ಹೈಕೋರ್ಟ್ ವಿಚಾರಣೆಗೆ ಹಾಜರಾಗದ ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ 5 ಲಕ್ಷ ದಂಡ !

18-11-20 05:13 pm       Bangalore Correspondent   ಕರ್ನಾಟಕ

ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಗೆ ನ್ಯಾಯಾಧೀಶರು 5 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.

ಬೆಂಗಳೂರು, ನವೆಂಬರ್ 18: ಚುನಾವಣಾ ತಕರಾರು ಅರ್ಜಿ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಗೆ ನ್ಯಾಯಾಧೀಶರು 5 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.

ಖಂಡ್ರೆ ವಿರುದ್ಧ ಬೀದರ್ ಜಿಲ್ಲೆಯ ಭಾಲ್ಕಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಿ.ಕೆ.ಸಿದ್ರಾಮ ಎಂಬವರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಚುನಾವಣೆಯಲ್ಲಿ ವ್ಯಾಪಕ ಅಕ್ರಮ ನಡೆಸಿದ್ದಾರೆ, ಅಲ್ಲದೆ, ಚುನಾವಣಾ ಆಯೋಗಕ್ಕೆ ಆಸ್ತಿ ಘೋಷಣೆ ಮಾಡಿಕೊಂಡಿಲ್ಲ ಎಂದು ದೂರು ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಖಂಡ್ರೆ ಶಾಸಕ ಸ್ಥಾನವನ್ನು ಅನರ್ಹಗೊಳಿಸಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಿದ್ದರು.

ಕಳೆದ ಬಾರಿ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಈಶ್ವರ್ ಖಂಡ್ರೆಗೆ ನೋಟೀಸ್ ಜಾರಿ ಮಾಡಿತ್ತು. ಆಬಳಿಕ ಹಲವು ಬಾರಿ ಅರ್ಜಿ ವಿಚಾರಣೆಗೆ ಬಂದರೂ, ಖಂಡ್ರೆ ಕೋರ್ಟಿಗೆ ಹಾಜರಾಗಿರಲಿಲ್ಲ. ಇದರಿಂದ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಇದಕ್ಕೆ ಖಂಡ್ರೆ ಪರ ವಕೀಲರು, ತನ್ನ ಪಿಎಗೆ ಮರೆವು ರೋಗ ಇದೆ, ಹಾಗಾಗಿ ಕೇಸ್ ಬಗ್ಗೆ ಗಮನಕ್ಕೆ ಬಂದಿರಲಿಲ್ಲ ಖಂಡ್ರೆ ಪರವಾಗಿ ಪ್ರಮಾಣ ಪತ್ರ ಹಾಜರುಪಡಿಸಿದ್ದರು.

ಇಂದು ಮತ್ತೆ ಅದೇ ಪ್ರಕರಣ ವಿಚಾರಣೆಗೆ ಬಂದಿದ್ದು, ನ್ಯಾಯಾಧೀಶರು ಗರಂ ಆಗಿದ್ದಾರೆ. ಅಲ್ಲದೆ, ಕೋರ್ಟಿಗೆ ಹಾಜರಾಗದೆ ಅಗೌರವ ತೋರಿದ ಶಾಸಕ ಈಶ್ವರ ಖಂಡ್ರೆಗೆ 5 ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡದ ಮೊತ್ತವನ್ನು ಸಿಎಂ ಕೊರೊನಾ ಪರಿಹಾರ ನಿಧಿಗೆ ಪಾವತಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ. 

High Court has fined Rs 5 lakhs to Kpcc Working President Eshwar Khandre for not attending the court on the dates of case.