ಹುಲಿಯನ್ನು ಗೂಡಿಗಟ್ಟಿದ್ದಾರೆ, ಬಂಡೆಯನ್ನು ಪುಡಿ ಮಾಡಿದ್ದಾರೆ, ಸಿದ್ದಣ್ಣ ಈಗೆಲ್ಲಿದ್ದಾರೆ ?

11-11-20 12:23 pm       Mangalore Correspondent   ಕರ್ನಾಟಕ

ಇಡೀ ದೇಶದಲ್ಲಿ ಉಪ ಚುನಾವಣೆ ಮತ್ತು ಬಿಹಾರ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಗೆ ಜನ ಮತ ನೀಡಿದ್ದಾರೆ. ತುಮಕೂರಿನ ಶಿರಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆದ್ದು ಇತಿಹಾಸ ಸೃಷ್ಟಿಸಿದೆ.

ಮಂಗಳೂರು, ನವೆಂಬರ್ 11: ಇಡೀ ದೇಶದಲ್ಲಿ ಉಪ ಚುನಾವಣೆ ಮತ್ತು ಬಿಹಾರ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಗೆ ಜನ ಮತ ನೀಡಿದ್ದಾರೆ. ತುಮಕೂರಿನ ಶಿರಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆದ್ದು ಇತಿಹಾಸ ಸೃಷ್ಟಿಸಿದೆ. ಮೋದಿ ಅಲೆ ಇಲ್ಲ , ಮುಂದಿನ ಸಿಎಂ ನಾನೇ ಎಂದು ಹೇಳಿಕೊಂಡು ತಿರುಗಾಡಿದ್ದ ಸಿದ್ದರಾಮಯ್ಯಗೆ ಜನ ಪಾಠ ಕಲಿಸಿದ್ದಾರೆ. ಬಂಡೆಯನ್ನು ಜನರೇ ಸೇರಿ ಪುಡಿಗಟ್ಟಿದ್ದಾರೆ....  

ಹೀಗೆಂದು, ಉಪ ಚುನಾವಣೆ ಮತ್ತು ಬಿಹಾರದಲ್ಲಿ ಬಿಜೆಪಿ ಗೆಲುವಿನ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಾಂಗ್ರೆಸ್ ವಿರುದ್ಧ ವೀರಾವೇಶದಿಂದ ವಾಗ್ಬಾಣಗಳನ್ನು ಬಿಟ್ಟಿದ್ದಾರೆ.

ದೇಶದಲ್ಲಿ ಮೋದಿ, ಅಮಿತ್ ಷಾ, ಜೆ.ಪಿ.ನಡ್ಡಾ ತಂಡದ ಪರವಾಗಿ ಜನರು ಮತ ನೀಡಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ಆಡಳಿತಕ್ಕೆ ಜನ ಬೆಂಬಲ ವ್ಯಕ್ತಪಡಿಸಿದ್ದಾರೆ. ನೆರೆ, ಪ್ರವಾಹ, ಕೊರೊನಾ ಅಡೆತಡೆಗಳ ನಡುವೆ ಯಡಿಯೂರಪ್ಪ ಯಶಸ್ವಿ ಆಡಳಿತ ನೀಡಿರುವುದಕ್ಕೆ ಜನ ಮತ ನೀಡಿದ್ದಾರೆ. ಈ ಮೂಲಕ, ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಆರೋಪಿಸಿದ್ದ ಭ್ರಷ್ಟಾಚಾರದ ಆರೋಪಗಳು ಸುಳ್ಳೆಂದು ಸಾಬೀತಾಗಿವೆ ಎಂದು ಹೇಳಿದರು.

ಶಿರಾದಲ್ಲಿ ಮೊದಲ ಬಾರಿಗೆ ಕಮಲ ಅರಳಲು ರವಿಕುಮಾರ್, ವಿಜಯೇಂದ್ರ, ಪ್ರತಾಪಸಿಂಹ, ಕಾರಜೋಳ ಎಲ್ಲರು ಸೇರಿ ಶ್ರಮಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ವಿರುದ್ಧ ಎದ್ದಿದ್ದ ಆಕ್ರೋಶ ಬಿಜೆಪಿಗೆ ವರವಾಗಿ ಪರಿಣಮಿಸಿದೆ.  ಕಾಂಗ್ರೆಸನ್ನು ಭ್ರಷ್ಟ ಪಕ್ಷವೆಂದು ತೀರ್ಮಾನಿಸಿ ಜನರು ಕಿತ್ತೆಸೆದಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಜಾತಿ ಆಧಾರದಲ್ಲಿ ವಿಂಗಡಿಸಿ ಮತ ಕೇಳಲು ಹೋದ ಕಾಂಗ್ರೆಸಿಗೆ ಜನರು ಸೋಲಿನ ರುಚಿ ಉಣಿಸಿದ್ದಾರೆ. ಚುನಾವಣೆ ವೇಳೆ ಹುಲಿಯಾ,  ಬಂಡೆಗಳನ್ನು ಘೋಷಣೆ ಮಾಡಿದ್ದರು. ಈಗ ಜನರೇ ಹುಲಿಯನ್ನು ಗೂಡಿಗಟ್ಟಿದರೆ, ಬಂಡೆಯನ್ನು ಪುಡಿ ಮಾಡಿದ್ದಾರೆ. ಅಲ್ಲದೆ, ಯಡಿಯೂರಪ್ಪ ಸರಕಾರ ಇನ್ನೂ ಎರಡು ವರ್ಷಗಳಿದ್ದು, ಅಲ್ಲಿವರೆಗೂ ಹಾಗೆಯೇ ಕೂತಿರುವಂತೆ ಜನರು ಸೂಚನೆ ನೀಡಿದ್ದಾರೆ ಎಂದು ನಳಿನ್ ಕುಮಾರ್ ಹೇಳಿದರು.

ಸಿದ್ದರಾಮಯ್ಯ ಕೇಳ್ತಾ ಇದ್ದರು, ಎಲ್ಲಿದೆ ಮೋದಿ ಅಲೆ ಎಂದು. ಚುನಾವಣೆ ಫಲಿತಾಂಶ ಅವರ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದೆ. ಈಗ ನಾವು ಕೇಳುತ್ತಿದ್ದೇವೆ, ಸಿದ್ದರಾಮಯ್ಯರ ಗೂಡು ಈಗ ಎಲ್ಲಿದೆ ? ಚಾಮುಂಡೇಶ್ವರಿಯಿಂದ ಜನ ಓಡಿಸಿದ್ದಾರೆ, ಹೀಗಾಗಿ ಸಿದ್ದಣ್ಣನಿಗೆ ಎಲ್ಲೋ ಕೂರುವ ಸ್ಥಿತಿ ಎದುರಾಗಿದೆ. ಇವರದೇ ಶಿಷ್ಯ ಜಮೀರ್ ಮುಂದಿನ ಸಿಎಂ ಸಿದ್ದರಾಮಯ್ಯ ಎಂದಿದ್ದರು. ಸಿಎಂ ಆಗುವ ಆಸೆಯಲ್ಲಿ ತಿರುಗಾಡಿದ ಸಿದ್ದಣ್ಣ ಈಗೆಲ್ಲಿದ್ದಾರೆ ಎಂದು ಪ್ರಶ್ನಿಸಿದ ನಳಿನ್ ಕುಮಾರ್, ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ. ಜನ ಮತ ನೀಡಲಿದ್ದಾರೆ ಎಂದರು.

ಗಲಭೆ ಆರೋಪಿಗೆ ಕಾಂಗ್ರೆಸ್ ರಕ್ಷಣೆ

ಇದೇ ವೇಳೆ, ಕೆಜೆ ಹಳ್ಳಿ ಗಲಭೆ ಬಗ್ಗೆ ಪ್ರಸ್ತಾಪಿಸಿದ ನಳಿನ್ ಕುಮಾರ್, ಗಲಭೆಗೆ ಕಾಂಗ್ರೆಸ್ ಕಾರಣವೆಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಎಸ್ಡಿಪಿಐ ಜೊತೆ ಸೇರಿ ಗಲಭೆ ನಡೆಸಿದ್ದಾರೆ. ಪ್ರಮುಖ ಆರೋಪಿ ಸಂಪತ್ ರಾಜ್ ಪೊಲೀಸರು ಹುಡುಕಾಟದಲ್ಲಿದ್ದಾರೆ. ಆದರೆ, ಆರೋಪಿ ಕಾಂಗ್ರೆಸ್ ಮುಖಂಡ ಸಂಪತ್ ರಾಜ್ ನನ್ನು ಕಾಂಗ್ರೆಸ್ ಅಧ್ಯಕ್ಷರೇ ಅಡಗಿಸಿಟ್ಟಿದ್ದಾರೆ. ಪೊಲೀಸರು ಆರೋಪಿಯೆಂದು ಗುರುತಿಸಲ್ಪಟ್ಟ ವ್ಯಕ್ತಿಯನ್ನು ಕಾಂಗ್ರೆಸ್ ರಕ್ಷಣೆ ಮಾಡುತ್ತಿದೆ. ಒಬ್ಬ ದಲಿತ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯ ಮನೆಗೆ ಬೆಂಕಿ ಬಿದ್ದಾಗ ರಕ್ಷಣೆ ಮಾಡಲಾಗದ ಕಾಂಗ್ರೆಸ್, ಈಗ ತಮ್ಮದೇ ಶಾಸಕರ ಮನೆಗೆ ಬೆಂಕಿ ಹಾಕಿದವನ ರಕ್ಷಣೆಗೆ ನಿಂತಿದೆ. ಗಲಭೆಯಲ್ಲಿ ಎಸ್ಡಿಪಿಐ ಜೊತೆ ಸೇರಿ ಕಾಂಗ್ರೆಸ್ ಬೆಂಕಿ ಹಾಕುವ ಕೆಲಸ ಮಾಡಿದ್ದು ಜನರಿಗೆ ಗೊತ್ತಾಗಿದೆ.  

ಎಸ್ಡಿಪಿಐ ಜೊತೆ ಸಂಬಂಧ ಇಲ್ಲ. ಅದನ್ನು ನಿಷೇಧ ಮಾಡಬೇಕು ಎಂದು ಹೇಳಿಕೊಂಡಿದ್ದ ಕಾಂಗ್ರೆಸ್, ಈಗ ಬಂಟ್ವಾಳದಲ್ಲಿ ಅದೇ ಎಸ್ಡಿಪಿಐ ಜೊತೆ ಸೇರಿ ಆಡಳಿತಕ್ಕೆ ಮುಂದಾಗಿದೆ. ಕಾಂಗ್ರೆಸ್ ನಾಯಕರು ಈಗ ಏನು ಹೇಳುತ್ತಾರೆ. ಇದೇ ರೀತಿ ಮುಂದುವರಿದರೆ ನಿಮ್ಮನ್ನು ಜನರು ಅರಬಿ ಸಮುದ್ರಕ್ಕೆ ಎಸೆಯಲಿದ್ದಾರೆ ಎಂದು ನಳಿನ್ ಕುಮಾರ್ ವ್ಯಂಗ್ಯವಾಗಿ ತಿವಿದಿದ್ದಾರೆ.  

Karnataka BJP state president Naleen Kumar Kateel has Mocked Congress over its ultimate defeat in the Byelections held in both RR Nagar and Sira.