ಬಿಲ್ಲವರ ಬಳಿಕ ಕ್ಷತ್ರಿಯ ಸಮಾಜದ ಒಗ್ಗಟ್ಟು ; ರಾಜಕೀಯ ಪ್ರಾತಿನಿಧ್ಯಕ್ಕೆ ಆಗ್ರಹ, ಚುನಾವಣೆಯಲ್ಲಿ 50 ಸೀಟಿಗೆ ಆಗ್ರಹ ಮುಂದಿಟ್ಟ ಕ್ಷತ್ರಿಯರು

23-02-23 09:10 pm       Bangalore Correspondent   ಕರ್ನಾಟಕ

ರಾಜ್ಯದಲ್ಲಿ ಕ್ಷತ್ರಿಯ ಸಮಾಜದ ಮತದಾರರು ಒಂದೂವರೆ ಕೋಟಿಯಷ್ಟಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 50 ಸೀಟುಗಳನ್ನು ತಮ್ಮ ಸಮಾಜಕ್ಕೆ ಕೊಡಬೇಕೆಂದು ರಾಜಕೀಯ ಪಕ್ಷಗಳಿಗೆ ಕ್ಷತ್ರಿಯ ಸಮಾಜ ಒಕ್ಕೂಟದ ಅಧ್ಯಕ್ಷ ಉದಯ್ ಸಿಂಗ್ ಆಗ್ರಹ ಮಾಡಿದ್ದಾರೆ.

ಬೆಂಗಳೂರು, ಫೆ.23: ರಾಜ್ಯದಲ್ಲಿ ಕ್ಷತ್ರಿಯ ಸಮಾಜದ ಮತದಾರರು ಒಂದೂವರೆ ಕೋಟಿಯಷ್ಟಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 50 ಸೀಟುಗಳನ್ನು ತಮ್ಮ ಸಮಾಜಕ್ಕೆ ಕೊಡಬೇಕೆಂದು ರಾಜಕೀಯ ಪಕ್ಷಗಳಿಗೆ ಕ್ಷತ್ರಿಯ ಸಮಾಜ ಒಕ್ಕೂಟದ ಅಧ್ಯಕ್ಷ ಉದಯ್ ಸಿಂಗ್ ಆಗ್ರಹ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿ ತಮ್ಮ ಸಮುದಾಯವನ್ನು ಕಡೆಗಣಿಸುತ್ತಾರೆ. ನಮ್ಮ ಕ್ಷತ್ರಿಯ ಸಮಾಜದ ಮತದಾರರು ರಾಜ್ಯದಲ್ಲಿ ಐದನೇ ಒಂದು ಭಾಗದಷ್ಟು ಇದ್ದಾರೆ. ಕರಾವಳಿ ಜಿಲ್ಲೆಗಳು, ಬೆಳಗಾವಿ, ಶಿವಮೊಗ್ಗ, ಬಳ್ಳಾರಿ, ಬೆಂಗಳೂರು, ಮೈಸೂರು ಹೀಗೆ ರಾಜ್ಯದ ಎಲ್ಲ ಕಡೆಯೂ ಹರಡಿದ್ದಾರೆ. ರಾಮ ಕ್ಷತ್ರಿಯ, ಕೋಟ ಕ್ಷತ್ರಿಯ, ಮರಾಠ ಕ್ಷತ್ರಿಯ ಹೀಗೆ ರಾಜ್ಯದಲ್ಲಿ 38 ವಿವಿಧ ಕ್ಷತ್ರಿಯ ಸಮಾಜದ ಜಾತಿಗಳಿದ್ದು, ಎಲ್ಲ ಸೇರಿ ಸುಮಾರು ಒಂದೂವರೆ ಕೋಟಿ ಜನರಿದ್ದಾರೆ. ನಮ್ಮ ಸಮಾಜ ಹರಿದು ಹಂಚಿ ಹೋದಂತಿದ್ದು, ಇತ್ತೀಚೆಗೆ ಎಲ್ಲ ಜಾತಿಗಳನ್ನು ಒಟ್ಟು ಸೇರಿಸಿ ಒಕ್ಕೂಟ ಮಾಡಿದ್ದೇವೆ ಎಂದರು.

ರಾಜಕೀಯ ಪ್ರಾತಿನಿಧ್ಯಕ್ಕಾಗಿ ನಾವು ಹೋರಾಟ ರೂಪಿಸುತ್ತಿದ್ದೇವೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾರೇ ಆಗಲೀ ನಮ್ಮ ಸಮಾಜದ ಪ್ರತಿನಿಧಿಗಳಿಗೆ ಟಿಕೆಟ್ ಕೊಟ್ಟಲ್ಲಿ ಅವರನ್ನು ಗೆಲ್ಲಿಸುವ ಕೆಲಸವನ್ನು ಕ್ಷತ್ರಿಯ ಸಮಾಜದ ಒಕ್ಕೂಟ ಮಾಡಲಿದೆ ಎಂದು ಹೇಳಿದರು. ಸಚಿವ ಆನಂದ್ ಸಿಂಗ್ ಕೂಡ ನಮ್ಮ ಸಮಾಜದವರಾಗಿದ್ದು ಸಮುದಾಯದ ಪ್ರಮುಖ ಮುಖಂಡರಿದ್ದಾರೆ. ಅವರನ್ನು ಮುಂದಿಟ್ಟು ನಾವು ರಾಜಕೀಯ ಪ್ರಾತಿನಿಧ್ಯಕ್ಕಾಗಿ ಹೋರಾಡುತ್ತೇವೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಕೃಷ್ಣ ಪಾಲೆಮಾರ್ ಮಾತನಾಡಿ, ನಮ್ಮ ಸಮಾಜದ ಜನರು ಎಲ್ಲ ವಿಭಾಗದಲ್ಲೂ ಅತ್ಯಂತ ಹಿಂದುಳಿದಿದ್ದು, ಪ್ರತಿ ಬಾರಿ ಜೀವ ಕೊಡುವುದರಲ್ಲಿ ಮಾತ್ರ ಮುಂದಿದ್ದಾರೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷ, ಮಂಗಳೂರಿನಲ್ಲಿ ನಾಲ್ಕು ವರ್ಷಗಳ ಹಿಂದೆ ಕೊಲೆಯಾಗಿದ್ದ ದೀಪಕ್ ರಾವ್ ನಮ್ಮ ಸಮಾಜದ ಕಾರ್ಯಕರ್ತರು. ಅವರ ಜೀವ ಮುಂದಿಟ್ಟು ಕೆಲವರು ರಾಜಕೀಯ ಹಾದಿ ಕಂಡುಕೊಂಡಿದ್ದಾರೆ ಎಂದರು. ಈ ಬಾರಿಯ ಚುನಾವಣೆಯಲ್ಲಿ ನಾವು ನಮ್ಮ ಶಕ್ತಿಯನ್ನು ತೋರಿಸಲಿದ್ದೇವೆ ಎಂದವರು ಹೇಳಿದರು. ಸುದ್ದಿಗೋಷ್ಟಿಯಲ್ಲಿ ತಾರಾ ಸಿಂಗ್, ಬೈಂದೂರು ಶಾಸಕ ಲಕ್ಷ್ಮೀನಾರಾಯಣ ಸೇರಿದಂತೆ ಹಲವು ಜಿಲ್ಲೆಗಳ ಮುಖಂಡರು ಉಪಸ್ಥಿತರಿದ್ದರು.

Kshatriya Samaj Federation president Uday Singh has urged political parties to give at least 50 seats to their community in the next assembly elections as the number of kshatriya samaj voters in the state is one-and-a-half crore.