೈಲು ಒಳಗಿನಿಂದಲೇ ಸಚಿವರ ಕಚೇರಿಗೆ ಕರೆ ಮಾಡಿದ್ದಾನೆ. 

ಜೈಲು ಕೈದಿಯಾಗಿರುವ ಜಯೇಶ್, ಅಕ್ರಮವಾಗಿ ಫೋನ್‌ ಬಳಸಿ ಈ ಕೃತ್ಯವನ್ನು ಎಸಗಿದ್ದಾನೆ. ಈ ಸಂಬಂಧ ನಾಗ್ಪುರ ಪೊಲೀಸರು ತನಿಖೆಗಾಗಿ ಬೆಳಗಾವಿಗೆ ತೆರಳಿದ್ದಾರೆ. ಆರೋಪಿಯನ್ನು ಪ್ರೊಡಕ್ಷನ್ ರಿಮಾಂಡ್‌ ನೀಡಲು ಕೇಳಿಕೊಂಡಿದ್ದೇವೆ ಎಂದು ನಾಗ್ಪುರ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹೇಳಿದ್ದಾರೆ.  ‌

ಜಯೇಶ್‌ ಕುಮಾರ್‌ ಪುತ್ತೂರಿನ ಕೊಲೆ ಪ್ರಕರಣ ಒಂದರಲ್ಲಿ ಜೀವಾವಧಿ ಶಿಕ್ಷೆಗೆ ಒಳಪಟ್ಟಿದ್ದಾನೆ. ಈ ಹಿಂದೆ ಜೈಲಿನಲ್ಲೇ ಇದ್ದುಕೊಂಡು ಎಡಿಜಿಪಿ ಅಲೋಕ್‌ ಕುಮಾರ್‌ ಅವರಿಗೂ ಜೀವ ಬೆದರಿಕೆ ಕರೆಯನ್ನು ಮಾಡಿ ಸುದ್ದಿಯಾಗಿದ್ದ.  ಆರೋಪಿಯ ಬಳಿ ಡೈರಿ ಪತ್ತೆಯಾಗಿದ್ದು, ಅದರಲ್ಲಿ ಸಚಿವರ ಕಚೇರಿಯ ನಂಬರ್‌ ಸೇರಿದಂತೆ ಹಲವು ನಂಬರ್‌ ಗಳಿದ್ದವು. ಸದ್ಯ ಡೈರಿಯನ್ನು ವಶಕ್ಕೆ ಪಡೆದಿದ್ದು, ಮೊಬೈಲ್‌ ಪತ್ತೆಯಾಗಿಲ್ಲ. 

ಜಯೇಶ್, ಸಚಿವರ ನಾಗಪುರ ಕಚೇರಿಗೆ ಶನಿವಾರ ಬೆಳಗ್ಗೆ 11:25, 11:32 ಹಾಗೂ 12:30ಕ್ಕೆ ಮೂರು ಬಾರಿ ಕರೆ ಮಾಡಿ, ತಾನು ದಾವೂದ್ ಇಬ್ರಾಹಿಂ ಗ್ಯಾಂಗ್‌ ಸದಸ್ಯನೆಂದು ಹೇಳಿ 100 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದ.  ಇದಾದ ಬಳಿಕ ಸಚಿವರ ನಿವಾಸದ ಸುತ್ತ ಭದ್ರತೆ ಹೆಚ್ಚಿಸಲಾಗಿತ್ತು. ‌ತನಿಖೆ ನಡೆಸಿದ ಭಯೋತ್ಪಾದನೆ ವಿರೋಧಿ ದಳ ಬೆಳಗಾವಿಗೆ ಬಂದಿದ್ದು ಆರೋಪಿಯನ್ನು ವಶಕ್ಕೆ ಪಡೆಯಲಿದ್ದಾರೆ.

Union Road Transport and Highways Minister Nitin Gadkari received death threat calls from a man who is imprisoned in Belagavi, Karnataka. Nagpur police traced the caller on Saturday. The caller has been identified as Jayesh Kantha. "Union Minister Nitin Gadkari was being threatened from jail. The caller is a notorious gangster and murder accused Jayesh Kantha, who is imprisoned in Belagavi jail. He threatened Gadkari's office by using the phone illegally inside the jail," Amitesh Kumar, Commissioner of Police, Nagpur, said.